19th April 2024
Share

 GOK BUDGET # WATER DRAIN # CORPORATION # BOGUS DATA

2019-2020  ರ ಮುಂಗಡ ಪತ್ರವನ್ನು ಫೆಬ್ರವರಿ 8 ರಂದು ಆಗಿನ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಮಂಡಿಸಿದ ಮುಂಗಡ ಪತ್ರದಲ್ಲಿನ 232  ನೇ ವಿಷಯವಾದ ನಗರ ಪ್ರದೇಶಗಳಲ್ಲಿ ಪ್ರವಾಹ ಘಟನೆಗಳನ್ನು ತಡೆಗಟ್ಟಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ 3 ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಬೃಹತ್ ಮಳೆ ನೀರು ಕಾಲುವೆಗಳನ್ನು ಬಾಹ್ಯ ಅನುದಾನ ಆಧಾರಿತ  (EAP)ಯೋಜನೆಯಡಿಯಲ್ಲಿ ಪುನರ್ ನಿರ್ಮಿಸಲು ಉದ್ದೇಶಿಸಲಾಗಿದೆ.’

  ನೋಡಿ ಈ ಯೋಜನೆ ಎಷ್ಟು ಸೊಗಸಾಗಿದೆ. ಈ ಯೋಜನೆಯನ್ನು ಮುಂಗಡ ಪತ್ರದಲ್ಲಿ ಸೇರಿಸಿದ ಪುಣ್ಯಾತ್ಮನಿಗೆ ನಾಗರೀಕ ಸನ್ಮಾನ ಮಾಡಬೇಕು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ನಗರಕ್ಕೆ ಈ ಭಾರಿ ಮುಂಗಡ ಪತ್ರದಲ್ಲಿ ಯಾವ ಯೋಜನೆ ಸೇರಿಸಬೇಕು ಎಂದು ಕೇಳಿದಾಗ ನಾನು ಅವರಿಗೆ ಹೇಳಿದ್ದು ಮೊದಲು ಕಳೆದ ಮುಂಗಡ ಪತ್ರದ ಯೋಜನೆಗಳನ್ನು ಜಾರಿ ಮಾಡಲು ಶ್ರಮಿಸಿ, ಎಂದು ಹೇಳಿ ಈ ಯೋಜನೆ ಬಗ್ಗೆ ಮನವರಿಕೆ ಮಾಡಿದೆ. ತಕ್ಷಣ ಅವರ ಧಾಟಿಯಲ್ಲಿ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದು ಈ ಯೋಜನೆ ಜಾರಿಗೆ ಶ್ರಮಿಸುತ್ತಿದ್ದಾರೆ.

  ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ನಾನು ಈ ವಿಚಾರ ಪ್ರಸ್ತಾಪ ಮಾಡಿದೆ. ಪಾಲಿಕೆ ಅಧಿಕಾರಿಗಳು ಈ ಯೋಜನೆ ಇಲ್ಲ ಎಂದು ಖಡಕ್ ಆಗಿ ಹೇಳಿದರು. ನನಗೆ ಗೊತ್ತಿತ್ತು ಈ ಅಧಿಕಾರಿಗಳ ಯೋಗ್ಯತೆ ಏನು ಎಂದು. ಅದಕ್ಕೋಸ್ಕರ ಮುಂಗಡ ಪತ್ರವನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗಿದ್ದೆ. ಜಿಲ್ಲಾಧಿಕಾರಿಗಳಿಗೆ ನೀಡಿದೆ, ಅವರು ಓದಿ ಈ ರೀತಿ ಸುಳ್ಳು ಹೇಳಬೇಡಿ ನೋಡಿ ಇವರು ಹೇಗೆ ಮಾಹಿತಿ ಇಟ್ಟುಕೊಂಡಿದ್ದಾರೆ ಎಂದು ಕಠಿಣ ಶಬ್ಧಗಳಲ್ಲಿ ಸೂಚಿಸಿದರು.

  ನಾನು ತಕ್ಷಣ ಸಾರ್ ತುಮಕೂರು ನಗರದಲ್ಲಿ ಕೇವಲ 24  ಕೀಮೀ ರಾಜಕಾಲುವೆ ಮತ್ತು ಮಳೆನೀರಿನ ಚರಂಡಿ ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ ಎಂದಾಗ ಇಲ್ಲ ಸಾರ್ ನಾವು ಈ ಮಾಹಿತಿ ನೀಡಿಲ್ಲ ಎಂದು ಪಾಲಿಕೆ ಇಇ ಶ್ರೀಮತಿ ಆಶಾ ಸಭೆಯಲ್ಲಿ ಹೇಳಿದರು. ನಾನು ಲಿಖಿತ ದಾಖಲೆ ಇಲ್ಲದೆ ಮೌನವಾದೆ.

 ನಂತರ ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರ ಜೊತೆ ನಗರಾಭಿವೃದ್ಧಿ ಇಲಾಖೆ ಜೆಡಿ ಬಳಿ ಸಮಾಲೋಚನಾ ನಡೆಸಿದಾಗ ಈ ಯೋಜನೆ ಪರಿಕಲ್ಪನೆ ವರದಿ ತಯಾರಿಸಲು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತಕ್ಕೆ ಬರೆದ ಪತ್ರವನ್ನು ನೀಡಿದರು.

  ಈಗ ನೋಡಿ ದಿನಾಂಕ:29.02.2020  ರಂದು ಪ್ರಜಾವಾಣಿ ವರದಿಗಾರ ಶ್ರೀ ಕೆ.ಜೆ.ಮರಿಯಪ್ಪನವರು ಬರೆದ ವರದಿಯಲ್ಲಿ ಈ ರೀತಿ ಬೋಗಸ್ ಡೇಟಾ ಇದೆ. ಈ ಡೇಟಾ ನೀಡಿದ ಅಧಿಕಾರಿಗಳನ್ನು ಹುಡುಕಿ ನಾಗರೀಕ ಸನ್ಮಾನ ಮಾಡಬೇಕು ಅಥವಾ ನಿಯಮ ಪ್ರಕಾರ ಶಿಕ್ಷೆ ವಿಧಿಸಬೇಕು. ಜಿಲ್ಲಾಧಿಕಾರಿಗಳಾದ ಶ್ರೀ ಡಾ. ರಾಕೇಶ್ ಕುಮಾರ್‌ರವರು ಏನು ಮಾಡುತ್ತಾರೆ ಕಾದು ನೋಡೋಣ.