![](https://epaper.shakthipeeta.in/wp-content/uploads/2021/02/Capture.png)
TUMAKURU:SHAKTHIPEETA FOUNDATION
‘ಈ ಆಯವ್ಯಯದಲ್ಲಿ ತುಮಕೂರು ಜಿಲ್ಲೆಗೆ ಅಥವಾ ಕರ್ನಾಟಕ ರಾಜ್ಯಕ್ಕೆ ಏನು ಬಂದಿದೆ ಎಂದರೆ, ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ತಾಕತ್ತು ಎಂದು ಹೇಳಬಹುದು, ಸೂಕ್ತ ಪ್ರಸ್ತಾವನೆ ಸಲ್ಲಿಸಿ ತಾಕತ್ತು ಇದ್ದವರು ಯೋಜನೆ ಮಂಜೂರು ಮಾಡಿಸಿಕೊಳ್ಳಿ ಎಂಬ ಸಂದೇಶವನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ಸಾರಿದ್ದಾರೆ ಮೋದಿಯವರು, ಇದು ನಿಜಕ್ಕೂ ಒಳ್ಳೆಯದು’
ಕೇಂದ್ರ ಸರ್ಕಾರದ 2021-2022 ನೇ ಸಾಲಿನ ಆಯವ್ಯಯದಲ್ಲಿ ಪೆಟ್ರೋಲ್ ಡಿಸೆಲ್ ದುಬಾರಿ ಯಾಗುವುದರಿಂದ ರೈತರಿಂದ ಆರಂಭಿಸಿ, ಪ್ರತಿಯೊಂದು ವರ್ಗಕ್ಕೂ ಭಾರಿ ಅನ್ಯಾಯವಾಗಲಿದೆ. ಇಲ್ಲಿ ರೈತರು ಬಳಸುವ ಡಿಸೆಲ್, ಪೆಟ್ರೋಲ್ಗೆ ಅಥವಾ ರೂ 10 ಲಕ್ಷ ಆದಾಯ ಮಿತಿ ಇರುವವರಿಗೂ ಪೆಟ್ರೋಲ್ ಡಿಸೆಲ್ ಕೃಷಿ ಸೆಸ್ ರಿಯಾಯಿತಿ ನೀಡಬಹುದಿತ್ತು. ಇದು ನುಂಗಲಾರದ ತುತ್ತಿನಂತಾಗಿದೆ, ’ಅಕ್ಕಿಯ ಮೇಲೂ ಪ್ರೀತಿ-ನಂಟರ ಮೇಲೂ ಪ್ರೀತಿ’ ಎಂಬ ಪರಿಸ್ಥಿತಿ ಇರುವದರಿಂದ ಪರ್ಯಾಯ ಮಾರ್ಗ ಕಷ್ಟ.
ಲಾಕ್ಡೌನ್ ವೇಳೆಯಲ್ಲಿ ಮನೆಯಲ್ಲಿದ್ದು ಖರ್ಚು ಕಡಿಮೆ ಮಾಡಿದ್ದೇವೂ, ಈ ವರ್ಷ ಮನೆಯಿಂದ ಹೊರಗಡೆ ಓಡಾಡಿದರೂ ’ಖರ್ಚು ಕಡಿಮೆ ಮಾಡಿ ದೇಶ ಉಳಿಸಿ’ ಎಂಬ ಸಂದೇಶವನ್ನು ಆಯವ್ಯಯದಲ್ಲಿ ನಿರ್ಮಲಕ್ಕನವರೂ ಘೋಷಣೆ ಮಾಡಿದ್ದಾರೆ.
‘ದೇಶದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್, ರೈಲ್ವೇ ಕಾರಿಡಾರ್, ಹೈವೇ ಕಾರಿಡಾರ್ ಭರ್ಜರಿ ಘೋಷಣೆಯಾದರೂ, ನದಿ ಜೋಡಣೆ ಅಥವಾ ರಿವರ್ ಕಾರಿಡಾರ್ ಯೋಜನೆ ಎಲ್ಲೂ ಕಾಣಲಿಲ್ಲ. ಇದರ ಮರ್ಮ ಏನು ಎಂಬುದನ್ನು ಪ್ರಧಾನಿ ಶ್ರೀ ನರೇಂದ್ರಮೋದಿಯವರೇ ಜನತೆಗೆ ಉತ್ತರಿಸಬೇಕು’
ಈ ಭಾರಿಯೂ ಕಾಲಮಿತಿ ಯೋಜನೆಗಳ ಘೋಷಣೆ ಮಾಡಿರುವುದು ಸ್ವಾಗಾತಾರ್ಹ. ಆತ್ಮನಿರ್ಭರ ಬಾರತ, ಪಿಎಂ ಆತ್ಮನಿರ್ಭರ ಸ್ವಚ್ಚ ಭಾರತ, ರೈತರ ಆದಾಯ ದ್ವಿಗುಣ, ಕೃಷಿ ಬೆಂಬಲ ಬೆಲೆ ಹೆಚ್ಚಳ, ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿ, ಒನ್ ನೇಷನ್-ಒನ್ ರೇಷನ್ ಕಾರ್ಡ್, ಸ್ವಾಮಿತ್ವ, ಮೂಲಭೂತ ಸೌಕರ್ಯ ಅಭಿವೃದ್ಧಿ, ಜಲಮಿಷನ್ ಇವೆಲ್ಲಾ ಈಗಾಗಲೇ ಸುದ್ದಿಯಲ್ಲಿದ್ದರೂ ಇವೆಲ್ಲಾ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಯೋಜನೆಗಳಾಗಿವೆ.
ರಾಷ್ಟ್ರಿಯ ಮೂಲಭೂತ ಪೈಪ್ಲೈನ್ ಯೋಜನೆಗಳಲ್ಲಿ ನೋಂದಾಯಿಸಿರುವ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ನಿಜಕ್ಕೂ ಅತ್ಯುತ್ತಮವಾಗಿದೆ, ಇವೆಲ್ಲಾ ರಾಜ್ಯ ಸರ್ಕಾರಗಳ ನೀಡ್ ಬೇಸ್ಡ್ ಯೋಜನೆಗಳಾಗಿರುತ್ತವೆ. ಇದು ಒಂದು ತರಹ ’ಓಡುವ ಕುದುರೆಗೆ ಹುರುಳಿ ಹಾಕಿದ ಹಾಗೆ’ ಎಂಬ ಗಾದೆ ಮಾತಿಗೆ ಪೂರಕವಾಗಿದೆ. ಯಾವ ರಾಜ್ಯ ನಮಗೆ ಈ ಯೋಜನೆ ಅಗತ್ಯವಿದೆ ಎಂದು ನೋಂದಾಯಿಸಿಕೊಂಡಿದ್ದಾರೋ ಅವರಿಗೆ ಬಂಪರ್. ಸೋಮಾರಿಗಳಿಗೆ ಭಾರಿ ಹೊಡೆತ ಖಂಡಿತವಾಗಿಯೂ ಆಗಲಿದೆ.
17000 ಆರೋಗ್ಯ ಕೇಂದ್ರಗಳ ಸ್ಥಾಪನೆ, 500 ಅಮೃತ ನಗರಗಳ ಘೋಷಣೆ, 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. 7 ಮೆಗಾ ಟೆಕ್ಸ್ಟೈಲ್ ಪ್ರಾರ್ಕ್, ರೈಲ್ವೇ ಮಿಷನ್-2030, 2022 ರೊಳಗೆ ಬ್ರಾಡ್ ಗೇಜ್ಗೆ ಶೇ.100 ರಷ್ಟು ರೈಲ್ವೇ ವಿದ್ಯುದ್ಧೀಕರಣ, 6 ವರ್ಷಗಳಲ್ಲಿ ವಿದ್ಯುತ್ ಸುಧಾರಣೆ, 100 ನಗರಗಳಿಗೆ ಗ್ಯಾಸ್ ಜಾಲ, 100 ನಗರಗಳಿಗೆ ಉಜ್ವಲ ಯೋಜನೆ, 1000 ಗ್ಯಾಸ್ ಏರ್ಜೆನ್ಸಿ, 100 ಸೈನಿಕ ಶಾಲೆ, ಬುಕಟ್ಟು ಪ್ರದೇಶಗಳಲ್ಲಿ 15000 ಹೊಸ ಶಾಲೆಗಳು ಇವೆಲ್ಲಾ ಒಳ್ಳೆಯ ಯೋಜನೆಗಳು.
ರಾಷ್ಟ್ರೀಯ ಭಾಷಾಂತರ ನೀತಿ, ಮಾನವ ರಹಿತ ಬಾಹ್ಯಾಕಾಶ ಯಾನ,ಡಿಜಿಟಲ್ ಗಣತಿ, 75 ವರ್ಷದ ಮೇಲ್ಪಟ್ಟವರಿಗೆ ತೆರಿಗೆ ವಿನಾಯಿತಿ, 5 ಕೋಟಿ ನಿಧಿಯ ಛಾರಿಟಬಲ್ ಟ್ರಸ್ಟ್ಗಳಿಗೆ ತೆರಿಗೆ ರದ್ದು, ಸ್ಟಾರ್ಟ್ಅಫ್ ಗಳಿಗೆ ತೆರಿಗೆ ರಿಯಾಯಿತಿ, ಕಾರ್ಮಿಕರಿಗೆ ಬಾಡಿಗೆ ಮನೆ ನೀಡಿದರೆ ತೆರಿಗೆ ರಿಯಾಯಿತಿ ಇವು ಸಹ ಉತ್ತಮ ಯೋಜನೆಗಳು.
ಅಂತರ ರಾಷ್ಟ್ರೀಯ ಮಟ್ಟದ ಫಿನ್ಟೆಕ್ ಹಬ್, ರಾಷ್ಟ್ರೀಯ ಶಿಕ್ಷಣ ನೀತಿ, ಸಂಶೋಧನೆಗೆ ರೂ 50000 ಕೋಟಿ ಮೀಸಲಿಟ್ಟಿರುವುದು ದೇಶದ ಭವಿಷ್ಯಕ್ಕೆ ಪೂರವಾಗಿದೆ. ಬೆಂಗಳೂರು ಮೆಟ್ರೋ, ಕೊಚ್ಚಿ-ಚನ್ನೈ-ಬೆಂಗಳೂರು ಕಾರಿಡಾರ್, ಮುಂಬೈ- ಕನ್ಯಾಕುಮಾರಿ ಕಾರಿಡಾರ್ ಇವು ದೂರದೃಷ್ಠಿ ಯೋಜನೆಗಳಾಗಿವೆ.