19th September 2024
Share

TUMAKURU:SHAKTHIPEETA FOUNDATION

  ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2, ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ  ಜಿ.ಎಸ್.ಬಸವರಾಜ್ ರವರು ಸ್ವಾಗತಿಸಿದ್ದಾರೆ.

  ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪ ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು,  ಮೂಲಭೂತ ಸೌಕರ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಕೈಗೊಂಡಿರುವ ನಿರ್ಧಾರಕ್ಕೆ ಪೂರಕವಾಗಿ,  ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳಾದ ಶ್ರೀಮತಿ ನಿರ್ಮಲಾ ಸೀತಾರಾಮ್ ರವರು, ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು, ಶ್ರೀ ಪ್ರಹ್ಲಾದ್ ಜೋಷಿಯವರು,  ಶ್ರೀ ವಿ.ಸೋಮಣ್ಣನವರು, ಕು.ಶೋಭಾಕರಂದ್ಲಾಜೆಯವರು ಮತ್ತು ಪಕ್ಷಾತೀತವಾಗಿ ರಾಜ್ಯದ ಎಲ್ಲಾ  ಸಂಸದರು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಬಳಿ ನಿಯೋಗ ಹೋಗಿ ಸಮಾಲೋಚನೆ ನಡೆಸಲು ಸಲಹೆ ನೀಡಿದ್ದಾರೆ.

   ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ನನ್ನ ಕನಸಾಗಿತ್ತು’ ಎಲ್ಲರಿಗಿಂತ ಮೊದಲೇ, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚಿಸಿ, ತುಮಕೂರು ಸ್ಥಳ ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವಾರು ಭಾರಿ ಮನವಿ ಮಾಡಲಾಗಿತ್ತು. ಕಡತದ ಅನುಸರಣೆಯನ್ನು ಮಾಡಲಾಗಿತ್ತು. ಈಗ ಅದರ ಪ್ರತಿಫಲವಾಗಿ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರು ಮುಂದುವರೆಸುವ ಆಶಾಭಾವನೆ ನನಗೆ ಇದೆ.

  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಾಗ, ಮಧುಗಿರಿ, ಕೊರಟಗೆರೆ, ಶಿರಾ ಮತ್ತು ತುಮಕೂರು ತಾಲ್ಲೋಕು ಜಮೀನುಗಳಲ್ಲಿ ಈಗಾಗಲೇ ಗುರುತಿಸಿ, ಸರ್ಕಾರಕ್ಕೆ ಸಲ್ಲಿರುವ ಪ್ರಸ್ತಾವನೆಯನ್ನು ಕಳುಹಿಸಲು, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರು ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು, ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರು, ದೆಹಲಿ ವಿಶೇಷ ಪ್ರತಿನಿಧಿಯವರಾದ ಶ್ರೀ ಟಿ.ಬಿ.ಜಯಚಂದ್ರರವರು ಸೇರಿದಂತೆ,  ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ  ಒಗ್ಗಟ್ಟಾಗಿ ಶ್ರಮಿಸಲು’ ಕರೆ ನೀಡಿದ್ದಾರೆ.

 ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಸ್ತಾವನೆಗಳ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ವೈಮಾನಿಕ ದೂರ  ತುಮಕೂರು 80 ಕಿಮೀ, ದೊಡ್ಡಬಳ್ಳಾಪುರ 46 ಕಿಮೀ.ದಾಬಸ್ ಪೇಟೆ 50 ಕಿಮೀ. ನೆಲಮಂಗಲ 42 ಕಿಮೀ, ರಾಮನಗರ 64 ಕಿಮೀ ದೂರವಿದೆ.

  ಉದ್ದೇಶಿತ ಎಲ್ಲಾ ಪ್ರಸ್ತಾವನೆಗಳ ವೈಮಾನಿಕ ದೂರಕ್ಕಿಂತ, ತುಮಕೂರು ಪ್ರಸ್ತಾವನೆ ದೂರ ಇದ್ದರೂ, ರಾಜ್ಯ ಸರ್ಕಾರ ಗುರುತಿಸಿರುವ ಎಲ್ಲಾ ಸ್ಥಳಗಳಿಗಿಂತ ಉತ್ತಮವಾಗಿದೆ. ಅಭಿವೃದ್ದಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದೆ. ಕರ್ನಾಟಕ ರಾಜ್ಯದ ಬಹುತೇಕ ಪ್ರದೇಶಗಳಿಗೆ ಅನೂಕೂಲವಾಗಲಿದೆ. ಸರ್ಕಾರಿ ಜಮೀನು ಜಾಸ್ತಿ ಇದೆ, ಉದ್ದೇಶಿತ ಬೇರೆ ಪ್ರಸ್ತಾವನೆಗಳ ಜಮೀನಿಗೆ ಹೋಲಿಸಿದರೆ, ಇಲ್ಲಿ ಜಮೀನು ಬೆಲೆ ಕಡಿಮೆ ಇದೆ. ಕೈಗಾರಿಕಾ ಕ್ರಾಂತಿಗೆ ಪೂರಕವಾಗಲಿದೆ. 

 ‘ಯಾವ ಸ್ಥಳ ಸೂಕ್ತ’ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿ. 19 ಜಿಲ್ಲೆಗಳ ಹೆಬ್ಬಾಗಿಲು, ಬೆಂಗಳೂರು-ಪುಣೆ ಎಕನಾಮಿಕ್ ಕಾರಿಡಾರ್, ಚನ್ನೈ- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ, ಸುಮಾರು 12500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂಡಸ್ಟ್ರಿಯಲ್ ನೋಡ್ ಅಭಿವೃದ್ದಿಗೂ ಪೂರಕವಾಗಲಿದೆ.

  ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ಉದ್ದೇಶಿತ ಶರಾವತಿ ನೀರಿನ ಯೋಜನೆಯ ವಾಟರ್ ಬ್ಯಾಂಕ್ ಜಾಲಗುಣಿಯ ಬಳಿ ನಿರ್ಮಾಣ’ವಾಗಲಿದೆ. ಈ ಎಲ್ಲಾ ನದಿಗಳ  ನೀರನ್ನು ಬಳಸಲು ಅನೂಕೂಲವಾಗಲಿದೆ. ಈ ಪ್ರಸ್ತಾವನೆ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ದಿಗೆ ಮುನ್ನುಡಿ ಬರೆಯಲಿದೆ.

 ಉದ್ದೇಶಿತ ಮಾದವಾರ- ತುಮಕೂರು ಮೆಟ್ರೋ ಮಾರ್ಗವನ್ನು ಮತ್ತು ಉದ್ದೇಶಿತ ಉಪನಗರ ರೈಲ್ವೇ ಮಾರ್ಗ’ ವನ್ನು ವಸಂತನರಸಾಪುರದವರೆಗೆ  ವಿಸ್ತರಣೆ ಮಾಡಲೇ ಬೇಕಿದೆ. ಇಂಡಸ್ಟ್ರಿಯಲ್ ನೋಡ್‍ನಲ್ಲಿ ಜಮೀನು ಪಡೆದವರಲ್ಲಿ ಬೆಂಗಳೂರಿನ ಉದ್ಯಮಿಗಳೇ ಜಾಸ್ತಿ ಇದ್ದಾರೆ.

  ಬೆಂಗಳೂರು- ನೆಲಮಂಗಲ-ತುಮಕೂರು ರಸ್ತೆಗಳ ಒತ್ತಡವನ್ನು ತಗ್ಗಿಸಬೇಕಿದೆ, ಬೆಂಗಳೂರು-ಹಾಸನ, ಬೆಂಗಳೂರು-ಪುಣೆ, ಬೆಂಗಳೂರು – ಹೊನ್ನಾವರ ಸೇರಿದಂತೆ, ಮೂರು ಹೈವೆಗಳ ಜನ ಸಂದಣೆ ಈಗಲೇ ಹೆಚ್ಚಾಗಿದೆ. ಇಲ್ಲಿ ಮತ್ತೆ ಬೆಂಗಳೂರು-2 ವಿಮಾನ ನಿಲ್ಧಾಣ ಟ್ರಾಫಿಕ್ ಕಿರಿ-ಕಿರಿ’ ಅನುಭವಿಸಬೇಕಾಗುವುದು.

 ತುಮಕೂರು ಏರ್ ಪೋರ್ಟ್ ಪ್ರಸ್ತಾವನೆ, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆಯಿಂದ, ನೇರವಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್‍ಗೆ ಸಂಪರ್ಕವಾಗುವುದರಿಂದ, ಬೆಂಗಳೂರು-ತುಮಕೂರು ರಸ್ತೆ ಒತ್ತಡ ಕಡಿಮೆಯಾಗಲಿದೆ.

 ಈಗಾಗಲೇ ಮೈಸೂರಿನಲ್ಲಿ ಏರ್ ಪೋರ್ಟ್ ಇರುವುದರಿಂದ, ಬೆಂಗಳೂರು-ಮೈಸೂರು ರಸ್ತೆಯ ಪ್ರಸ್ತಾವನೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ಸಮ್ಮತವಲ್ಲ, ಇಲ್ಲಿನ ಜಮೀನು ಬೆಲೆಯೂ ಇಲ್ಲಿ ಅತ್ಯಂತ ದುಬಾರಿಯಾಗಲಿದೆ.

 19 ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು ಧ್ವನಿ ಎತ್ತಬೇಕಿದೆ. ಯಾವುದೇ ಬೃಹತ್ ವಿಶೇಷ ಯೋಜನೆಗೆ ವೈಜ್ಞಾನಿಕ ಅಭಿವೃದ್ಧಿ ಲಾಭಿ’ ಬಹಳ ಕೆಲಸ ಮಾಡಲಿದೆ ಎಂದಿದ್ದಾರೆ.