27th July 2024
Share

TUMAKURU:SHAKTHIPEETA FOUNDATION

ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ ರವರು, ನಮ್ಮ ರಾಜ್ಯಕ್ಕೆ ಅನುದಾನ ಕಡಿಮೆ ಆಗಿದೆ ಎಂದು ಹೇಳುವಾಗ, ದಕ್ಷಿಣ ರಾಜ್ಯಗಳ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂದು ಹೇಳಿರುವುದು ತಪ್ಪು.

ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ನಮ್ಮ ರಾಜ್ಯಕ್ಕೆ ಅನುದಾನ ಕಡಿಮೆ ಆಗಿದೆ ಎಂಬ ಕೂಗು ಸಾಮಾನ್ಯವಾಗಿ ಕೇಳಿಬರುತ್ತದೆ.

ನನಗೆ ತಿಳಿದಿರುವ ಪ್ರಕಾರ 5 ವರ್ಷಕ್ಕೊಮ್ಮೆ ರಚನೆಯಾಗುವ  ಫೈನಾನ್ಸ್ ಕಮಿಷನ್, ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುವ ರೂಪುರೇಷೆ ಸಿದ್ಧಪಡಿಸುತ್ತಿದೆ. ಅದಕ್ಕೆ ಒಂದು ಮಾನದಂಡವೂ ಇದೆ.

 ಈ ಬಗ್ಗೆ 1947 ರಿಂದ 2023 ರವರೆಗೂ, ಯಾವÀ ವರ್ಷ, ಯಾವ ರಾಜ್ಯಗಳಿಗೆ, ಯಾವ ಇಲಾಖೆಯಿಂದ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ಇಟ್ಟುಕೊಂಡು, ಅಂಕಿ ಅಂಶಗಳ ಆಧಾರದ ಮೇಲೆ ಚರ್ಚೆ ಮಾಡಿದರೆ ಅದಕ್ಕೆ ಬೆಲೆ ಬರುತ್ತದೆ.

ಬೇರೆ ರಾಜ್ಯಗಳ ಮಾತು ಆಗಿರಲಿ, ನಮ್ಮ ರಾಜ್ಯಕ್ಕೆ ಬಿಡುಗಡೆ ಆಗಿರುವ ಮಾಹಿತಿಯೂ ನಮ್ಮ ರಾಜಕಾರಣಿಗಳ ಬಳಿ ಇಲ್ಲ. ಸುಮ್ಮನೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ. ದೆಹಲಿ ವಿಶೇಷ ಪ್ರತಿನಿಧಿಗಳು, ಮುಖ್ಯ ಮಂತ್ರಿಯವರ ಆರ್ಥಿಕ ಸಲಹೆಗಾರರು ಉತ್ತರಿಸಬೇಕು.

ಹೌದು ಈಗ 16 ನೇ ಹಣಕಾಸು ಆಯೋಗ ರಚನೆಯಾಗಿದೆ, ಇಲ್ಲಿ ನಮ್ಮ ರಾಜ್ಯಕ್ಕೆ ಆಗಿರುವ ಅನುದಾನ ತಾರತಮ್ಯದ ಬಗ್ಗೆ ರಾಜ್ಯ ಸರ್ಕಾರ ಬೆಳಕು ಚೆಲ್ಲಲು ಒಳ್ಳೆಯ ಅವಕಾಶವಿದೆ. ಕೃಷಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡರು ಈ ಬಗ್ಗೆ ಒಂದು ಹೇಳಿಕೆ ನೀಡಿದ್ದರು. 

ಮುಂದಿನ ಅಧಿವೇಶನದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ಅನುದಾನ ತಾರತಮ್ಯದ ಬಗ್ಗೆ ಒಂದು ದಿವಸ ಚರ್ಚೆ ನಡೆಸಲಿ. ಇದೂವರೆಗೂ ಆಡಳಿತ ನಡೆಸಿರುವ ಎಲ್ಲಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಗಳ ತಾರತಮ್ಮದ ಬಗ್ಗೆ ಜನತೆಗೂ ಮನವರಿಕೆ ಮಾಡಲಿ.

ಡಿ.ಕೆ.ಸುರೇಶ್ ರವರು ಯಾವುದೇ ವಿಷಯವಾಗಲಿ, ಆಳವಾಗಿ ಅಧ್ಯಯನ ಮಾಡುತ್ತಾರೆ. ಪಾಲೋ ಅಪ್ ಮಾಡುತ್ತಾರೆ. ಈ ವಿಷಯವನ್ನು ರಾಜಕೀಯ ಹೇಳಿಕೆಯಾಗಿ ಪರಿಗಣಿಸದೆ, ಗಂಭೀರವಾಗಿ ಬೆಳಕು ಚೆಲ್ಲಲಿ.

ಬೆಜೆಪಿಯವರು ಮತ್ತು ಜೆಡಿಎಸ್ ನವರು ಡಿ.ಕೆ.ಸುರೇಶ್ ರವರನ್ನು ಟೀಕಿಸುವ ಜೊತೆಗೆ, ಕೇಂದ್ರ ಸರ್ಕಾರದ ಅನುದಾನಗಳ ಮಾಹಿತಿಯ ಶ್ವೇತ ಪತ್ರವನ್ನು ಬಿಡುಗಡೆ ಮಾಡಲಿ.

ಜೊತೆಗೆ ರಾಜ್ಯ ಸರ್ಕಾರ 31 ಜಿಲ್ಲೆಗಳಿಗೂ ಬಿಡುಗಡೆ ಮಾಡುವ 76 ವರ್ಷಗಳ ಅನುದಾನದ ಮಾಹಿತಿಯೂ ಇದ್ದರೆ ಒಳ್ಳೆಯದು.