26th July 2024
Share

ಊರು ಉಪಕಾರ ಬಲ್ಲದು ಹೆಣ ಶೃಂಗಾರ ಬಲ್ಲುದು ಈ ಒಂದು ಗಾದೆ ನನಗೂ ಚೆನ್ನಾಗಿ ಅರ್ಥವಾಗಿದೆ. ಇಂದಿನ ಜನ ಅಧಿಕಾರ, ಶ್ರೀಮಂತಿಕೆ, ಬುದ್ದಿವಂತಿಕೆ, ಸೌಂದರ್ಯ ಇತ್ಯಾದಿಗಳನ್ನು ಖಂಡಿತ ಸಹಿಸುವುದಿಲ್ಲ, ಅದೂ ನನಗೆ ಗೊತ್ತಿದೆ.

ನನಗೆ ಯಾರು ಹೇಳಿರಲಿಲ್ಲ ಬಿದರೆಹಳ್ಳ ಕಾವಲ್‌ನಲ್ಲಿ ಯಾವುದಾದರೂ ಒಂದು ಬೃಹತ್ ಉದ್ದಿಮೆಗೆ ಶ್ರಮಿಸಲು. ನಾನು ಸೋಪನಹಳ್ಳಿ ಕೆರೆಯಲ್ಲಿ ಎಮ್ಮೆಗಳಿಗೆ ನೀರು ಕುಡಿಸಲು ಹೋದಾಗ ಹಠಾತ್ತನೆ 1988 ರಲ್ಲಿ ನನಗೆ ಹೊಳೆದ ಒಂದು ವಿಷಯ ಬೃಹದಾಕಾರವಾಗಿ ಬೆಳೆದು ಇಂದು ರೂ 6300 ಕೋಟಿ ವೆಚ್ಚದ ಬೃಹತ್ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ಬಂದಿದೆ. ಇದಕ್ಕೆ ಅಧಿಕಾರ ಇರಲಿ ಇಲ್ಲದಿರಲಿ ಸುಮಾರು 30  ವರ್ಷಗಳ ಕಾಲ ಬೆನ್ನೆಲುಬಾಗಿ ನಿಂತಿದ್ದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ರೈತರು ಸೇರಿದಂತೆ ನೂರಾರು ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪರಿಣಿತರು ಸಹಕಾರ ಅವಿಸ್ಮರೀಣಿಯ, ಇದರ ಪೂರ್ಣ ಯಶಸ್ಸು ಸಂಸದರಿಗೆ ಸಲ್ಲಬೇಕು.

  ನನಗೆ ನೀರಾವರಿ ಹುಚ್ಚು ಹತ್ತಿಸಿದ್ದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಅದಕ್ಕೋಸ್ಕರವೇ ಜಲಪೀಠ ಸ್ಥಾಪನೆಗೆ ಚಿಂತನೆ, ನನಗೆ ಅಭಿವೃದ್ಧಿ ಹುಚ್ಚು ಹತ್ತಿಸಿದ್ದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಅದಕ್ಕೋಸ್ಕರವೇ ಅಭಿವೃದ್ಧಿ ಪೀಠ ಸ್ಥಾಪನೆಗೆ ಚಿಂತನೆ, ನನಗೆ ಧಾರ್ಮಿಕವಾಗಿ ತಿಳಿದೋ ತಿಳಿಯದೆಯೋ ಶಕ್ತಿಪೀಠ ಹುಚ್ಚು ಹತ್ತಿಸಿದ್ದು ನನ್ನ ಗುರುಗಳಾದ ಹಿಂದಿ ಮಾಸ್ಟರ್ ಶ್ರೀ ಹನುಂತಯ್ಯನವರು ಅದಕ್ಕೋಸ್ಕರವೇ ಶಕ್ತಿಪೀಠ ಸ್ಥಾಪನೆಗೆ ಚಿಂತನೆ ಮಾಡಿ ಈ ಮೂರು ಯೋಜನೆಗಳ ಕ್ಯಾಂಪಸ್‌ನ್ನು ನನಗೆ ಗೊತ್ತಿಲ್ಲದ ಯಾವುದೋ ಒಂದು ಊರಿನಲ್ಲಿ ಶಕ್ತಿದೇವತೆ ತಾಯಿ ಸ್ಥಾಪಿಸಲು ಅವಕಾಶ ಕಲ್ಪಿಸಿದ್ದಾಳೆ. ಶಕ್ತಿಪೀಠ ಫೌಂಡೇಷನ್ ಸಂಪೂರ್ಣವಾಗಿ ಈ ಯೋಜನೆ ಜಾರಿಗೆ ಶ್ರಮಿಸಲಿದೆ.

ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ನಿರ್ಮಿಸಲೂ ನನಗೆ ಯಾರು ಹೇಳಿರಲಿಲ್ಲ. ಬಿದರೆಹಳ್ಳ ಕಾವಲ್‌ನಲ್ಲಿ ಸುಮಾರು 757 ಜನ ಬಗರ್ ಹುಕುಂ ಅರ್ಜಿ ಹಾಕಿಕೊಂಡು ಉಳುಮೆ ಮಾಡುತ್ತಿದ್ದ ರೈತರು, ಜನಜಾನುವಾರುಗಳನ್ನು ಮೇಯಿಸುತ್ತಿದ್ದ ನೂರಾರು ಜನರ ಬದುಕು ಕಸಿಯಿತೇನೋ ಅನ್ನೋ ಮನೋಭಾವನೆ ನನ್ನಲ್ಲಿ ಬಂದಾಗ ನಾನು ಶ್ರೀ ಜಿ.ಎಸ್.ಬಸವರಾಜ್‌ರವರಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದೆ. ಅವರು ಹಿಂದೂ ಮುಂದೂ ನೋಡದೆ ಎಸ್ ಅಂದದ್ದು ಇತಿಹಾಸ.

 ಪ್ರಸ್ತುತ ಅವರಿಗೆ ಅಧಿಕಾರ ಬಂದಿದೆ.  ಪೂರಕವಾಗಿ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೆ ತಂದಿದ್ದಾರೆ. ಈ ಆದರ್ಶ ಗ್ರಾಮ ಯೋಜನೆಗೆ ಸಂಸದರು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಂಸದರ ಮನವಿ ಮೇರೆಗೆ ಎಚ್.ಎ.ಎಲ್. ಸ್ಮಾರ್ಟ್ ವಿಲೇಜ್ ನಿರ್ಮಿಸುವ ಸಂಬಂದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಮಾಹಿತಿ ನೀಡಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಯವರು ಮತ್ತು ಸಂಸದರು ಈ ವಿಚಾರ ಮುಖ್ಯ ಮಂತ್ರಿಯವರಿಗೂ ಬೇಕಿತ್ತಾ ಎಂಬ ಭಾವನೆ ವ್ಯಕ್ತಪಡಿಸಿದರೂ ನನಗೆ ಇದರ ಅಗತ್ಯವಿದೆ ಎನಿಸಿದೆ.

ನನ್ನ ಪರಿಕಲ್ಪನೆ ಇಡೀ ವಿಶ್ವದಲ್ಲಿಯೇ ಗ್ರಾಮೀಣಾಭಿವೃದ್ಧಿಯಲ್ಲಿ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯಾಗಿ ಅಧ್ಯಯನ ಮಾಡಲು ದೇಶ ವಿದೇಶಗಳ ಜನತೆ ಇಲ್ಲಿಗೆ ಬರುವಂತಾಗಬೇಕು. ಇಲ್ಲಿ ಬಡತನವೇ ಇರಬಾರದು, ವಾಸಿಸುವ ಪ್ರತಿಯೊಬ್ಬರೂ ತೆರಿಗೆ ಕಟ್ಟುವಂತೆ ಅಭಿವೃದ್ಧಿಯಾಗಬೇಕು. ಇದು ಡೇಟಾ ಸಿಟಿಯ ತವರು ಆಗಬೇಕು ಎಂಬುದಾಗಿದೆ.

ಮೊದಲು ಎಚ್.ಎ.ಎಲ್ ಸುತ್ತಲೂ ಇರುವ 11  ಗ್ರಾಮಗಳ ಅಭಿವೃದ್ಧಿಗೆ ಚಿಂತನೆ ಮಾಡಲಾಗಿತ್ತು, ನಂತರ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಬಳಿ ಸಮಾಲೋಚನೆ ನಡೆಸಿದಾಗ, ಪತ್ರ ವ್ಯವಹರಿಸಿದಾಗ ಎಚ್.ಎ.ಎಲ್ ಸುತ್ತವಿರುವ  5 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲು ಉನ್ನತ ಮಟ್ಟದ ಅಧಿಕಾರಿಗಳು ಸೂಚಿಸಿದರು.

  ನಂತರ ಕಡಬ ಗ್ರಾಮ ಪಂಚಾಯಿತಿಯ ಜನತೆ ಕಡಬ ಕೆರೆಯಿಂದ ಎಚ್.ಎ.ಎಲ್ ಗೆ ನೀರು ತೆಗೆದುಕೊಂಡು ಹೋಗುವುದರಿಂದ ಅವರ ಪಂಚಾಯಿತಿ ಸೇರ್ಪಡೆ ಮಾಡಲು ವಕೀಲರಾದ ಶ್ರೀ ಬಾಲಾಜಿ ನೇತೃತ್ವದ ತಂಡ ಸಂಸದರಿಗೆ ಮನವಿ ಮಾಡಿದ ನಂತರ ಅವರ ಸಲಹೆ ಮೇರೆಗೆ ಕಡಬ ಗ್ರಾಮ ಪಂಚಾಯಿತಿ ಸೇರ್ಪಡೆ ಮಾಡಲಾಗಿದೆ.

ದೊಣೆಗಂಗಾ ಕ್ಷೇತ್ರದವರು ಕಾರೇಕುರ್ಚಿಯನ್ನು ಸೇರ್ಪಡೆ ಮಾಡಲು ಸಂಸದರಿಗೆ ಕಾರೇಕುರ್ಚಿ ಶ್ರೀ ಸತೀಶ್ ನೇತೃತ್ವದ ತಂಡ ಸಂಸದರಿಗೆ ಮನವಿ ಮಾಡಿದ್ದರಿಂದ, ಈ ಕ್ಷೇತ್ರವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸಂಸದರಿಗೆ ಚಿಂತನೆ ಇದ್ದಿದ್ದರಿಂದ ಈ ಗ್ರಾಮವನ್ನು ಸೇರ್ಪಡೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಗ್ರಾಮ ತಿಪಟೂರು ತಾಲ್ಲೂಕಿನ ಹಿಂಡಿಸ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.

 ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮವಾಗಿ ವ್ಯಾಪ್ತಿಯನ್ನು ಘೋಷಣೆ ಮಾಡಬೇಕಿದೆ. ಇಷ್ಟೆಲ್ಲಾ ಕಸರತ್ತು ಯಾಕೆಂದರೆ ಈ ವ್ಯಾಪ್ತಿಯನ್ನು ಪಾಂಡಿಚೇರಿಯ ಅರೋವೆಲ್ಲಿ ಮಾದರಿಯಲ್ಲಿ, ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ತುಮಕೂರಿನ ನಿಮ್ಜ್ ಮಾದರಿಯಲ್ಲಿ, ರೈತರ,ನಿರುದ್ಯೋಗಿಗಳ  ಸಹಭಾಗಿತ್ವದಲ್ಲಿ, ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ.

  ಪ್ರಪಂಚದ, ದೇಶದ, ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹೋಬಳಿಗಳ, ಪಂಚಾಯಿತಿಗಳ ಮತ್ತು ಗ್ರಾಮಗಳ ಆಸಕ್ತ ಆನೇಕ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮುನ್ನೆಡೆಸುವುದು ಸೂಕ್ತವಾಗಿದೆ. ಈಗಾಗಲೇ  ವೇದಿಕೆ ಸಿದ್ಧವಾಗುತ್ತಿದೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಈ ಸಂಬಂದ ಶ್ರಮಿಸುತ್ತಿದೆ.

  ಬೇಸ್‌ಲೈನ್ ಮ್ಯಾಪ್ ತಯಾರಿ ನಡೆದಿದೆ, ಸಂಸದರ ಆದರ್ಶ ಗ್ರಾಮ ಯೋಜನೆ, ನಮ್ಮ ಗ್ರಾಮ ನಮ್ಮ ಯೋಜನೆ, ಮಿಷನ್ ಅಂತ್ಯೋದಯ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರುರ್‌ರ್ಬನ್ ಯೋಜನೆ, ಅಮೃತ್ ಸಿಟಿ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಮಾರ್ಗದರ್ಶಿ ಸೂತ್ರಗಳ ಅಧ್ಯಯನ ಆರಂಭವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಇಲಾಖೆಯ ಪ್ರತಿಯೊಂದು ಯೋಜನೆಗಳ ಅನುಷ್ಠಾನ ಇಲ್ಲಿ ಅಗಲಿದೆ, ಎಲ್ಲ ಯೋಜನೆಗಳಿಗೂ ಪ್ರಸ್ತಾವಾನೆ ಸಿದ್ಧಪಡಿಸಲು ಸಂಸದರ ಮಾರ್ಗದರ್ಶನದಲ್ಲಿ ಸೂಕ್ತ ಸಂಸ್ಥೆಗಳ ಆಯ್ಕೆ ನಡೆದಿದೆ. ನಿಯಮ ಪ್ರಕಾರ ಸರ್ಕಾರದಿಂದ ಅನುಮತಿ ಪಡೆಯಲು ಪ್ರಸ್ತಾವನೆ ಆರಂಭವಾಗಿದೆ.

ಕೇಂದ್ರ ಸರ್ಕಾರದ ಎಐಸಿಟಿ ಮಾರ್ಗದರ್ಶನದ ಮೇರೆಗೆ ಗುಬ್ಬಿ ಸಿಐಟಿ ಈ ಪ್ರದೇಶವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದೆ. ಆದರೇ ಎಷ್ಟು ಗ್ರಾಮಗಳನ್ನು ತೆಗೆದು ಕೊಳ್ಳಬೇಕು ಎಂಬ ಚಿಂತನೆಯಲ್ಲಿದೆ. ಈ ಬಗ್ಗೆ ಗುಬ್ಬಿ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ.

ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆ ಸಂಪೂರ್ಣ ಅಧ್ಯಯನ ವರದಿ ನೀಡಲು ಮುಂದಾಗಿದೆ, ಮಾರಶೆಟ್ಟಿಹಳ್ಳಿಯವರೇ ಆದ ಶ್ರೀ ರಾಜಶೇಖರಯ್ಯನವರ ಎ 1 ಸಂಸ್ಥೆ, ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ಸೇರಿದಂತೆ ಆನೇಕ ಸಂಸ್ಥೆಗಳು ಮಾಹಿತಿ ಸಂಗ್ರಹಿಸುತ್ತಿವೆ.