19th April 2024
Share

TUMAKURU:SHAKTHIPEETA FOUNDATION

  ನಾನು ಮೋದಿಯವರನ್ನು 2001 ರಿಂದ ಅವರು ಗುಜರಾತ್ ಮುಖ್ಯಮಂತ್ರಿಯವರಾಗಿದ್ದಾಗಲಿಂದಲೂ ಗಮನಿಸುತ್ತದ್ದೇನೆ. ಯಾವುದೇ ಯೋಜನೆ ಮಾಡಲಿ ಅಬ್ಬರ ಆರ್ಭಟ ಒಂದು ವಿಶೇಷತೆ ಎದ್ದು ಕಾಣುತ್ತಿತ್ತು. ಪ್ರಧಾನಿಯವರಾದ ಮೇಲೂ ಅದು ಮುಂದುವರೆದಿತ್ತು, ಗುಜರಾತ್ ಅಲ್ಲ ಇದು ಭಾರತ ದೇಶ, ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂದು ವಿರೋಧಿಗಳು ಬೊಬ್ಬೆ ಹೊಡೆದರೂ ಮೋದಿಯವರು ಮಾತ್ರ ತಮ್ಮ ಸ್ಟೈಲ್ ಬದಲಾಯಿಸಲಿಲ್ಲ.

ಇವರದು ಒಂದು ತರಹ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ರೀತಿ ಡಿಕ್ಟೆಟರ್ ಶಿಪ್ ಎಂದು ಹಲವಾರು ಜನರು ಬರೆದಿದ್ದು ಉಂಟು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದೇಶದ ಸಮಗ್ರ ಅಭಿವೃದ್ಧಿಗಾಗಿ ಒ<ದು ಕ್ರಾಂತಿಯನ್ನೇ ಮಾಡಿದ್ದಾರೆ ಎಂಬುದನ್ನು ಖಾಸಗಿಯಾಗಿ ಅವರ ವಿರೋಧಿಗಳು ಒಪ್ಪಲೇ ಬೇಕು?

ಕೋರೊನಾ ಮೊದಲನೆ ಅಲೆಯಲ್ಲಿ ನೇರವಾಗಿ ಮೋದಿಯವರೇ ಆಖಾಡಕ್ಕೆ ಇಳಿದರು, ದೇಶವಾಸಿಗಳ ಕೈಯಿಂದ ತಪ್ಪಾಳೆ ಬಡಿಸಿದರು, ದೀಪ ಹಚ್ಚಿಸಿದರು, ಜನತಾ ಕಫ್ರ್ಯೂ ಜಾರಿಗೊಳಿಸಿದರು, ಲಾಕ್ ಡೌನ್ ಮಾಡಿಸಿದರು, ವಿವಿಧ ಪ್ಯಾಕೇಜ್ ಘೋಶಿಸಿದರು ಪ್ರತಿಯೊಂದರಲ್ಲೂ ಮೋದಿಯವರ ಅಬ್ಬರ ಎದ್ದು ಕಾಣುತ್ತಿತ್ತು. ಆನರು ಸಹ ಖುಷಿಯಂದಲೇ ಸ್ವಾಗತಿಸಿದರು.

ಅಷ್ಟೇ ವೇಗವಾಗಿ ಲಸಿಕೆ ಹೊರತಂದರು ತಾವೇ ಖುದ್ದಾಗಿ ಲಸಿಕೆ ತಯಾರು ಮಾಡುವ ಕಂಪನಿಗೆ ಮಿಂಚಿನ ಸಂಚಾರ ಮಾಡಿದರು, ದೇಶ ವಿದೇಶಗಳಿಗೂ ಹಂಚಿದರು. ಬಹುಷಃ ಕೊರೊನಾ ಎರಡನೇ ಅಲೆ ಇಷ್ಟು ಕ್ರೂರಿಯಾಗಿ ಇರಲಿದೆ ಎಂಬುದು ಅವರಿಗೂ ಅಂದಾಜಿಗೆ ಸಿಕ್ಕಿರಲಿಕ್ಕಿಲ್ಲ.

ಕೊರೊನಾ ಪ್ರಕೃತಿ ನಿಯಮ, ಯಾರ ಕೈಲಿ ಇರುವುದಿಲ್ಲ ಎದೆಗಾರಿಕೆಯಿಂದ ಎದುರಿಸ ಬೇಕು ಅಷ್ಟೆ. ಆದರೇ ಪ್ರಧಾನಿಯವರು ಎರಡನೇ ಅಲೆ ಆರಂಭವಾದಗಿನಿಂದ ಒಂದು ರೀತಿ ಮೌನವಾಗಿದ್ದಾರೆ, ಇವರಿಗೇನಾಗಿದೆ, ಯಾರಾದರೂ ಮಾಠ ಮಾಡಿಸಿದ್ದಾರೆಯೇ ಎಂಬ ಮಾತು ಅವರ ಅಭಿಮಾನಿಗಳದ್ದಾಗಿದೆ,

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಭಾರತದ ಪ್ರಧಾನಿಗಳು, ಅವರು ಒಂದು ಎನ್.ಡಿ.ಎ ಗುಂಪಿನ ಅಥವಾ ಬಿಜೆಪಿಯ ಪ್ರಧಾನಿ ಅಲ್ಲ. ವಿದೇಶಗಳ ಪಿತೂರಿ, ವಿದೇಶಿ ಔಷಧಿ ಕಂಪನಿಗಳ ಪಿತೂರಿ, ಭ್ರಷ್ಟರ ಪಿತೂರಿ, ಹಿತಶತ್ರುಗಳು ಷಡ್ಯಂತ್ರ ಇವೆಲ್ಲಾ ಮಾಮೂಲಿ ಇವುಗಳಿಗೆ ಅವರು ಎಂದು ತಲೆಕೆಡಿಸಿಕೊಂಡವರಲ್ಲ.

ದೇಶವಾಸಿಗಳು ಸಹ ಪ್ರಧಾನಿಯವರ ಮೇಲೆ ಯಾರು ಏನು ಹೇಳಿದರೂ ನಂಬುವ ಸ್ಥಿತಿಯಲ್ಲಿ ಇಲ್ಲ. ದಲಿತ ಕಾಲೋನಿಯ ಜನರು ಸಹ ಮೋದಿಯವರು ಇಲ್ಲದಿದ್ದರೇ ಕೊರೊನಾ ನಿಭಾಯಿಸಲು ಸಾದ್ಯಾವಾಗುತ್ತಿರಲಿಲ್ಲ ಎಂಬ ಮಾತು ಆಡುತ್ತಿದ್ದಾರೆ.

ಆದರೇ ಕೊರೊನಾ ಎರಡನೇ ಅಲೆ ನಂತರ ಅವರ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಆರ್.ಎಸ್.ಎಸ್ ಸ್ವಯಂ ಸೇವಕರು ಸಹ ಒಳಗೊಳಗೆ ಮಾತನಾಡುತ್ತಿರುವುದು. ನಮ್ಮ ಮೋದಿಯವರಿಗೆ ಏನಾಗಿದೆ, ಏಕೆ ಒಂದು ತರ ಗರಬಡಿದಂತಿದ್ದಾರೆ,  ರಾಜ್ಯಗಳ ಮೇಲೆ ಬಿಟ್ಟು ಸುಮ್ಮನಿರುವಂತಿದೆ ಎಂಬ ಅನುಮಾನ ಬಂದಿದೆ. ಆದರೂ ಇನ್ನೂ ಅವರ ಬಗ್ಗೆ ಆಶಾಭಾವನೆಯಿದೆ, ಮೂರನೇ ಅಲೆಯಲ್ಲಾ ನಾಲ್ಕನೆ ಅಲೆ ಬಂದರೂ ನಿಭಾಯಿಸುತ್ತಾರೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ.

ಮೋದಿಯವರಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಅಥವಾ ಅವರೇ ರಚಿಸಿರುವ ಲೋಸಭಾ ಸದಸ್ಯರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಅಥವಾ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಗಳು ಆಥವಾ ಬಿಜೆಪಿ ಪಕ್ಷ ಈ ಕೆಳಕಂಡ ಅಂಶಗಳ ಬಗ್ಗೆ ಜನತೆಗೆ ಉತ್ತರ ನೀಡಲು ಸಾಧ್ಯವಿಲ್ಲವೇ? ಉತ್ತರ ನೀಡದಿದ್ದರೇ ಬಹು ದೊಡ್ಡ ಹೊಡೆತ ಬೀಳಲಿದೆ.

ನೀವೇ ಜನಪ್ರಿಯಗೊಳಿಸಿದ ಸೋಶಿಯಲ್ ಮೀಡಿಯಾಗಳ ಅಬ್ಬರ ಜನರಿಗೆ ಈ ಭಾವನೆ ಬರಲು ಕಾರಣವಾಗಿದೆ, ಜೊತೆಗೆ ಸಾಲು ಸಾಲು ಹೆಣಗಳ ವಾಸ್ತವಿಕತೆಯೂ ಹೌದಲ್ಲವೇ ಎನ್ನುವ ರೀತಿ ಮಾಡಿದೆ.

1.18 ರಿಂದ 44 ವರ್ಷದ ಒಳಗಿನವರು ಬಹುತೇಕರು ಬಿಜೆಪಿಗೆ ಓಟು ಹಾಕಿದ್ದಾರೆ, ಇವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ಕೊಡಲಿಲ್ಲಾ ಏಕೆ?

2.ಹಾದಿ ಬೀದಿಯಲ್ಲಿ ಹೆಣಗಳು ಉರುಳಿದರೂ ಪಿಎಂ ಫಂಡ್ ನಿಂದ ಆಕ್ಸಿಜನ್ ಘಟಕ ಸ್ಥಾಪಿಸಲು ಹಣ ಮಂಜೂರು ಮಾಡಿದ್ದರೂ ರಾಜ್ಯ ಸರ್ಕಾರ ಏಕೆ ಆಕ್ಸಿಜನ್ ಘಟಕ ಸ್ಥಾಪಿಸಿಲ್ಲ. ಆರೋಗ್ಯ ಸಚಿವರಾದ ಶ್ರೀ ಸುಧಾಕರ್‍ರವರೇ ಆಕ್ಸಿಜನ್ ಕೃತಕ ಆಭಾವ ಸøಷ್ಟಿಸಿದ್ದಾರೆ ಎಂದು ಹೇಳಿಕೆ ನೀಡಿದರೇ, ಕೃತಕ ಆಭಾವದ ಹಿಂದೆ ಇರುವವರು ಯಾರು?

3.ಹೈಕೋರ್ಟ್ ಆದೇಶ ನೀಡುವವರಿಗೂ ಖಾಸಗಿ ಆಸ್ಪತ್ರೆಗಳ ಬೆಡ್ ಮಾಹಿತಿ ಜನರಿಗೆ ಏಕೆ ದೊರೆಯಲಿಲ್ಲ.

4.ಆಂಬುಲೆನ್ಸ್ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ?

5.ಸರ್ಕಾರಿ ಆಸ್ಪತ್ರೆಗಳ ಬೆಡ್ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ?

6.ವಿದ್ಯುತ್ ಚಿತಾಗಾರ ಸಾಮಾಥ್ರ್ಯ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ?

7.ರೆಮ್ಡಿಸಿವಿರ್ ಇಂಜಕ್ಷನ್ ಹೆಚ್ಚಿಗೆ ಸರಬರಾಜು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ?

8.ಲಸಿಕೆ ಖಾಲಿ ಎಂದು ಏಕೆ ನಾಮಫಲಕ ಹಾಕುತ್ತಾರೆ ಲಸಿಕೆ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ?

9. ಕೊರೊನಾ 3 ನೇ ಅಲೆ ವೇಳೆಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ನರ್ಸ್‍ಗಳ ಸ್ಥಿತಿಗತಿ ಏನಾಗಲಿದೆ. ಬದಲಿ ವ್ಯವಸ್ಥೆ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ನೀಡುವವರೆಗೂ ಸರ್ಕಾರಗಳ ಗಮನ ಹರಿಸಲಿಲ್ಲ ಏಕೆ?

10.ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅಥವಾ ಯಾವುದೇ ಇನ್ಸೂರೆನ್ಸ್ ಅಥವಾ ಯಾವುದೇ ಯೋಜನೆಯಡಿಯಲ್ಲಿ, ಒಂದು ವರ್ಷ ಕಾಲ ಅಥವಾ ಕೊರೊನಾ ಅಲೆ ಕಡಿಮೆ ಆಗುವವರೆಗೂ ಎಲ್ಲಾ ಕಾಯಿಲೆಗಳಿಗೂ ಉಚಿತವಾಗಿ ಸೇವೆ ಸಲ್ಲಿಸಲು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಹಣ ಇಲ್ಲವೇ? ಕೊನೇ ಪಕ್ಷ ಯಾವುದೇ ಕಠಿಣ ಷರತ್ತುಗಳು ಇಲ್ಲದೆ ಅರೋಗ್ಯ ಸಾಲ ನೀಡಲು ಯೋಜನೆ ರೂಪಿಸ ಬಹುದಲ್ಲವೇ?

 ಕೇಂದ್ರ ಸರ್ಕಾರ ಕೊರೊನಾಗೆ ಎಷ್ಟು ಖರ್ಚು ಮಾಡಿದೆ, ರಾಜ್ಯ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬ ಮಾಹಿತಿಯನ್ನು ಮತದಾರ ಪ್ರಭುಗಳಿಗೆ ನೀಡಬೇಕಲ್ಲವೇ? ಪಾರದರ್ಶಕವಾಗಿರ ಬೇಕಲ್ಲವೇ, ಕೊರೊನಾ ಬಂದಿರುವುದನ್ನು ತಡೆಯಲು ಸರ್ಕಾರಗಳ ಕೈಲಿ ಸಾಧ್ಯಾವಿಲ್ಲ, ಆದರೂ ಬಂದ ನಂತರ ಪಟ್ಟಿರುವ ಶ್ರಮಗಳ ಮಾಹಿತಿ ನೀಡಿ ವ್ಯಾಪಕ ಪ್ರಚಾರ ಮಾಡಬೇಕಲ್ಲವೇ? ಜನರಿಗೆ ನಮ್ಮ ಕೈಬಿಟ್ಟಿದ್ದಾರೆಯೇ ಎಂಬ ಭಾವನೆ ಬರಬಾರದಲ್ಲವೇ?

ಮೋದಿಯವರು ಏನು ಮಾಡಿಯೇ ಇಲ್ಲ ಎಂದು ವಿರೋಧಿಗಳು ಅಬ್ಬರಿಸಿದಾಗ, ಪಕ್ಷದ ಕಾರ್ಯಕರ್ತರು ಇದು ಯಾರು ಮಾಡಿದ್ದು ಎಂದು ಹೇಳುವ ಮಾಹಿತಿ ತಾಕತ್ತು ಬೇಕಲ್ಲವೇ?  ಪ್ರತಿಯೊಬ್ಬ ರೈತರ ಖಾತೆಗೆ ಹಣ ಹಾಕುವ ಡೇಟಾ ಹೊಂದಿರುವ ಕೇಂದ್ರ ಸರ್ಕಾರ ಪ್ರತಿಯೊಬ್ಬ ಕೊರೊನಾ ಸೋಕಿತರಿಗೆ ಇಷ್ಟು ಹಣ ಖರ್ಚು ಮಾಡಿದ್ದೇವೆ ಅಥವಾ ಒಟ್ಟಾಗಿ ರಾಜ್ಯಕ್ಕೆ ಇಂತಿಂತ ಯೋಜನೆ ರೂಪಿಸಲು ಇಷ್ಟು ಹಣ ನೀಡಿದ್ದೇವೆ ಎಂಬ ಮಾಹಿತಿ ನೀಡುವವರು ಯಾರು?

ಅದೇನೆ ಇರಲಿ ಮೋದಿಯವರ ತಮ್ಮ ಮಾಮೂಲಿ ಆರ್ಭಟದೊಂದಿಗೆ ದೇಶವಾಸಿಗಳ ಆತ್ಮಸ್ಥೈರ್ಯ ತುಂಬಲೇ ಬೇಕಿದೆ. ಚಿಕಿತ್ಸೆಗಿಂತ ಒಳ್ಳೆಯ ಮಾತುಗಳು ಸಹ ರೋಗಿಯ ಮನಸ್ಸುನ್ನು ಖುಷಿ ಪಡಿಸುತ್ತವೆ. ಖಾಸಗಿ ಆಸ್ಪತ್ರೆ ಖರ್ಚಿಗೆ ಹೆದರಿ ಆಸ್ಪತ್ರೆಗೆ ಹೋಗದೆ ಎಷ್ಟೋ ಜನ  ಮನೆಯಲ್ಲಿಯೇ ಇದ್ದು ಕೊನೆಗೆ ಆಸ್ಪತ್ರೆಗೆ ದಾಖಲಾಗುತ್ತಾರೆ, ಒಂದೆರಡು ದಿನದಲ್ಲಿ ಸಾಯುತ್ತಾರೆ. 

ಕೊರೊನಾ ಎಲ್ಲಾ ಉಚಿತ ಎಂಬ ಘೋಷಣೆ ಮಾಡಿ, ಗ್ರಾಮ ಮಟ್ಟದಿಂದಲೂ ಸಮುದಾಯ ಭವನಗಳಲ್ಲಿ, ಹೋಟೆಲ್‍ಗಳಲ್ಲಿ, ರೆಸಾರ್ಟ್‍ಗಳಲ್ಲಿ, ಹಾಸ್ಟೆಲ್‍ಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ದೇವಾಲಯ, ಚರ್ಚ್ ಮಸೀದಿಗಳಲ್ಲಿ ಹೀಗೆ ಎಲ್ಲಿ ಜಾಗವಿದೆಯೋ ಅಲ್ಲೆಲ್ಲಾ ತಾತ್ಕಾಲಿಕ ಬೆಡ್ ಹಾಕಿ, ಮೊಬೈಲ್ ಆಸ್ಪತ್ರೆಗಳನ್ನು ಮಾಡಿ, ಅಲ್ಲಿಗೆ ಹೋಗಿ ಟ್ರಿಟ್ ಮೆಂಟ್ ಕೊಡಿಸಲಿ, ಜೊತೆಗೆ ಮೊಬೈಲ್ ವಿದ್ಯುತ್ ಚಿತಾಗಾರ ಮಾಡಲಿ, ಯಾವುದಕ್ಕೂ ಕೊರತೆಯಿಲ್ಲ ಎಂಬ ವಾತಾವಾರಣ ಸೃಷ್ಟಿ ಮಾಡಲೇ ಬೇಕು.

ಇಷ್ಟನ್ನು ಯಾವುದೇ ಸರ್ಕಾರ ಇದ್ದರೂ ಮಾಡಬೇಕಲ್ಲವೇ? ಜನರು ಬಯಸುವುದರಲ್ಲಿ ತಪ್ಪೇನಿದೆ?  ಅದರ ಮೇಲೆ ದೇವರ ಆಟ ಎನ್ನುವುದು ಜನ ಸಾಮಾನ್ಯರ ಮಾತು. ಸತ್ಯ ಕಟುವಾಗಿರುತ್ತದೆ, ಬೇಗ ಸಿಟ್ಟು ತರಬಹುದು, ಅದರ ಮೇಲೆ ನಿಮ್ಮ ಇಷ್ಟ. ನನ್ನ ತಲೆಯಲ್ಲಿ ಇರುವುದನ್ನು ನಾನು ಹೇಳಿದ್ದೇನೆ.