27th July 2024
Share

TUMAKURU:SHAKTHIPEETA FOUNDATION

 ಕರ್ನಾಟಕದಲ್ಲಿ ಚುನಾವಣೆ ಪರ್ವ ಆರಂಭವಾಗಿದೆ. ಎಲ್ಲಾ ಪಕ್ಷಗಳು ಬಾಯಿಗೆ ಬಂದ ಹಾಗೆ ಬೇರೆ ಬೇರೆ ಪಕ್ಷಗಳನ್ನು ಬೈಯುವ ಕೆಲಸ ಜೋರಾಗಿ ನಡೆಯುತ್ತಿದೆ. ಇದೊಂದು ಮತದಾರರಿಗೆ ಮನರಂಜನೆಯೂ ಹೌದು, ಜೊತೆಗೆ ಎಲ್ಲರ ತಪ್ಪುಗಳ ಬಗ್ಗೆ ಮಾಹಿತಿಯೂ ಸಿಗಲಿದೆ. ಕೆಲವು ಬೋಗಸ್ ಸಹ ಇರಬಹುದು. ಅದೇನೆ ಇರಲಿ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಇರಬೇಕು.

‘ಇಂಡಿಯಾ @ 100’ ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ರಾಜ್ಯದ ಸರ್ವ ಪಕ್ಷಗಳ ಹೊಣೆಗಾರಿಕೆ ಎಂಬುದನ್ನು ಯಾವ ಪಕ್ಷಗಳು ಮರೆಯಬಾರದು. ಈ ಭಾರಿ ಎಲ್ಲಾ ಪಕ್ಷಗಳ ವಿಧಾನಸಭಾ ಚುನಾವಣಾ ಪ್ರಣಾಳಿಕೆಗಳು ಮುಂದಿನ 25 ವರ್ಷಗಳ ದಿಕ್ಸೂಚಿಯಂತಿರ ಬೇಕು.

ಬುರುಡೆ ಹೊಡೆಯಬಾರದು, ಅನಗತ್ಯ ರಾಜ್ಯದ ಸಾಲದ ಹೊರೆ ಬೀಳಬಾರದು, ಹಾಲಿ ಇರುವ ರಾಜ್ಯದ ಸಾಲ ತೀರಿಸುವ ಹೊಣೆಗಾರಿಕೆ, ತಂತ್ರವೂ ಪ್ರಣಾಳಿಕೆಯಲ್ಲಿ ಇರಬೇಕು. 1947 ರಿಂದ ಇಲ್ಲಿಯವರೆಗೂ 75 ವರ್ಷ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳ ವಿವಿಧ ಯೋಜನೆಗಳ ಆತ್ಮಾವಲೋಕನವೂ ಇರಬೇಕು.

ಇದೂವರೆಗೂ ಎಷ್ಟರ ಮಟ್ಟಿಗೆ ವೈಯಕ್ತಿಕ, ಕುಟುಂಬ ಮತ್ತು ಗ್ರಾಮಗಳ ಅಭಿವೃದ್ಧಿ ಆಗಿದೆ ಎಂಬ ಅಂಶವನ್ನು ಮತದಾರರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಡಿಜಿಟಲ್ ಯುಗ, ಸಾಮಾನ್ಯ ಜನರಿಗೂ ತಲುಪಲಿದೆ. ಪ್ರತಿ ಗ್ರಾಮವಾರು, ಕಾಲೋನಿವಾರು, ತಾಂಡಾವಾರು ಅಭಿವೃದ್ಧಿ ಮೌಲ್ಯಮಾಪನ ವರದಿಯಂತಿರಬೇಕು.

ಪ್ರತಿಯೊಂದು ರಾಜಕೀಯ ಪಕ್ಷಗಳು ಬೈಯ್ಯಲು ಒಂದು ತಂಡ, ಮತಗಳ ಕ್ರೋಡೀಕರಣಕ್ಕೆ ಒಂದು ತಂಡ, ಅಭಿವೃದ್ಧಿ ಮೌಲ್ಯಮಾಪನಕ್ಕೆ ಒಂದು ತಂಡ ರಚಿಸಬೇಕು. ಇದು ದೇಶದ ಭವಿಷ್ಯದ ದೃಷ್ಠಿಯಿಂದ ಅಗತ್ಯವಿದೆ.’

ಜ್ಞಾನಿಗಳು ತಮ್ಮ ಜ್ಞಾನದಾನ ಮಾಡುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಹಕರಿಸ ಬೇಕು. ಇಲ್ಲಿ ಎಲ್ಲಾ ಪಕ್ಷಗಳಲ್ಲೂ ಒಳ್ಳೆಯವರು ಇದ್ದಾರೆ, ಕೆಟ್ಟವರೂ ಇದ್ದಾರೆ. ಹಗಲೆಲ್ಲಾ ಬೈದಾಡಿಕೊಳ್ಳುತ್ತಾರೆ. ರಾತ್ರಿಯೆಲ್ಲಾ ಒಟ್ಟಿಗೆ ಇರುತ್ತಾರೆ. ಇದು ರಾಜಕಾರಣದಲ್ಲಿ  ಸ್ವಾಭಾವಿಕವಾಗಿದೆ.

ನಿವೃತ್ತಿ ರಾಜಕಾರಣಿಗಳು ಪಕ್ಷಾತೀತವಾಗಿ, ತಮ್ಮ ಅನುಭವಗಳನ್ನು ರಾಜ್ಯದ ಅಭಿವೃದ್ಧಿಗೆ ದಾರೆ ಎರೆಯಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕಲ್ಪಿಸುವಂತಾಗ ಬೇಕು. ಅಭಿವೃದ್ಧಿಯಲ್ಲಿ ಪಕ್ಷಬೇದ ಮರೆತು ಎಲ್ಲರೂ ಒಟ್ಟಿಗೆ ಶ್ರಮಿಸುವ ವಾತಾವಾರಣ ಸಾಧ್ಯವೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿದೆ.

‘ಅಕ್ಕ ಪಕ್ಕದ ರಾಷ್ಟ್ರಗಳ ಸ್ಥಿತಿ ನೋಡಿದರೇ ಎಲ್ಲರ ಮನಸ್ಸು ಬದಲಾಗುವ ವಾತಾವಾರಣವೂ ಇದೆ. ರಾಜ್ಯದಲ್ಲಿ ಬಲಿಷ್ಠ ನಾಯಕತ್ವ ಅಗತ್ಯವಿದೆ. ಈಗ ಇರುವ ಪರಿಸ್ಥಿತಿಯಲ್ಲಿ ಯಾವ ಪಕ್ಷದಲ್ಲೂ ಯಾವ ನಾಯಕನನ್ನು ಅವರವರ ಪಕ್ಷದವರೇ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.’

ಎಲ್ಲಾ ಪಕ್ಷಗಳು ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಶಿಸುವುದು ಒಳ್ಳೆಯದೋ, ಕೆಟ್ಟದ್ದೋ ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಾದರೂ, ಮೊದಲೇ ಮುಖ್ಯ ಮಂತ್ರಿ ಅಭ್ಯರ್ಥಿ ಘೋಶಿಸದರೆ ಯಾವುದೇ ಪಕ್ಷಕ್ಕೆ ಸೇರದ ತಟಸ್ಥ ಮತದಾರರು ಒಂದು ನಿರ್ಧಾರಕ್ಕೆ ಬರುತ್ತಾರೆ ಎಂಬ ಚರ್ಚೆಯೂ ನಡೆಯುತ್ತಿದೆ.

ಮತದಾರರು ಜಾಗೃತಿಯಾಗ ಬೇಕಿದೆ. ಜಾತಿ ರಾಜಕೀಯ, ವ್ಯಕ್ತಿ ರಾಜಕೀಯ, ಪಕ್ಷ ರಾಜಕೀಯ ಮಾಡುವವರು ಯಾರೂ ಏನೇ ಹೇಳಿದರೂ ಕೇಳುವುದಿಲ್ಲಾ. ತಟಸ್ಥ ಮಾತದಾರರು ಅಭಿವೃದ್ಧಿ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಶೇ 90 ರಿಂದ 100 ರವರೆಗೆ ಮತದಾನ ಮಾಡುವಂತಾಗಬೇಕು.

ವಿಧಾನ ಸಭೆ ಚುನಾವಣೆಗೆ ಮುನ್ನ ಮತ್ತು ಚುನಾವಣೆ ನಂತರ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಅಂಶಗಳನ್ನು ಸೇರ್ಪಡೆ ಮಾಡಿ, ಮತದಾರರ ಪಣಾಳಿಕೆ ಬಿಡುಗಡೆ ಸೂಕ್ತ ಎನಿಸುತ್ತಿದೆ. ನಿಮ್ಮ ಅನಿಸಿಕೆ?