29th March 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ಅನಧಿಕೃತವಾಗಿ ಕಲ್ಪತರು ನಾಡು ಎಂದು ಪ್ರಸಿದ್ಧಿಯಾಗಿದೆ.  ಈ ಕಲ್ಪತರು ಬ್ರ್ಯಾಂಡ್’ ಅಧಿಕೃತಗೊಳಿಸಿ ಒಂದು ಮೆರಗು ನೀಡುವಂತೆ ಒಂದು ಜಿಲ್ಲೆ ಒಂದು ಉತ್ಪನ್ನ  ಯೋಜನೆಯಡಿಯಲ್ಲಿ ತೆಂಗು ಆಯ್ಕೆ ಮಾಡಿರುವುದು ನಿಜಕ್ಕೂ ಅರ್ಥಪೂರ್ಣ.

ಕೇಂದ್ರ ಸರ್ಕಾರ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ. ’ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆ’ಯುವ ತುಮಕೂರು ಜಿಲ್ಲೆಯಲ್ಲಿ ಸುಮಾರು 176245 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆಯಂತೆ.

ಪ್ರಧಾನಮಂತ್ರಿಗಳ ಕಿರು ಆಹಾರ ಯೋಜನೆ’ ಅಡಿಯಲ್ಲಿ ತೆಂಗುವಿನಿಂದ ಆಹಾರ ಪದಾರ್ಥಗಳ ಯೋಜನೆ ಮಾತ್ರ ಈ ಯೋಜನೆಯಡಿಯಲ್ಲಿ ಬರಲಿದೆಯಂತೆ. ಉಳಿದ ತೆಂಗು ನಾರು, ಮರ. ಇತರೆ ಭಾಗಗಳ ಯೋಜನೆಗಳು ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಬರಲಿವೆ. ಇವೆಲ್ಲವನ್ನೂ ಕ್ರೋಡೀಕರಿಸಿ ಒಂದು ಸಮಗ್ರ ಯೋಜನೆ ರೂಪಿಸುವುದು ಇಲಾಖೆಗಳ ಕರ್ತವ್ಯ.

ಕೇಂದ್ರ ಸರ್ಕಾರ ತೆಂಗು ಬೆಳೆಗಾರರ ಕಂಪನಿ’ಗಳನ್ನು ಆರಂಭಿಸಿತ್ತು. ಇವು ಏನಾದವೂ ಎಂಬ ಮಾಹಿತಿ ಜಿಲ್ಲೆಯಲ್ಲಿ ಯಾವ ಅಧಿಕಾರಿ ಬಳಿಯೂ ಇಲ್ಲ, ಇದು ನಾಚಿಕೆ ಗೇಡಿನ ಸಂಗತಿ, ಕೇಂದ್ರ ಸರ್ಕಾರ ’ನಾರಿನ ಕ್ಲಸ್ಟರ್’ ಗಳನ್ನು ಮಂಜೂರು ಮಾಡಿತ್ತು, ಇವು ವರ್ಷಗಳೇ ಆದರೂ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಾ ಯೋಜನೆಗಳು ಕಡತದಲ್ಲಿ ಮಾತ್ರ ಪ್ರಗತಿಯಲ್ಲಿವೆಯಂತೆ.

ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 13514 ಸ್ವಸಹಾಯ ಗುಂಪುಗಳಿವೆಯಂತೆ. 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ  ಎಷ್ಟು ಇವೆ ಎಂಬ ಮಾಹಿತಿಯನ್ನು ಇದೂವರೆಗೂ ದಿಶಾ ಸಮಿತಿಗೆ ಸಲ್ಲಿಸಿದ ಹಾಗೆ ಕಾಣಲಿಲ್ಲ.

ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ದಿಶಾ ಸಮಿತಿಯಲ್ಲಿ ಇವುಗಳ ಬಗ್ಗೆ ಹಲವಾರು ಭಾರಿ ಚರ್ಚೆನಡೆದಿದೆ. ಒಂದು ಉತ್ಪನ್ನ ಒಂದು ಜಿಲ್ಲೆ ಯೋಜನೆಗೆ ಸಂಘಗಳ ಪಾತ್ರ ಬಹಳ ಪ್ರಮುಖವಾಗಿದೆ. ಪ್ರತಿ ಹಳ್ಳಿಯಲ್ಲಿನ ಉತ್ಪನ್ನಗಳ ತಾಜಾ ಮಾಹಿತಿ ದೊರೆಯಲಿದೆ. ಇವರ ಮೂಲಕವೇ ತೆಂಗು ಯೋಜನೆಗಳಿಗೂ ಚಾಲನೆ ನೀಡುವುದು ಉತ್ತಮ’

 ಜೊತೆಗೆ ಇದೂವರೆಗೂ ಈ ಸಂಘಗಳು ಉತ್ಪನ್ನ ಮಾಡುತ್ತಿರುವ ಉತ್ಪನ್ನಗಳ ಮಾರಾಟಕ್ಕೆ ಜಿಲ್ಲಾ ಕೇಂದ್ರದಲ್ಲಿ ಒಂದು ಮಾರಾಟ ಮಳಿಗೆ ತೆರೆಯದೇ ಇರುವುದು ಒಂದು ’ದುರದೃಷ್ಟಕರ’. ಪ್ರಸ್ತುತ ಕಳೆದ ಎರಡು ದಿಶಾ ಸಮಿತಿಗಳಲ್ಲಿ ಚರ್ಚಿಸಿದ ನಂತರ ತುಮಕೂರು ನಗರದಲ್ಲಿ ಒಂದು ಮಾರಾಟ ಮಳಿಗೆ ತೆರೆಯಲು ಚಿಂತನೆ ಮೊಳೆಕೆಯೊಡಿದಿದೆ.

 ಇದು ಒಂದು ಜಿಲ್ಲೆ ಒಂದು ಉತ್ಪನ್ನಗಳ ಯೋಜನೆಯಲ್ಲಿ ತಯಾರಿಸಿದ ಉತ್ಪನ್ನಗಳು ಮತ್ತು ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನಗಳ ’ಮಾರಾಟ ಮಳಿಗೆ ಮತ್ತು ರಫ್ತು ಉತ್ತೇಜಿತ ಕೇಂದ್ರ’ ವನ್ನು ಒಂದೇ ಕಟ್ಟಡದಲ್ಲಿ ಆರಂಭಿಸಲು ಕಟ್ಟಡದ ನೀಲಿ ನಕ್ಷೆಯನ್ನು ಸಿದ್ಧಪಡಿಸಲು ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಂಜನಿಯರಿಂಗ್ ಮೂರು ಇಲಾಖೆಗಳು ಚರ್ಚಿಸಿ, ಕಟ್ಟಡ ನಿರ್ಮಾಣ ಮಾಡುವ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಸಿಇಓ ಶ್ರೀ ಗಂಗಾಧರ್ ಸ್ವಾಮಿರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ‘ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಹ ಯೋಜನೆ ಬಗ್ಗೆ ಕಾಳಜಿ ವಹಿಸಿ ಹಲವಾರು ಸಲಹೆಗಳನ್ನು ನೀಡಿದ್ದಾರಂತೆ. ತುಮಕೂರು ಜಿಲ್ಲೆಯಲ್ಲಿ ’ತೆಂಗು ಪಾರ್ಕ್’ ಕನಸಾಗಿ ಉಳಿದಿದೆ. ’ತೆಂಗು ವಿಶೇಷ ಆರ್ಥಿಕ ವಲಯ’ಕನಸು ಸಹ ನೆನೆಗುದಿಗೆ ಬಿದ್ದಿದೆ.’

ಇವೆಲ್ಲಕ್ಕೂ ಚಾಲನೆ ನೀಡುವ ಮೂಲಕ, ದೇಶದಲ್ಲಿಯೇ ಈ ಯೋಜನೆ ಯಶಸ್ವಿಯಾಗಲು, ಈ ಮಾರಾಟ ಮಳಿಗೆ ಮತ್ತು ರಫ್ತುಭವನ ಮೊದಲ ಮೆಟ್ಟಿಲು ಆಗುವುದೇ ಕಾದು ನೋಡೋಣ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಸಮಿತಿ  ವಿಶೇಷ ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸುವತ್ತ ಸಾಗಿದೆ. ಆದರೂ ಯೋಜನೆ ಪ್ರಗತಿ ಇನ್ನೂ ಆಮೆ ವೇಗದಲ್ಲಿದೆ. ಮುಂದಿನ ತಿಂಗಳು ಯೋಜನೆಗೆ ಒಂದು ತಿರುವು ದೊರೆಯಲಿದೆ.’

 ನಗರ ಮತ್ತು ಗ್ರಾಮೀಣ ಎನ್.ಆರ್.ಎಲ್.ಎಂ ಸಂಘಗಳು ಈ ಯೋಜನೆಯ ಬಗ್ಗೆ ಪ್ರತಿ ಮನೆ ಮನೆಗೂ ಪ್ರಚಾರ ಮಾಡಲು ಒಂದು ಕಿರು ಒತ್ತಿಗೆಯನ್ನು ನೋಡಲ್ ಅಧಿಕಾರಿ& ಕೃಷಿ ಜಂಟಿ ನಿರ್ದೇಶಕರಾದ ಶ್ರೀಮತಿ ರಾಜು ಸುಲೋಚನಾ ರವರು ಮತ್ತು ತೋಟಗಾರಿಕೆ ಡಿಡಿ ರವರಾದ ಶ್ರೀ ರಘುರವರು ಮಾಡಬೇಕಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರು ಎಷ್ಟು ವಿಧವಾದ ಕೈಗಾರಿಕೆಗಳನ್ನು ಆರಂಭಿಸಬಹುದು & ಹಾಲಿ ಇರುವ ಕೈಗಾರಿಕೆಗಳ ಸ್ಥಿತಿ-ಗತಿ ಏನು ಎಂಬ ಮಾಹಿತಿಯನ್ನು ಕ್ರೋಡೀಕರಿಸುತ್ತಿದ್ದಾರೆ. ಇವರು ಕೈಗಾರಿಕಾ ಇಲಾಖೆಯ ಜನಕರು. ಇಲಾಖೆಗಳ ಸಮನ್ವಯತೆ ಮುಖ್ಯ, ಸಂಪನ್ಮೂಲ ವ್ಯಕ್ತಿಗಳು  ಚುರುಕಾಗಬೇಕಿದೆ.