19th April 2024
Share

  ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾದ ಮಾನ್ಯ ಶ್ರೀ ನಿತಿನ್ ಗಡ್ಕರಿರವರು ದೇಶದ ಎಲ್ಲಾ ಲೋಕಸಭಾ ಸದಸ್ಯರಿಗೆ ಪತ್ರ ಬರೆದು ನಿಮ್ಮ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲು ಅಜೆಂಡಾ ಸಲ್ಲಿಸಲು ಮನವಿ ಮಾಡಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಗಡ್ಕರಿ/ ರೋಡ್‌ಕರಿ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತಮಗೆ ಬರೆದ ಪತ್ರವನ್ನು ದೆಹಲಿಯಿಂದ ವಾಟ್ಸ್‌ಅಫ್ ಮೂಲಕ ಕಳುಹಿಸಿ ಅಜೆಂಡಾ ಸಿದ್ಧಪಡಿಸಲು ಅಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.

 ನನಗೆ ಪತ್ರ ನೋಡಿ ಬಹಳ ಖುಷಿಯಾಯಿತು, ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರವಾರು ಸಮಸ್ಯೆಗಳ ಬಗ್ಗೆ ಒಬ್ಬ ಕೇಂದ್ರ ಸಚಿವರು ಗಮನ ಹರಿಸುವುದು ವಿಶೇಷ.

  ಈ ಪತ್ರದ ಬಗ್ಗೆ ನಾನು ಕೆಲವರ ಬಗ್ಗೆ ಮಾತನಾಡಿದಾಗ ಕೆಲವರು ಅವರು ಪ್ರಧಾನಿಯಾಗುವ ಕನಸು ಕಂಡಿದ್ದಾರೆ ಅದಕ್ಕೆ ಈ ಕಸರತ್ತು ಅಂದರೆ, ಕೆಲವರು ನಿಜಕ್ಕೂ ಗಡ್ಕರಿರವರು ಕೆಲಸಗಾರರು ಸಚಿವರು ಎಂದರೆ ಹೀಗಿರಬೇಕು ಎಂದರು. ಅವರವ ಭಾವಕ್ಕೆ ತಕ್ಕಂತ ಉತ್ತರ ರೆಡಿ.

ತುಮಕೂರು ಲೋಕಸಭಾ ಕ್ಷೇತ್ರದ ಅಥವಾ ಜಿಲ್ಲೆಯ ರಾಷ್ಟ್ರೀಯ ಹೆದ್ಧಾರಿ ಯೋಜನೆಗಳ ಮಾಹಿತಿ ಒಂದೇ ಕಡೆ ಇರಬೇಕು. ಈ ಮಾಹಿತಿಗಳ ಸಂಗ್ರಹ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರದು ಎಂಬುದು ನನ್ನ ಭಾವನೆ.

 ನಾನು ನೇರವಾಗಿ ರಾಷ್ಟ್ರೀಯ ಹೆದ್ಧಾರಿ ವಿಭಾಗಕ್ಕೆ ಹೋಗಿ ವಿಚಾರಿಸಿದಾಗ ನಾನು ಬಯಸಿದ ಎಲ್ಲಾ ಮಾಹಿತಿ ಲಭ್ಯವಿರಲಿಲ್ಲ ಅಧಿಕಾರಿಗಳಿಗೊಂದಿಗೆ ಸಮಾಲೋಚನೆ ನಡೆಸಿದಾಗ  ಈ ಕೆಳಕಂಡ ಮಾಹಿತಿ ಸಂಗ್ರಹಿಸಿಕೊಂಡು ದಿಶಾ ಸಮಿತಿಗೆ ಹಾಜರಾಗುವುದಾಗಿ ಅಧಿಕಾರಿಗಳು ತಿಳಿಸಿದರು. ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಆದಿಕಾರಿಗಳು ಸಹ ಅವರ ಯೋಜನೆಗಳ ಮಾಹಿತಿ ಕ್ರೋಢಿಕರಿಸುವುದು ಅಗತ್ಯವಾಗಿದೆ.

ತುಮಕೂರು ಜಿಲ್ಲೆಯಲ್ಲಿರುವ ಕೀಮೀವಾರು ರಾಷ್ಟ್ರೀಯ ಹೆದ್ಧಾರಿಗಳು.

ರಾಷ್ಟ್ರೀಯ ಹೆದ್ಧಾರಿಗಳವಾರು ಪ್ರಗತಿಯಲ್ಲಿರುವ ಕಾಮಗಾರಿಗಳು.

ರಾಷ್ಟ್ರೀಯ ಹೆದ್ಧಾರಿಗಳವಾರು ನೆನೆಗುದಿಯಲ್ಲಿರುವ ಕಾಮಗಾರಿಗಳು.

ಇನ್‌ಪ್ರಿನ್ಸಿಫಲ್ ಅಪ್ರೂವಲ್ ಆಗಿರುವ ರಾಷ್ಟ್ರೀಯ ಹೆದ್ಧಾರಿಗಳು.

ಹೊಸದಾಗಿ ರಾಷ್ಟ್ರೀಯ ಹೆದ್ಧಾರಿಗಳಾಗಿ ಮೇಲ್ಧರ್ಜೆಗೇರಿಸುವ ರಸ್ತೆಗಳು.

ತುಮಕೂರು ಜಿಲ್ಲೆಯಲ್ಲಿನ ನಗರಗಳಿಗೆ ಬೈಪಾಸ್ ರಸ್ತೆಗಳು.

ತುಮಕೂರು ನಗರದ ಫೆರಿಫೆರಿಯಲ್ ರಿಂಗ್ ರಸ್ತೆ.

ತುಮಕೂರು ನಗರದ ಮಧ್ಯೆ ಭಾಗದಿಂದ ಫೆರಿಫೆರಿಯಲ್ ರಿಂಗ್‌ರಸ್ತೆಗೆ ಮತ್ತು ರಾಷ್ಟ್ರೀಯ ಹೆದ್ಧಾರಿಗಳಿಗೆ ಸಂಪರ್ಕಿಸುವ ರೇಡಿಯಲ್ ರಸ್ತೆಗಳು.

ತುಮಕೂರು ಜಿಲ್ಲೆಯ ಮೂಲಕ ಅಕ್ಕ-ಪಕ್ಕದ ರಾಜ್ಯಗಳಿಗೆ ಸಂಪರ್ಕ ಮಾಡುವ ಹೊಸ ಹೆದ್ಧಾರಿಗಳ ಪ್ರಸ್ತಾವನೆಗಳು.

ನೆಲಮಂಗಲ- ತುಮಕೂರುವರೆಗೆ ಆರು ಪಥದ ರಸ್ತೆ.

ದೇವನಹಳ್ಳಿ ವಿಮಾನ ನಿಲ್ಧಾಣದಿಂದ ದಾಬಸ್ ಪೇಟೆವರೆಗಿನ ರಸ್ತೆ ಮಾಹಿತಿ.

ಟೋಲ್ ಗೇಟ್ ಶುಲ್ಕ ಸಂಗ್ರಹದ ಕರಾರು ವಕ್ಕಾದ ಮಾಹಿತಿ.

ಕರ್ನಾಟಕ ರಾಜ್ಯದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರು, ರಾಜ್ಯದ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನು ನಕ್ಷೆ ಸಹಿತ ಕ್ರೋಢಿಕರಿಸುವುದು ಸೂಕ್ತವಾಗಿದೆ.

ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಎಸ್.ಆರ್.ಪಾಟೀಲ್ ರವರು ರಾಜ್ಯ ಮಟ್ಟದ ಯೋಜನೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ, ಅದಕ್ಕೂ ಮುನ್ನ ಈ ಮಾಹಿತಿ ಸಂಗ್ರಹ ಅವರ ಕರ್ತವ್ಯ ನೋಡೋಣ.