27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದಲ್ಲಿರುವ ಶ್ರೀ ಶಿವಕುಮಾರ ಸ್ವಾಮಿಜಿ ತಪೋವನನವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಪವಿತ್ರ ವನವನ್ನಾಗಿ ಮಾಡಲು ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರಿಗೆ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದರು.

ಕಳೆದ 22 ವರ್ಷಗಳಿಂದ ಸುಮಾರು 5 ಎಕರೆಯಲ್ಲಿರುವ ತಪೋವನವನ್ನು ಕುಂದರನಹಳ್ಳಿ ಗ್ರಾಮಸ್ಥರೇ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ 1999 ರ ಅವಧಿಯ ಸಂಸದರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿತ್ತು.

ಒಂದು ಗ್ರಾಮದ ಜನತೆ ಸರ್ಕಾರಿ ಜಮೀನನ್ನು ಈ ರೀತಿ ಅಭಿವೃದ್ಧಿ ಪಡಿಸಿ, ತೆಂಗಿನ ತೋಟ ಮಾಡಿ,  ಸಂರಕ್ಷಣೆ ಮಾಡಿ, ಬಂದ ಆದಾಯದಿಂದ ಗ್ರಾಮದ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿರುವುದು, ಇದೊಂದು ವಿಶಿಷ್ಠವಾದ ಮಾದರಿ ಯೋಜನೆ. ಇಂಥಹ ಕಾರ್ಯ ಮಾಡುತ್ತಿರುವ ಗ್ರಾಮಸ್ಥರನ್ನು ಶ್ರೀ ಅಜಯ್ ರವರು ಅಭಿನಂದಿಸಿದರು.

ಪವಿತ್ರವನ ನಿರ್ವಹಣೆಗಾಗಿ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಜೊತೆಗೆ ಗುಬ್ಬಿ ತಹಶೀಲ್ಧಾರ್, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಮತ್ತು ಗುಬ್ಬಿ ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ ರವರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ಸಲಹೆ ನೀಡಿದರು.

ಗುಬ್ಬಿ ತಹಶೀಲ್ಧಾರ್ ಶ್ರೀಮತಿ ಆರತಿರವರು ಮಾತನಾಡಿ ಒಂದು ಗ್ರಾಮ ಜನತೆ, ಈ ರೀತಿ ನಿರ್ವಹಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಪವಿತ್ರವನವನ್ನು ನಿರ್ವಹಣೆ ಮಾಡಲು, ಕಾನೂನು ಪ್ರಕಾರ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಮನವಿಯೊಂದಿಗೆ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ಶ್ರೀ ಅಜಯ್ ರವರ ಜೊತೆಯಲ್ಲಿದ್ದ, ಗುಬ್ಬಿ ತಹಶೀಲ್ಧಾರ್ ಶ್ರೀಮತಿ ಆರತಿ, ಮಾರಶೆಟ್ಟಿಹಳ್ಳಿ ಪಿಡಿಓ ಶ್ರೀಮತಿ ತನುಜ, ನಿಟ್ಟೂರು ಆರ್.ಐ.ಶ್ರೀ ಮೋಹನ್ ಕುಮಾರ್, ತಾಲ್ಲೋಕು ಸರ್ವೇಯರ್ ಶ್ರೀ ಮಂಜಣ್ಣ, ಅದಲಗೆರೆ ಗ್ರಾಮಲೆಕ್ಕಿಗ ಶ್ರೀ ಸ್ವಾಮಿಯವರಿಗೆ ಬಹುಷಃ ಆಶ್ಚರ್ಯವಾಗಿರ ಬಹುದು. ಇಂತಹ ಕುಲಗೆಟ್ಟ ರಾಜಕೀಯದ ಹೊಲಸಿನಲ್ಲೂ, ಕುಂದರನಹಳ್ಳಿ ಗ್ರಾಮದ ಜನರು ಈ ರೀತಿ ಸಾರ್ವಜನಿಕ ತೋಟ ಮಾಡಿರುವುದು ನಿಜಕ್ಕು ಅದ್ಭುತ.

ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ.ಎಸ್.ಬಸವಲಿಂಗಯ್ಯ, ಶ್ರೀ ವಿಶ್ವನಾಥ್, ಶ್ರೀ ಸುರೇಶ್, ಶ್ರೀ ಮಹೇಶ್, ಶ್ರೀ ಮಹಾಲಿಂಗಯ್ಯ, ಶ್ರೀ ಮಹದೇವಣ್ಣ, ಶ್ರೀ ಕೆ.ಆರ್.ಮಹೇಶ್, ಶ್ರೀ ಸಿದ್ಧರಾಮಯ್ಯ, ಶ್ರೀ ಕೆ.ವೈ ವಿಶ್ವನಾಥ್, ಶ್ರೀ ಗುಬ್ಬಣ್ಣ, ಶ್ರೀ ಶಿವಣ್ಣ, ಶ್ರೀ ರಮೇಶ್, ಶ್ರೀ ಕುಮಾರ್, ಶ್ರೀ ಸಿದ್ಧಯ್ಯ  ಸೇರಿದಂತೆ ಹಲವಾರು ಜನರು ಇದ್ದರು.

ಕುಂದರನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ಕಾರ್ಯ ನಿಜಕ್ಕೂ ಅದ್ಭುತ, ಜಿಲ್ಲೆಯ, ರಾಜ್ಯದ, ದೇಶದ ಪ್ರತಿಯೊಂದು ಗ್ರಾಮದಲ್ಲೂ ಇಂಥಹ ಕೆಲಸ ಮಾಡಲು ಪ್ರೇರಣೆ ಎಂದರೆ ತಪ್ಪಾಗಲಾರದು.