26th July 2024
Share

ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಯ ದೆಹಲಿ ಮಟ್ಟದ ಅಧಿಕಾರಿರವರು ದಿನಾಂಕ:20.01.2020 ರಂದು ತುಮಕೂರಿಗೆ ಭೇಟಿ ನಿಡಿದ್ದರು. ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಒಂದು ಔಪಚಾರಿಕ ಸಮಾಲೋಚನೆ ನಡೆಯಿತು.

ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮವಾಗಿ ಯಾವ ಕ್ಷೇತ್ರದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನವಾಗಿದೆ ಎಂಬ ನನ್ನ ಪ್ರಶ್ನೆಗೆ 12 ರಾಜ್ಯಗಳ ಉಸ್ತುವಾರಿ ನೋಡುತ್ತಿರುವ ಅಧಿಕಾರಿ ಚಿಕ್ಕಬಳ್ಳಾಪುರದ ರಾಜಾನುಕುಂಟೆಯ ಹೆಸರು ಹೇಳಿದ್ದು ಕೇಳಿ ನಾನು ಶಾಕ್ ಆದೆ.

ಸದಾ ಮೋದಿಜಿಯವರನ್ನು ಟೀಕಿಸುವ ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ವೀರಪ್ಪಮೊಯ್ಲಿಜಿಯವರು ಸಂಸದರಾಗಿದ್ದ ಅವಧಿಯಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಗುರಿ ತಲುಪಿರುವುದು ನಿಜಕ್ಕೂ ಅಭಿನಂದನೀಯ.

ಸಭೆಯಲ್ಲಿದ್ದ ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಗುರುಮೂರ್ತಿ ಯವರನ್ನು ಅಲ್ಲಿಗೆ ಹೋಗುವ ನೀರಿಕ್ಷೆ ಬಗ್ಗೆ ಕೇಳಿದಾಗ ಈಗಾಗಲೇ ದಿನಾಂಕ ನಿಗದಿಯಾಗಿದೆ ಸಾರ್, ನಾನು ಹೋಗಿ ಘನತ್ಯಾಜ್ಯ ವಸ್ತು ಘಟಕವನ್ನು ನೋಡಿಕೊಂಡು ಬರುವೆ ಎಂದಾಗ ಖುಷಿಯಾಯಿತು.

ನಮ್ಮ ದಿಶಾ ತಂಡದಿಂದ ಒಮ್ಮೆ ಹೋಗಿ ನೋಡಿಕೊಂಡು ಬರುವ ಆಸೆ ನನಗೂ ಇದೆ.

ಹಾಗಾದರೆ ಬಿಜೆಪಿಯ ಸಂಸದರು ಕಳೆದ ಐದು ವರ್ಷ ಏನು ಮಾಡಿದ್ದಾರೆ ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಶ್ರೀ ವೀರಪ್ಪಮೊಯ್ಲಿಜಿಯವರಾಗಿದ್ದರು. ನಾನು ಅವರ ದೆಹಲಿಯ ಮನೆಯಲ್ಲಿ ಭೇಟಿ ಮಾಡಲು ಸಮಯ ನಿಗದಿ ಮಾಡಿಕೊಂಡಿದ್ದೆ.

ಬೆಳಿಗ್ಗೆ ಸುಮಾರು 9 ಘಂಟೆಗೆ ನಾನು ಮತ್ತು ದೆಹಲಿಯ ನನ್ನ ಸ್ನೇಹಿತ ಶ್ರೀ ಕುಮಾರ್‌ರವರು ಅವರ ಮನೆಗೆ ಹೋಗಿದ್ದೊ, ಮೊದಲು ನಾನು ಬರೆದ ವಿಷನ್ ಡಾಕ್ಯುಮೆಂಟ್‌ನ್ನು ಅವರಿಗೆ ತಲುಪಿಸಿದ್ದೆ. ಟೀವಿ ವರದಿಗಾರರೊಬ್ಬರೂ ಅವರ ಭೇಟಿಗೆ ಬಂದಿದ್ದರು. ನಮ್ಮಿಬ್ಬರನ್ನು ಒಟ್ಟಿಗೆ ಒಳಗೆ ಕಳುಹಿಸಿದರು.

  ಮೊಯ್ಲಿಯವರ ಮೊದಲು ಹೇಳಿ ಎಂದು ಟಿವಿಯವನ್ನು ಕೇಳಿದರು, ಸಾರ್ ಇವರದು ಮುಗಿಸಿ ಸಾರ್ ನಾನು ಆಮೇಲೆ ಮಾತನಾಡುತ್ತೇನೆ ಎಂದರು. ಮೊಯ್ಲಿರವರು ಅವರ ಬಳಿ ಬಹಳ ಮಾತನಾಡಬೇಕು, ಮೊದಲು ನಿಮ್ಮ ಜೊತೆ ಮಾತನಾಡಿ ಕಳುಹಿಸುತ್ತೇನೆ ಎಂದರು. ನಾನು ಸಾರ್ ನಾನು ಹೊರಗಡೆ ಇರುತ್ತೇನೆ ಎಂದು ಎದ್ದು ಹೊರಟೆ.

  ಇಲ್ಲೆ ಕುಳಿತು ಕೊಳ್ಳಿ ಪರವಾಗಿಲ್ಲ ಎಂದು ಕುಳ್ಳಿರಿಸಿದರು. ಪುಸ್ತಕವನ್ನು ತಿರುವು ಹಾಕಿದರು, ಬಹಳಷ್ಟು ವಿಷಯಗಳ ಬಗ್ಗೆ ಸಮಾಲೋಚನೆ ಮಾಡಿದರು. ನಂತರ ಅವರ ಆಪ್ತ ಕಾರ್ಯದರ್ಶಿ ಶ್ರೀ ರಮೇಶ್ ರವರನ್ನು ಕರೆದು ನಾವು ಮಾಡುತ್ತಿರುವುದನ್ನು ಇವರೊಂದಿಗೆ ಹಂಚಿಕೊಳ್ಳಿ ಎಂದು ಸೂಚನೆ ನೀಡಿದರು. ಬಹುಷಃ ಈ ತಾಳ್ಮೆ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳಿಗೆ ಬೇಕು.

  ನಂತರ ಎತ್ತಿನಹೊಳೆ ಕಡೆ ಮಾತು  ಆರಂಭಿಸಿದೆ. ಸಾರ್ ನೀವು ಚಿಕ್ಕಬಳ್ಳಾಪುರದಲ್ಲಿ ಎಂಪಿ ಆಗದಿದ್ದರೆ ಈ ಯೋಜನೆಗೆ ನೀವೇ ಅಡ್ಡಿ ಮಾಡುತ್ತಿದ್ದಿರಿ, ನನ್ನ ಪ್ರಕಾರ ನೀವೂ ಈ ಯೋಜನೆಗೆ ಒಬ್ಬ ಪ್ರಮುಖ ಪಾತ್ರಧಾರಿ ಎಂದೆ. ಅದು ಹೇಗೆ ಎಂದರು.

 ನೀವು ಮುಖ್ಯಮಂತ್ರಿಗಳಿದ್ದಾಗ ನೀರಾವರಿ ತಜ್ಞ ಪರಮಶಿವಯ್ಯನವರನ್ನು ಹಿಪೊಕ್ರಟಿಕ್ ಎಂದಿದ್ದ ಮಾತು ದಾಖಲೆಯಾಗಿದೆ. ಮಂಗಳೂರಿನ ತುಳು ಸಮಾವೇಶದಲ್ಲಿ ಯಾವುದೇ ಕಾರಣಕ್ಕೂ ನೇತ್ರವಾತಿ ನೀರನ್ನು ತೆಗೆದು ಕೊಂಡು ಹೋಗಲು ಬಿಡುವುದಿಲ್ಲಾ ಎಂದಿದ್ದ ದಾಖಲೆ ನನ್ನ ಬಳಿ ಇದೆ ಸಾರ್ ಎಂದೆ, ಮೊಯ್ಲಿಯವರು ನಕ್ಕು ಸರಿ ಇದೆಲ್ಲಾ ನಿಮಗೆ ಹೇಗೆ ಗೊತ್ತು ಎಂದರು.

ನಾನು ಆವರಿಗೆ ಕೆಲವು ಘಟನೆಗಳನ್ನು ಜ್ಞಾಪಿಸಿದೆ. ಅವರು ಸರಿ ಬಸವರಾಜ್ ಹೇಗಿದ್ದಾರೆ, ಅವರು ಕಾಂಗ್ರೆಸ್ ಬಿಡಬಾರದಿತ್ತು ಎಂಬ ಮಾತು ಆರಂಭಿಸಿದರು.

 ನಾನು ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ, ಅವರು ತುಮಕೂರಿಗೆ ಬಂದಾಗ ಪತ್ರಿಕಾ ಘೋಷ್ಟಿ ಕರೆದಿದ್ದರೂ, ಆಗ ಶ್ರೀ ಜಿ.ಎಸ್.ಬಸವರಾಜ್‌ರವರು ಕಾಂಗ್ರೆಸ್‌ನಲ್ಲಿದ್ದರೂ, ಶ್ರೀ ಶಫಿ ಅಹ್ಮದ್ ರವರು ಅಭಿವೃದ್ಧಿ ವಿಷಯಗಳ ಬಗ್ಗೆ ಮಾಹಿತಿ ನೀಡಲು ನನಗೆ ಹೇಳಿದರು.

ಪ್ರತಿಯೊಂದು ವಿಷಯ ಮಾತಾನಾಡುವಾಗ ಮೊಯ್ಲಿರವರು ವಿಷಯದ ಬಗ್ಗೆ ಎಷ್ಟು ಒತ್ತುಕೊಡುತ್ತಿದ್ದರು ಎಂದರೆ ನಿಜಕ್ಕೂ ಅಧ್ಭುತವಾಗಿತ್ತು. ಸಂಸದರ ಆದರ್ಶ ಗ್ರಾಮ ಯೋಜನೆಯ ಅವರ ಶ್ರಮ ನಿಜಕ್ಕೂ ಮೋದಿಯವರು ಒಪ್ಪಬೇಕು.

ನಾನು ಈ ಬಗ್ಗೆ ಶೀಘ್ರವಾಗಿ ಭೇಟಿ ನೀಡಿ ಅಧ್ಯಯನ ಮಾಡಿ ಪ್ರಗತಿಯ ವರದಿಯನ್ನು ಮೋದಿಜಿಯವರಿಗೆ ಕಳುಹಿಸಲು ಇಚ್ಚಿಸಿದ್ದೇನೆ,