27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಕೊರಟಗೆರೆಯ ಡಾ.ಜಿ.ಪರಮೇಶ್ವರ್ ರವರು ಉಪಮುಖ್ಯ ಮಂತ್ರಿಯವರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿದ್ದಾಗ ಪಿಪಿಪಿ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾಲಯ ಮಾಡುವುದಾಗಿ ಮುಂಗಡ ಪತ್ರದಲ್ಲಿ ಘೋಶಿಸಿದ್ದರು.

ಇದು ನೆನೆಗುದಿಗೆ ಬಿದ್ದಿತ್ತು, ಪ್ರಸ್ತುತ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆ ಹಳ್ಳ ಕಾವಲ್ ನಲ್ಲಿ ಹೆಚ್.ಎ.ಎಲ್ ಘಟಕದ ಬಳಿ ಸುಮಾರು 40 ಎಕರೆ ಜಮೀನನಲ್ಲಿ ಕ್ರೀಡಾ ಗ್ರಾಮ ಸ್ಥಾಪನೆ  ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಘೋಶಿಸಿದ್ದರು.

ರಾಜ್ಯ ಸರ್ಕಾರ 40 ಎಕರೆ ಜಮೀನನ್ನು ಗುರುತಿಸಿ ಕ್ರೀಡಾ ಗ್ರಾಮಕ್ಕಾಗಿ ನಿಗದಿ ಮಾಡಿದೆ. ಇಲ್ಲಿಯೇ ಸರ್ಕಾರಿ ಐ.ಟಿ.ಐ ಕಾಲೇಜಿಗೆ 5 ಎಕರೆ ಜಮೀನು ನೀಡಲು ಸಂಸದರು ಸೂಚಿಸಿದ್ದಾರೆ.

ಈ ಕ್ರಿಡಾ ಗ್ರಾಮದ ನಿವೇಶನದಲ್ಲಿ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಜಮೀನು ಮಂಜೂರು ಮಾಡಿಸಿಕೊಂಡು ಕ್ರೀಡಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಕ್ರೀಡಾ ಮತ್ತು ಯುವಸಬಲೀಕರಣ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಚಿವಾಲಯದ ಪ್ಯಾನಲ್ ನಲ್ಲಿರುವ ಸಲಹಾಗಾರರಿಗೂ ನಿರ್ದೇಶನ ನೀಡಿ ದೇಶದ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳ ಮಾದರಿಯೊಂದಿಗೆ ಪ್ರಸ್ತಾವನೆಯ ಪಿಪಿಟಿ ಸಿದ್ಧಪಡಿಸಿ, ಮಾನ್ಯ ಸಚಿವರಿಗೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಆಸಕ್ತರು ಸಲಹೆ ಸೂಚನೆ ನೀಡಬಹುದಾಗಿದೆ.

ಗುಬ್ಬಿ ತಾಲ್ಲೂಕಿನ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು ಸ್ವತಃ ಕ್ರೀಡಾ ಪಟು ಆಗಿದ್ದಾರೆ. ಅವರೂ ಸಹ ಕ್ರೀಡಾ ಗ್ರಾಮ/ಕ್ರೀಡಾವಿಶ್ವ ವಿದ್ಯಾಲಯದ ಸ್ಥಾಪನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.