30th April 2024
Share

ಮೋದಿಜಿ ಬರಿ ಕೈಲಿ ಬರುತ್ತಿಲ್ಲ, ಬಿಎಸ್‌ವೈ ಖಾಲಿ ಕೈಲಿ ಕಳುಹಿಸುತ್ತಿಲ್ಲ

ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು

 ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಜಿಯವರು ತುಮಕೂರಿಗೆ ಈ ಭಾರಿ ಬರಿ ಕೈಯಲ್ಲಿ ಬರುತ್ತಿಲ್ಲ, ಮಾಜಿ ಪ್ರಧಾನಿಯವರ ಹುಟ್ಟು ಹಬ್ಬದ ದಿವಸ ಅಟಲ್ ಭೂಜಲ್  ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿ ಕರ್ನಾಟಕಕ್ಕೆ ರೂ 1202.77 ಕೋಟಿ ರೂಗಳನ್ನು ಮಂಜೂರು ಮಾಡಿಕೊಂಡು ಬರುತ್ತಿದ್ದಾರೆ.

 ಹಾಗಂತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ಮೋದಿಜಿಯವರನ್ನು ಈ ಭಾರಿ ಬರಿ ಕೈಯಲ್ಲಿ ಬಿಳ್ಕೋಡುತ್ತಿಲ್ಲ ಬರೋಬರಿ ಒಂದು ಲಕ್ಷದ ತೊಂಭತ್ತಮೂರು ಲಕ್ಷ ಕೋಟಿಯ ಬೃಹತ್ ಯೋಜನೆ ಮಂಜೂರು ಮಾಡಲು ಮಹತ್ವಾಕಾಂಕ್ಷೆ ಪ್ರಸ್ತಾವನೆಯನ್ನು ಮೋದಿಜಿಯವರಿಗೆ ತುಮಕೂರಿನಲ್ಲಿಯೇ ನೀಡಲಿದ್ದಾರೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು  ಸಿದ್ಧಗಂಗಾ ಮಠಕ್ಕೆ  ಆಹ್ವಾನಿಸಿ ಶ್ರೀಗಳ ಗದ್ದುಗೆಯ ಮುಂಭಾಗ ಮನವಿಯೊಂದನ್ನು ನೀಡಿ ಮಾನ್ಯ ಪ್ರಧಾನಿಯವರಿಗೆ ಕಳುಹಿಸಲು ಬೇಡಿಕೆಯಿಟ್ಟಿದ್ದರು.

 ಅಂದೇ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಠಿಯಾಗಿ ಆಗಿನ ಸರ್ಕಾರ ಬೀಳುವ ಹಂತ ಪ್ರಾರಂಭವಾಗಿ ನದಿಗಳಿಗೆ ಕೆರೆ ನೀರು ಪೂರ್ವಭಾವಿ ಸಭೆ ನಡೆಸದೆ ಬೆಂಗಳೂರಿನಿತ್ತ ಧಾವಿಸಿದ್ದರು.

ಮುಖ್ಯ ಮಂತ್ರಿಗಳಾದ ನಂತರ ಹೊಸ ಮನವಿಯೊಂದಿಗೆ ತೆರಳಿದ ಬಸವರಾಜ್ ರವರು ಸಾರ್ ನೀವು ಇಡೀ ಜೀವಮಾನವೆಲ್ಲ ರೈತರ ಬಗ್ಗೆ ಹೋರಾಟ ಮಾಡಿಕೊಂಡು ಮುಖ್ಯ ಮಂತ್ರಿಗಳಾಗಿದ್ದೀರಿ, ನೋಡಿ ತೆಲಂಗಾಣ ಹೊಸ ರಾಜ್ಯವಾದರೂ ಅಲ್ಲಿನ ಮುಖ್ಯ ಮಂತ್ರಿ ಶ್ರೀ ಚಂದ್ರಶೇಖರ್‌ರಾವ್‌ರವರು  ಕಾಳೇಶ್ವರಂ ಯೋಜನೆ ಜಾರಿ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

   ತಾವು ದೇವರ ದಯೆಯಿಂದ ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿದ್ದೀರಿ ಇಡೀ ರಾಜ್ಯದಲ್ಲಿರುವ 38000 ಕೆರೆಗಳಿಗೂ ನದಿ ನೀರು ತುಂಬಿಸಿ, ಕರಾವಳಿ ಭಾಗದ ಜನತೆಗೂ ಕಿಂಡಿ ಯೋಜನೆ ಮಾಡಿ ನೀರು ಕೊಡುವ ಬೃಹತ್ ಯೋಜನೆ ಮಾಡಲೇ ಬೇಕು ಸಾರ್ ಎಂದಾಗ.

ಬಿಎಸ್‌ವೈ ಖಡಕ್ ಆಗಿ ಜಿಎಸ್‌ಬಿರವರಿಗೆ ನೋಡಿ ಅಣ್ಣ ಕಥೆ ಹೇಳಂಗಿಲ್ಲ, ನಾನು ಏನುಮಾಡಬೇಕು ಅದನ್ನು ಅಧಿಕಾರಿಗಳಿಂದ ವರದಿ ಸಲ್ಲಿಸಿದ ತಕ್ಷಣ ನಾನು ಸಹಿ ಹಾಕುತ್ತೇನೆ. ನೀನೂ ಈಗ ಎಂಪಿ ಪ್ರಸ್ತಾವನೆ ಸಿದ್ಧಪಡಿಸಲು ಇಂದಿನಿಂದಲೇ ಆರಂಭಮಾಡುವಂತೆ ಸೂಚಿಸಿದರು.

ಅಷ್ಟೇ ಸಾಕು ಎಂಬಂತಿದ್ದ ಬಸವರಾಜ್‌ರವರು ಇಡೀ ರಾಜ್ಯದ ಎಲ್ಲಾ ಭಾಗಗಳಿಗೂ ನದಿ ನೀರಿನ ಯೋಜನೆಗಳ ಮಾಹಿತಿಯನ್ನು ಇಲಾಖಾ ಅಧಿಕಾರಿಗಳ ಸಹಕಾರದಿಂದ ಸಂಗ್ರಹಿಸಿ, ವಿಷಯ ಪರಿಣಿತ ತಜ್ಞರುಗಳ ಸಲಹೆ ಪಡೆದು, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿಟ್ಟು ಚರ್ಚಿಸಿ, ನಂತರ ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆ ನಡೆಸಿ ಬಳಸಲು ಸಾಧ್ಯತೆ ಇರುವ ಸುಮಾರು 484 ಟಿಎಂಸಿ ನೀರಿನ ಬಳಕೆಗೆ ಡಿಪಿಆರ್ ಮಾಡಲು ಬಿಎಸ್‌ವೈ ರವರಿಂದ ಆದೇಶ ನೀಡಿಸುವ ಮೂಲಕ ರಾಜ್ಯದ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಮುನ್ನುಡಿ ಬರೆದಿದ್ದಾರೆ.

  ಮಾನ್ಯ ಪ್ರಧಾನಿಯವರು ನೀತಿ ಆಯೋಗದಿಂದ ಎಲ್ಲಾ ರಾಜ್ಯಗಳಿಗೆ ಪತ್ರ ಬರೆಸಿ 2022 ರೊಳಗೆ ಯಾವ ಯೋಜನೆಗಳಿಗೆ ಎಷ್ಟು ಮೊತ್ತದ ಹಣ ಯೋಜನೆ ರೂಪಿಸುತ್ತೀರಿ ಮಾಹಿತಿ ತಿಳಿಸಿ ಎಂದು ಕೋರಿದ್ದರ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್‌ರವರ ಮೂಲಕ ಈ ಯೋಜನೆಗೆ ತಗಲುವ ರೂ 1,93,000 ಕೋಟಿ ವೆಚ್ಚದ ಯೋಜನೆಗೆ ಅಫ್ ಲೋಡ್ ಮಾಡಿಸಿದ್ದಾರೆ.

  ಅಟಲ್‌ಜಿಯವರ ಕನಸಿನ ನದಿ ಜೋಡಣೆ ಯೋಜನೆಗೆ ನಮ್ಮ ರಾಜ್ಯದ ಎಲ್ಲಾ ನದಿ ಪಾತ್ರಗಳನ್ನು ಜೋಡಣೆ ಮಾಡುವ ಮೂಲಕ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ರೂ 1,93,000 ಕೋಟಿ ಯೋಜನೆಗೆ ಹಣ ಮಂಜೂರು ಮಾಡಲು ಮೋದಿಜಿಯವರಿಗೆ ಬೇಡಿಕೆ ಇಡುವ ಮೂಲಕ  ರಾಜ್ಯದ ಜನತೆಗೆ ಬೃಹತ್ ಕೊಡುಗೆ ನೀಡಲು ಬಿಎಸ್‌ವೈ ಮುಂದಾಗಿದ್ದಾರೆ.