30th April 2024
Share

TUMAKURU:   SHAKTHIPEETA FOUNDATION

ನೀರಾವರಿ ತಜ್ಞ ದಿ. ಜಿ.ಎಸ್.ಪರಮಶಿವಯ್ಯ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅವುಗಳನ್ನು ಸಂಗ್ರಹಿಸಿ ಡಿಜಿಟಲೈಸ್ ಮಾಡುವ ಮೂಲಕ ಅವರ ಎಲ್ಲಾ ಯೋಜನೆಗಳನ್ನು ಅಧ್ಯಯನ ಮಾಡಿ ಜಾರಿ ಮಾಡಲು ಸಕಾಲವಿದು ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ  ಮಲ್ಲಿಕಾರ್ಜುನ ಗುಂಗೆ ಪ್ರತಿಪಾದಿಸಿದರು.

 ಅವರು ಜಿ.ಎಸ್.ಪರಮಶಿವಯ್ಯನವರ ಜೊತೆ ಕೆಲಸ ಮಾಡಿದ್ದ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಶ್ರೀ ವೇದಾನಂದ ಮೂರ್ತಿ, ಶ್ರೀ ವೆಂಕಟೇಶ್ ಮೂರ್ತಿ, ಶ್ರೀ ಕಿರ್ಸೋರ್, ಶ್ರೀ ಚೌಡಪ್ಪ ಇನ್ನೂ ಮುಂತಾದವರ ಜೊತೆ ಮಾತನಾಡಿ ಅವರು ತಯಾರಿಸಿರುವ ಎಲ್ಲಾ ಯೋಜನೆಗಳ ಮಾಹಿತಿ ಸಂಗ್ರಹಿಸಲು ಸೂಚಿಸಿದರು.

 ನೀರಾವರಿ ಚಿಂತಕ, ಜನತಾದಳದ ನಾಯಕರಾದ ಶ್ರೀ ಕೋನರೆಡ್ಡಿರವರು ಮಾತನಾಡಿ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಬೆಣೆಹಳ್ಳ ಯೋಜನೆಯನ್ನು ಜಾರಿಮಾಡಲು ನಿಗಮ ಮುಂದಾಗಿರುವುದು ಹರ್ಷ ತಂದಿದೆ. ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇನೆ.

  ಜಾತಿ, ಪಕ್ಷ ರಾಜಕಾರಣ ಮಾಡದೇ ಎಲ್ಲಾ ಪಕ್ಷಗಳಲ್ಲಿರುವ ನೀರಾವರಿ ಚಿಂತಕರನ್ನು ಸೇರಿಸಿ, ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗೆ ಒಂದು ಸಮಿತಿಯನ್ನು ಸರ್ಕಾರ ರಚಿಸುವುದು ಸೂಕ್ತವಾಗಿದೆ. ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನೇತೃತ್ವ ವಹಿಸಲಿ ಎಂದು ಸಲಹೆ ನೀಡಿದರು.

  ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾತನಾಡಿ ನೀರಾವರಿ ಚಿಂತಕ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯರಾದ ಶ್ರೀ ಹೆಚ್.ಡಿ.ದೇವೇಗೌಡರವರ ಸಲಹೆಗಳನ್ನು ಪಡೆದು ಕೊಂಡು ಅತ್ಯುತ್ತಮವಾದ ಯೋಜನೆ ರೂಪಿಸುವುದು ಅನಿವಾರ್ಯವಾಗಿದೆ,

 ಶ್ರೀ ಕೋನರೆಡ್ಡಿಯವರು ಶ್ರೀ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಲಹೆ ನೀಡಿದರು. ಪಕ್ಷ ರಾಜಕಾರಣ ಚುನಾವಣೆಗೆ ಸೀಮೀತವಾಗಲಿ ನಮ್ಮ ಗುರಿ ರೈತರ ಕಷ್ಟಗಳಿಗೆ ಸ್ಪಂದಿಸುವುದಾಗಿದೆ ಎಂದರು.

  ಬಿಜೆಪಿಯ ನೀರಾವರಿ ಚಿಂತಕರನ್ನು ಮುಖ್ಯ ಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಲಹೆ ಮೇರೆಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಪಟ್ಟಿ ಮಾಡಲು, ಜನತಾದಳದ ನೀರಾವರಿ ಚಿಂತಕರನ್ನು ಶ್ರೀ ದೇವೇಗೌಡರೊಂದಿಗೆ ಸಮಾಲೋಚನೆ ಮಾಡಿ ಶ್ರೀ ಕೋನರೆಡ್ಡಿರವರು ಪಟ್ಟಿ ಮಾಡಲು,  ಕಾಂಗ್ರೆಸ್‌ನಲ್ಲಿನ ಮಾಜಿ ನೀರಾವರಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರು ಪಟ್ಟಿ ಮಾಡಲು, ಕಮ್ಯುನಿಷ್ಟ್ ಪಕ್ಷಗಳು ಮತ್ತು ಇತರೆ ಪಕ್ಷಗಳ ನೀರಾವರಿ ಚಿಂತಕರನ್ನು ಶ್ರೀ ನಾಗರಾಜ್‌ರವರು ಪಟ್ಟಿ ಮಾಡಿ ಎಲ್ಲರೂ ಒಟ್ಟಿಗೆ ಸೇರಿ ಜಲಸಂಪನ್ಮೂಲ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಸಮಾಲೋಚನೆ ನಡೆಸಲು ಸಮಾಲೋಚನೆ ನಡೆಸಿದರು.

  ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಶೀಘ್ರದಲ್ಲಿ ಎಲ್ಲಾ ಪಕ್ಷಗಳ ನೀರಾವರಿ ಸಮಾನ ಮನಸ್ಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವುದಾಗಿ ಭರವಸೆ ನೀಡಿದರು.