19th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಬಿದರೆಹಳ್ಳಕಾವಲ್ ನಲ್ಲಿ ಸುಮಾರು 614 ಎಕರೆ ಜಮೀನಿನಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ  ಆರಂಭವಾಗಲಿದೆ.

ಮಾಸ್ಟರ್ ಪ್ಲಾನ್ ಪ್ರಕಾರ 2016 ರಲ್ಲಿ ಶಂಕುಸ್ಥಾಪನೆ ಮಾಡಿದ್ದು 2018 ರಲ್ಲಿಯೇ ಲೋಕಾರ್ಪಣೆಯಾಗಬೇಕಿತ್ತು. ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರೇ ಇಲ್ಲಿಗೆ ಆಗಮಿಸಿ ಶಂಕುಸ್ಥಾಪನೆ ಮಾಡಿ 2018 ರಲ್ಲಿ ಈ ಭಾಗದ ನಮ್ಮ ರೈತರು ಮಕ್ಕಳು ಇಲ್ಲಿ ಉದ್ಯೋಗ ಮಾಡಲಿದ್ದಾರೆ ಎಂದು ಘೋಷಣೆ ಮಾಡಿದಾಗ ಸೇರಿದ್ದ ಜನಸ್ತೋಮದಿಂದ ಕರತಾಡನ ಮುಗಿಲು ಮುಟ್ಟಿತ್ತು.

ಇದೂವರೆಗೂ ಏನೂ ನಡೆಯುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ, ಕಾರಣ ರಕ್ಷಣಾ ಇಲಾಖೆಯ ಬಗ್ಗೆ ಮಾಹಿತಿ ಸೋರಿಕೆಯಾಗ ಬಾರದು. ಆದರೇ ಸ್ಥಳೀಯರಿಗೆ ಉದ್ಯೋಗದ ವಿಷಯ ಬಂದಾಗ ಮಾತನಾಡಲೇ ಬೇಕು, ಅಗತ್ಯ ಬಿದ್ದಲ್ಲಿ ಬೀದಿಗೂ ಇಳಿಯಬೇಕು.

ಹೆಚ್.ಎ.ಎಲ್ ಸಿ.ಎಸ್.ಆರ್ ಫಂಡ್ ನಿಂದ ಉಳುಮೆ ಮಾಡುತ್ತಿದ್ದ ರೈತರ ಸುತ್ತ ಮುತ್ತಲಿನ ಗ್ರಾಮಗಳ ಅಭಿವೃದ್ಧಿ ಮಾಡದೇ, ಅಧಿಕಾರಿಗಳಿಗೆ ಬೇಕಾದ ಕಡೆ ವೆಚ್ಚ ಮಾಡಿರುವ ಬಗ್ಗೆ ಚರ್ಚೆಯಾಗಲೇಬೇಕು. ಈ ರೀತಿ ಸರಿಯಲ್ಲ.

ಈಗ ಈ ಘಟಕವನ್ನು ವಿಸ್ತರಣೆ ಮಾಡಬೇಕು ಎಂಬ ವಿಚಾರ ಪ್ರಚಲಿತವಾಗಿದೆ. ಈಗಾಗಲೇ ಈ ನಕ್ಷೆಯಲ್ಲಿರುವಂತೆ ಸುಮಾರು 592 ಎಕರೆ ಜಮೀನಿನನ್ನು ಗುರುತಿಸಿಲಾಗಿದೆಯಂತೆ.

ಕೇಂದ್ರ ಸರ್ಕಾರ ಒಂದು ಹೊಸ ಆಲೋಚನೆ ಮಾಡುತ್ತಿದೆ. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಸಂಭಂಧಿಸಿದ ರಸ್ತೆ, ವಿಸ್ತರಣಾ ಘಟಕಗಳಿಗೆ ಅರಣ್ಯ ಜಮೀನನ್ನು ಬಳಸಲು ಕಾನೂನು ರೂಪಿಸುವ ಚಿಂತನೆಯಲ್ಲಿದೆ. ಬಿದರೆಹಳ್ಳ ಕಾವಲ್ ಜಮೀನಿನನಲ್ಲಿ ಸುಮಾರು 1100 ಎಕರೆ ಜಮೀನನ್ನು ಅರಣ್ಯ ಇಲಾಖೆಯವರು ಪಡೆದಿದ್ದಾರೆ. ಬದಲಿ ಜಮೀನು ನೀಡಿ ಈ ಜಮೀನನ್ನು ವಿಸ್ತರಣಾ ಘಟಕಕ್ಕೆ ನೀಡಿದರೆ ಹೇಗೆ ಎಂಬ ಚರ್ಚೆಯೂ ಸರ್ಕಾರದ ಹಂತದಲ್ಲಿ ಚರ್ಚೆಯಾಗುತ್ತಿದೆಯಂತೆ.

ಸೆಕ್ಯೂರಿಟಿ ವಿಷಯ ಬಂದಾಗ ಅವರಿಗೆ ಬೇಕಾದ ಜಮೀನನ್ನು ಭೂ ಸ್ವಾಧೀನ ಮಾಡಲೇ ಬೇಕಿದೆಯಂತೆ. ಇಲ್ಲಿ ಯಾರ ಮಾತನ್ನು ರಕ್ಷಣಾ ಇಲಾಖೆ ಕೇಳುವುದಿಲ್ಲಾ ಎಂಬ ಅಂಶವೂ ಸರ್ಕಾರದ ಹಂತದಲ್ಲಿ ಚರ್ಚೆಯಾಗುತ್ತಿದೆಯಂತೆ.

ನಿಖರವಾದ ಮಾಹಿತಿ ತಿಳಿಯಲು ಕೆಲವು ಕಾಲ ಸಮಯ ಬೇಕಾಗಿದೆ. ಈಗಾಗಲೇ ರೈತರ ಹಂತದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಈ ರೀತಿ ಚರ್ಚೆ ಆಗುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ.

ಬಿದರೆಹಳ್ಳ ಕಾವಲ್ ನ ಶ್ರೀ ಗಂಗಾಧರ್ ರವರು, ಈ ನಕ್ಷೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕಳುಹಿಸಿ, ತಮ್ಮ ಅಭಿಪ್ರಾಯ ತಿಳಿಸಲು ಕೋರಿದ್ದರು. ನಾನು ಈ ಹಂತದಲ್ಲಿ ಯಾವುದೇ ಅಭಿಪ್ರಾಯ ನೀಡಲು ಸಾಧ್ಯಾವಿಲ್ಲ. 

ನನಗಿನ್ನೂ ಪೂರ್ಣ ಮಾಹಿತಿ ಇಲ್ಲ. ನಾನು ದಿಶಾ ಸಮಿತಿಯ ಸದಸ್ಯನಾಗಿ ಸಭೆಯಲ್ಲಿ ಭಾಗವಹಿಸಲು ಪ್ರೋಟೋಕಾಲ್ ನಲ್ಲಿ ಅವಕಾಶವಿದೆ. ಆದರೂ ಸಭೆಯಲ್ಲಿ ಚರ್ಚೆ ಮಾಡಿದ ಒಂದು ಅಂಶವನ್ನು ನಾನು ಬಹಿರಂಗ ಪಡಿಸುವ ಆಗಿಲ್ಲ, ಇದು ರಕ್ಷಣಾ ಇಲಾಖೆಯ ವಿಚಾರ.

ಹಿಂದಿನ ಸಭೆಯಲ್ಲಿ ಮೂಲಭೂತ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಕಪಿಲ್ ಮೋಹನ್ ರವರು ಮೊದಲು ಪ್ರಶ್ನೆ ಮಾಡಿದ್ದು, ನೀವೂ ಯಾರು? ನಾನು ದಿಶಾ ಸಮಿತಿ ಸದಸ್ಯ ಎಂಬ ಮಾಹಿತಿ ತಿಳಿದ ನಂತರ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು.

ಉಳಿದವರು ಸಭೆಯಿಂದ ಮೌನವಾಗಿ ಹೊರನಡೆದರು, ಇದು ಪ್ರೋಟೋಕಾಲ್ ನಿಯಮ. ಸಭೆಯ ವಿಷಯಗಳನ್ನು ಗೌಪ್ಯವಾಗಿ ಇಡುವುದು ನಮ್ಮ ಕರ್ತವ್ಯವೂ ಹೌದು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹೆಚ್.ಎ.ಎಲ್ ಘಟಕದ ಒಳಗೆ ಪ್ರವೇಶ ಮಾಡಿದ ತಕ್ಷಣ ಹೇಳಿದ ಮಾತು, ರಘೋತ್ತಮರಾವ್ ರವರೇ ಕುಂದರನಹಳ್ಳಿ ರಮೇಶ್ ಈ ಊರಿನಲ್ಲಿ ಹುಟ್ಟದಿದ್ದರೇ ಹೆಚ್.ಎ.ಎಲ್ ಇಲ್ಲಿಗೆ ಬರುತ್ತಿರಲಿಲ್ವೇನೋ ಅಂದಾಗ, ಇದು ಸರಿಯಲ್ಲ ಸಾರ್ ನೀವೂ ಎಂ.ಪಿ. ಆಗದಿದ್ದರೇ ಹೇಗೆ ಬರುತ್ತಿತ್ತು ಹೇಳಿ ಎಂದಾಗ, ನಾನು ಇಲ್ಲಿ ಕೋಕೋನಟ್ ರೀಸರ್ಚ್ ಸ್ಟೇಷನ್ ಮಾಡಲು ಮುಂದಾದಾಗ ನಿಮ್ಮ ತಾತ ದಿ.ಸಾಗರನಹಳ್ಳಿ ರೇವಣ್ಣನವರು ವಿರೋಧ ಮಾಡಿದ್ದರು.

ನಂತರ ಮೊಮ್ಮಗ ನೀನು ಬಂದು ಹೆಚ್.ಎ.ಎಲ್.ಮಾಡಲು ಬೆಂಬಲ ನೀಡಿದ್ದು ಇತಿಹಾಸವಲ್ಲವೇ ಎಂದಾಗ ರಘೋತ್ತಮರಾವ್ ಹೇಳಿದ್ದು ಸಾರ್ ಇದೊಂದು ತಪಸ್ಸು ಸಾರ್, ನೀವೂ ಬಿದ್ಧ ಶ್ರಮ ನಿಜಕ್ಕೂ ಅಧ್ಭುತ ಎಂದರು. ಯಾವೊದೋ ಕಾಲದಲ್ಲಿಯೇ ನಿರ್ಣಯ ಆಗಿರಬೇಕು. ಇಲ್ಲಿ ಯುದ್ಧ ದೇವಾಲಯ ನಿರ್ಮಾಣವಾಗುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ನನಗೆ ತಿಳಿದಂತೆ ಈ ಯೋಜನೆಗೆ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು  ಹಾಕಿದ ಶ್ರಮ ನಿಜಕ್ಕೂ ವರ್ಣಿಸಲು ಸಾಧ್ಯಾವಿಲ್ಲ. ಅವರ ನಾಲ್ಕನೇ ಸಂಸದರ ಅವಧಿಯ ಅರ್ಧ ಸಮಯ ಈ ಯೋಜನೆಗೆ ಮೀಸಲಾಗಿದೆ ಎಂದರೆ ತಪ್ಪಾಗಲಾರದು.