20th April 2024
Share

TUMAKURU:SHAKTHIPEETA FOUNDATION

ಎಂಥಹ ಜಗಭಂಡಾ ಇದ್ದರೂ ಕೊರೊನಾ ಟೆಸ್ಟ್ ಮಾಡಿಸಲು ಹೋದಾಗ ಆತಂಕ ಸಾಮಾನ್ಯವೆನಿಸುತ್ತಿದೆ. ಜ್ಞಾನೋದಯ ಭಾವನೆ  ಶೇ 99 ರಷ್ಟು ಗುಣಮುಖರಾಗಿದ್ದರೂ ಶೇ 1 ರಲ್ಲಿ ನಾನು ಯಾಕೆ ಇರಬಾರದು ಎಂಬ ಭಾವನೆ ಬರಲಿದೆ. ಏಕೆಂದರೆ ಈ ಜೀವದಲ್ಲಿ ಏನೇನು ರೋಗಗಳಿವೆ ಎಂಬುದು ಯಾರಿಗೆ ಗೊತ್ತು?

 ಕಳೆದ ಸೋಮವಾರ (13.07.2020)ಸಂಜೆ ಮೈಬಿಸಿಯಾಯಿತು, ಸ್ವಲ್ಪ ಒಣಕೆಮ್ಮು ಆರಂಭವಾಯಿತು, ಕೆಮ್ಮಿದರೆ ಸಾಕು ಮನೆಯ ಜನರಿಗೆ ಅನುಮಾನ, ಎಷ್ಟು ತಡೆಯಲು ಸಾಧ್ಯಾ? ಡಾಕ್ಟರ್‌ಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಕೆಲವು ಮಾತ್ರೆ ಹೇಳಿ ತೆಗೆದುಕೊಳ್ಳಲು ಸಲಹೆ ನೀಡಿದರು. ಕೋವಿಡ್ ಸೋಂಕಿತರಿಗೆ ಮಾಡಿಸುವ ವಿಧಾನಗಳನ್ನು ಮಾಡಲು ಸಲಹೆ ನೀಡಿದರು.

 ಮನೆಯಿಂದ ಹೊರಹೋಗದಿರಲು ನಿರ್ಧರಿಸಿದೆ, ಯಾರಾದರೂ ಪರವಾಗಿಲ್ಲ ಮನೆಯ ಒಳಗಡೆ ಪ್ರವೇಶಕ್ಕೆ ನಿಷೇಧ, ಪೋನ್ ಸೈಲೆಂಟ್ ಮೋಡ್, ಮನೆಯನ್ನು ಮಾನಸಿಕವಾಗಿ ಎರಡು ಭಾಗ ಮಾಡಲಾಯಿತು,  ನಾನೊಂದು ಭಾಗದಲ್ಲಿ ಇರುವುದು, ನಾನೇ ಸಪರೇಟ್ ಬಾತ್ ರೂಂ ಬಳಸುವುದು, ಮನೆಯ ಯಾರು ಸಹ ಹತ್ತಿರಬರಬಾರದು, ತಿಂಡಿ ಊಟ ತಿಂದ ಪಾತ್ರೆಗಳನ್ನು ನಾನೇ ಸ್ವಯಂ ತೊಳೆಯುವುದು ಆರಂಭವಾಯಿತು.

 ದಿನಕ್ಕೆರಡು ಬಾರಿ ಉಪ್ಪಿನ ನೀರು ಮತ್ತು ನಿಂಬೆಹಣ್ಣಿನ ರಸದಿಂದ ಬಾಯಿ ಮುಕ್ಕುಳಿಸುವುದು, ಮೂಗಿನೊಳಗೆ ನಿಂಬೆ ರಸ ಬಿಟ್ಟು ಕೊಂಡು ಗಂಟಲಿನಿಂದ ಬರುವ ದ್ರವವನ್ನು ಕ್ಯಾಕರಿಸಿ ಉಗಿಯುವುದು. ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವುದು, ಬಿಸಿನೀರಿಗೆ ಒಂದು ಬಾರಿ ಟಾರ್ಗೆಟ್, ಇನ್ನೊಂದು ಬಾರಿ ತ್ರಿಫಲ ಹಾಕಿಕೊಳ್ಳಲಾಯಿತು. ನಂತರ ಮೂಗಿನ ಒಳ್ಳೆಗೆ ಕೊಬ್ಬರಿ ಎಣ್ಣೆ ಹಚ್ಚುವುದು.

 ಸಾಧ್ಯವಾದಷ್ಟು ಬಾರಿ ಬಿಸಿನೀರು ಕುಡಿಯುವುದು, ಬಿಸಿ ಪದಾರ್ಥ ಸೇವನೆ, ದೇಹದ ಬಲ ಹೆಚ್ಚಿಸಿಕೊಳ್ಳಲು ಕೆಲವು ಆಯುಷ್ ಮಾತ್ರೆ ಮತ್ತು ದ್ರವದ ಸೇವನೆ, ಜೊತೆಗೆ ಮನೆಯಲ್ಲಿಯೇ ಅಗ್ನಿ ಹೋತ್ರ ಹೋಮ ಮಾಡಲು ಆರಂಭಿಸಿದೆ. ಡಾಕ್ಟರ್ ಸೂಚಿಸಿದ ಮೂರು ವಿಧವಾದ ಮಾತ್ರೆಗಳನ್ನು ತೆಗೆದು ಕೊಳ್ಳಲಾಯಿತು, ಜ್ವರ ಕೆಮ್ಮು ಕಡಿಮೆಯಾಯಿತು.

 ಶ್ರೀ ಜಿ.ಎಸ್.ಬಸವರಾಜ್ ರವರ ಫೋನ್ ರಿಸೀವ್ ಮಾಡಿ ಎರಡು ದಿವಸದಿಂದ ಜ್ವರ ಬಂದಿತ್ತು ಎಂದ ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಲು ಸಲಹೆ ನೀಡಿದರು. ಅವರು ಒಬ್ಬರನ್ನು ಬಿಟ್ಟು ನಾನು ಸಂರ್ಕಮಾಡಿದ ಯಾರು ಸಹ ಟೆಸ್ಟ್ ಮಾಡಿಸಿಕೊಳ್ಳಲು ಸಲಹೆ ನೀಡಲಿಲ್ಲ. ನಾನು ಮಾಡಿಸುತ್ತೇನೆ ಎಂದು ಸುಮ್ಮನಾದೆ. ಸಂಜೆ ಪುನಃ ಪೋನ್ ಮಾಡಿ ವಿಚಾರಿಸಿದಾಗ ಎಲ್ಲಾ ಕಡಿಮೆಯಾಗಿದೆ ಸಾರ್ ಎಂದರೂ ಕೇಳಲಿಲ್ಲ, ಜಿಲ್ಲಾ ಸರ್ಜನ್‌ರವರಿಗೆ ಕರೆ ಮಾಡಿ ಟೆಸ್ಟ್ ಮಾಡಲು ಸೂಚಿಸಿದರು.

 ಗುರುವಾರ ಬೆಳಿಗ್ಗೆ ಪುನಃ ಪೋನ್ ಮಾಡಿ ಯಾಕೆ ಟೆಸ್ಟ್ ಮಾಡಿಸಲಿಲ್ಲ ಎಂದರು ಸಾರ್ 9 ಗಂಟೆಗೆ ಹೋಗುತ್ತೇನೆ ಎಂದು ಹೇಳಿದೆ, 10 ಗಂಟೆಗೆ ಪೋನ್ ಬಂದಾಗ ರಿಸೀವ್ ಮಾಡಲಿಲ್ಲ, ಜಿಲ್ಲಾ ಸರ್ಜನ್‌ಗೆ ಹೇಳಿ ಪೋಲೀಸ್ ಮತ್ತು ಆಂಬುಲೆನ್ಸ್ ಕರೆದುಕೊಂಡು ಹೋಗಿ ಎತ್ತಿಹಾಕಿಕೊಂಡು ಬಂದು ಟೆಸ್ಟ್ ಮಾಡಿಸಲು ಖಡಕ್ ಸೂಚಿಸಿದ್ದಾರೆ ಎಂಬ ಮಾಹಿತಿ ರಕ್ಷಿತ್‌ನಿಂದ ತಿಳಿಯಿತು.

 ಜಿಲ್ಲಾ ಸರ್ಜನ್‌ರವರು ಕರೆ ಮಾಡಿ ವಿಷಯ ತಿಳಿಸಿದರು, ನನಗೆ ಜಿಎಸ್‌ಬಿರವರ ಎಲ್ಲಾ ಆಟಗೊತ್ತಿದೆ, ಇನ್ನೊಂದು ರಾಮಾಯಣ ಬೇಡ ಎಂದು ನಾನೇ ಬರುತ್ತೇನೆ ಸಾರ್ ಎಂದೆ, ಅವರು ಪ್ರಜಾವಾಣಿ ಫೊನ್ ಇನ್ ಕಾರ್ಯಕ್ರಮಕ್ಕೆ ಹೋಗಿ 11.30 ಗಂಟೆಗೆ ಬರುತ್ತೇನೆ ಎಂದಾಗ ನಾನು ಆವೇಳೆಗೆ ಬರುವುದಾಗಿ ತಿಳಿಸಿದೆ.

 ನೋಡಿ ಇಷ್ಟೆಲ್ಲಾ ಏಕೆ ಹೇಳಿದೆ ಎಂದರೆ ನನಗೂ ಸ್ವಲ್ಪ ಎಲ್ಲೋ ಭಯದ ವಾತವಾರಣ ಮನಸ್ಸಿನಲ್ಲಿ ಬಂತು, ರಸ್ತೆ ಸೀಲ್ ಡೌನ್, ಮನೆ ಮುಂದೆ ತಗಡು, ಸತ್ತಾಗ ಮುಚ್ಚುವ ರೀತಿ, ಕೋವಿಡ್ ಪಾಸಿಟೀವ್ ಎಂದ ತಕ್ಷಣ ಪ್ರಪಂಚವೇ ದೂರ, primary contact, ಇದೆಲ್ಲಾ ಟಿವಿಯಲ್ಲಿ ನೋಡಿದ ಚಿತ್ರಗಳು ಕಣ್ಣುಗಳ ಮುಂದೆ ಬಂದವು.

 ಜೊತೆಗೆ ಆಸ್ಪತ್ರೆಗೆ ಹೋದರೂ ಔಷಧಿಯಿಲ್ಲ, ಅವರು ನೀಡುವ ಉಪಚಾರಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳೋಣ ಎಂಬ ಭಾವನೆ. ಕೊನೆಗೂ ಸಂಸದರ ಸೂಚನೆ ಮೇರೆಗೆ ಆಸ್ಪತ್ರೆಗೆ ಹೊರಡಲು ರೆಡಿಯಾದೆ, ಮನೆಯರವರನ್ನು ಕರೆದು ನಾನು  ಶೇ 99.99 ಬರುತ್ತೇನೆ, ಆಕಸ್ಮಾತ್ ಬರದೆ ಇರಬಹುದು ಎಂಬ ಪಾಠಮಾಡಲೇ ಬೇಕಾಯಿತು, ಸಾಲ ಸೂಲದ ವಿಷಯಗಳು, ಹಣಕಾಸಿನ ವ್ಯವಹಾರಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿ ಹೊರಟಾಗ ಏನೂ ಅನಿಸಲಿಲ್ಲ.

 ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿ ಬಂದಾಗ ಪಲಿತಾಂಶ ಬರುವವರೆಗೂ ನಿಜಕ್ಕೂ ಮನಸ್ಸಿನಲ್ಲಿ ಏನೇನೊ ಭಾವನೆ, ಜೀವನದ ಮಜಲುಗಳ ನೆನಪು, ಇಷ್ಟಕ್ಕೆ ಇಷ್ಟೆಲ್ಲಾ ಬೇಕಾ ಎಂಬ ಅನಿಸಿಕೆ, ಒಂದು ವಿಶಿಷ್ಟವಾದ ಅನುಭವ ನನಗಂತೂ ಆಯಿತು.

ಪಲಿತಾಂಶ ನೆಗೆಟೀವ್ ಬಂದಾಗ ಸ್ವಯಂ ಒಂದು ವಾರ ಪುನಃ ಮನೆಯಲ್ಲಿಯೇ ಇದ್ದು, ಇದೇ ಪದ್ಧತಿ ಮುಂದುವರೆಸಲು ತಿರ್ಮಾನಿಸಿದ್ದೇನೆ.

 ದಯವಿಟ್ಟು ಯಾರು ಉದಾಸೀನ ಮಾಡಬೇಡಿ, ಮನೆಯಲ್ಲಿ ಹಿಂದಿನ ಕಾಲದಲ್ಲಿ ಹೇಳುತ್ತಿದ್ದ ಎಲ್ಲಾ ಕಾರ್ಯಕ್ರಮಗಳೇ ಕೋವಿಡ್‌ಗೆ ಔಷಧಿ ಎಂದು ತಿಳಿದು ಕೊಳ್ಳಿ, ಅವುಗಳನ್ನು ಜಾರಿಗೆ ತನ್ನಿ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಅನಗತ್ಯ ಬೇಟಿಗೆ ಕಡಿವಾಣ, ದಿನಚರಿ ಬದಲಾವಾಣೆ ಮಾಡಿಕೊಂಡು ಕಾಲಕ್ಕೆ ತಕ್ಕಂತೆ ನಡೆಯಲೇ ಬೇಕು.

 ವರ್ಷ ಪ್ರಾಣ ಉಳಿಸಿ ಕೊಳ್ಳುವ ಅವಧಿ, ನಂತರ ಸಾಯುವವರೆಗೂ ದುಡಿಯಿರಿ ಯಾರು ಬೇಡ ಎನ್ನುತ್ತಾರೆ? ಮನೆಯಲ್ಲಿ ಇದ್ದಾಗ ಹಿಂದಿನ ಕಾಲದ ಪದ್ಧತಿ ಬಗ್ಗೆ ಮೆಲುಕು ಹಾಕಿದರೇ ಸಾಕು.

  ನೋಡಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವವರ ಮನಸ್ಸಿನ ಭಾವನೆ ಕೇಳುವರು ಯಾರು, ಆರಕ್ಷರು, ಆಶಾ ಕಾರ್ಯಕರ್ತೆಯರು, ವೈದ್ಯರು, ವಿವಿಧ ಅಧಿಕಾರಿಗಳು ಇವರ ಕುಟುಂಬದವರ ಬಿಪಿ, ಶುಗರ್ ಪ್ರತಿ ನಿತ್ಯ ಚೆಕ್ ಮಾಡಿದರೆ ಮಾತ್ರ ಸ್ಪಷ್ಟ ಚಿತ್ರಣ ದೊರೆಯ ಬಹುದು.

ನಮ್ಮ ಚೆಲ್ಲಾಟ ಎಷ್ಟು ಜನಕ್ಕೆ ಪ್ರಾಣ ಸಂಕಟ ಯೋಚಿಸಿ, ಸರ್ಕಾರದಿಂದ ಏನೂ ಮಾಡಲು ಸಾಧ್ಯಾವಾಗುವುದಿಲ್ಲ, ಜನರ ಜೀವನ ಶೈಲಿಯೇ ಪರಿಹಾರವಾಗ ಬಹುದು?