27th July 2024
Share

TUMAKURU:SHAKTHIPEETA FOUNDATION

 ಕೇವಲ ವಾಟ್ಸ್‍ಅಪ್‍ಗಳಲ್ಲಿ ಇಲ್ಲಿ ಇಷ್ಟು ಎಕರೆ ಸರ್ಕಾರಿ ಜಮೀನು ಇದೆ, ಅಲ್ಲಿ ಇಷ್ಟು ಎಕರೆ ಜಮೀನು ಇದೆ, ಎಂಬ ಬಗ್ಗೆ ಪುಕಾರು ಬೇಡ. ತುಮಕೂರು ಜಿಲ್ಲೆಯಲ್ಲಿ ಅಥವಾ ತುಮಕೂರು ನಗರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಸರ್ಕಾರಿ ಜಮೀನು ಇದೆ,

ಯಾವ ಯೋಜನೆಗೆ ಸರ್ಕಾರಿ ಜಮೀನು ಬೇಕು ಎಂಬ ಬಗ್ಗೆ ಸರ್ಕಾರದಿಂದ ಪತ್ರ ಬಂದ ತಕ್ಷಣ ನಿರ್ಧಿಷ್ಠ ಯೋಜನೆಗಳಿಗೆ, ನಿರ್ಧಿಷ್ಠ ಜಮೀನು ನಿಗದಿ ಮಾಡುವುದಾಗಿ ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು  ಖಡಕ್ ಆಗಿ ತಿಳಿಸಿದ್ದಾರೆ.

ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:27.12.2022 ರಂದು  ಸರ್ಕಾರಿ ಯೋಜನೆಗಳಿಗೆ ಸರ್ಕಾರಿ ಯೋಜನೆ ಎಂಬ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಕಟು ಸತ್ಯ ನುಡಿದರು ಎಂದರೆ ತಪ್ಪಾಗಲಾರದು.

ಹೌದು ಮಾಹಿತಿ ಹಕ್ಕು ಕಾರ್ಯಕರ್ತರು, ಸರ್ಕಾರಿ ಸ್ಥಳದ ಬಗ್ಗೆ ಮಾಹಿತಿ ನೀಡಿದರೆ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಸರ್ಕಾರಿ ಜಮೀನು ಖಾಲಿ ಇಲ್ಲ ಎಂದು ಹೇಳುವುದು ಸಹಜವಾಗಿದೆ. ಕಾರಣ ಫಾರಂ ನಂ 53 ಹಾಗೂ 57 ರ ಪವಾಡ.

ಜಿ.ಎಸ್.ಬಸವರಾಜ್ ರವರು ನಾನು ರಾಜಕಾರಣದಿಂದ ನಿರ್ಗಮಿಸುವ ವೇಳೆಗೆ, ಮುಂದಿನ 25 ವರ್ಷಗಳ ಯೋಜನೆಗಳಿಗೆ ಅಗತ್ಯವಿರುವ ಜಮೀನನ್ನು ನಿಗದಿಗೊಳಿಸಿದರೆ, ಯೋಜನೆಗಳು ತಾನಾಗಿಯೇ ಮಂಜೂರಾಗುತ್ತವೆ ಎಂಬ ಪರಿಕಲ್ಪನೆ ಅವರದ್ದಾಗಿದೆ.

ಜಿಲ್ಲಾಧಿಕಾರಿಗಳ ಪ್ರಕಾರ ಇದು ಚುನಾವಣಾ ಸಮಯ, ಗಿಮಿಕ್ ಆಗುವುದು ಬೇಡ, ಯಾವ ಯೋಜನೆಗೆ ಎಷ್ಟು ಜಮೀನು ಬೇಕು, ಜಮೀನು ಎಲ್ಲಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಮುಖ್ಯ ಮಂತ್ರಿಗಳು ಅಥವಾ ಸಚಿವರುಗಳು ಅಥವಾ ಉನ್ನತ ಅಧಿಕಾರಿಗಳಿಂದ ಬೇಡಿಕೆ ಬಂದ ತಕ್ಷಣ ಪ್ರಸ್ತಾವನೆ ಸಿದ್ಧಪಡಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಸರ್ಕಾರಿ ಯೋಜನೆಗಳಿಗೆ, ಜಮೀನು ನೀಡಲು ಸಭೆ ನಡೆಸುವ ಮೂಲಕ ಆಂದೋಲನ ಮಾಡುತ್ತಿದ್ದಾರೆ. ಅವರು ಬಂದಾಗಿನಿಂದ ಯಾವ ಯೋಜನೆಗೆ ಎಲ್ಲಿ, ಎಷ್ಟು ಜಮೀನು ಮಂಜೂರು ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹ ಮಾಡಲಾಗುವುದು.  ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ.

ಸಂಘ ಸಂಸ್ಥೆಗಳಿಗೆ ಸರ್ಕಾರಿ ಜಮೀನು ಮಂಜೂರು ಮಾಡಬೇಕಾದರೆ, ನಿಯಾಮುನುಸಾರ ಯೋಜನಾವರದಿ, ನಿರ್ಧಿಷ್ಠ ದಾಖಲೆಗಳೊಂದಿಗೆ, ಪ್ರಸ್ತಾವನೆ ಸಲ್ಲಿಸಬೇಕು. ಈಗಂತೂ ಸರ್ಕಾರ ನಿರ್ದೇಶನ ನೀಡಿದರೆ ಮಾತ್ರ ಜಮೀನು ಪ್ರಸ್ತಾವನೆ ಎಂಬ ಖಚಿತ ಸಲಹೆ ನೀಡಿದ್ದಾರೆ.

ಈ ಸಲಹೆಗಳ ಮೇರೆಗೆ ತುಮಕೂರು-2047 ವಿಷನ್ ಡಾಕ್ಯುಮೆಂಟ್ ನಲ್ಲಿ, ಪಕ್ಕಾ ಮಾಹಿತಿ ಸಂಗ್ರಹಿಸಿ, ವಿಧಾನಸಭಾ ಚುನಾವಣಾ ನಂತರ ಸರ್ಕಾರದೊಂದಿಗೆ ವ್ಯವಹರಿಸಬೇಕೋ ಅಥವಾ ಚುನಾವಣಾ ವರ್ಷವಾಗಿದ್ದರಿಂದ, ಈಗಲೇ ಕೆಲವು ಯೋಜನೆಗಳ ಬಗ್ಗೆ ವ್ಯವಹರಿಸಬೇಕೋ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಸಮ್ಮೇಳನದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳು ಎಂಬ ಸಂವಾದ ಏರ್ಪಡಿಸಿದ್ದರ ಮುಂದಿನ ಭಾಗವಾಗಿ, ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಾಗೂ ಆಸಕ್ತ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ತುಮಕೂರು ವಿಷನ್ -2047 ಜನಾಂದೋಲವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.

ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥ ಬಿಡುಗಡೆ ಆಗುವಾಗಲೇ,  ತುಮಕೂರು ವಿಷನ್ -2047 ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಆಸಕ್ತರು ಸಂಪರ್ಕಿಸ ಬಹುದಾಗಿದೆ.