25th April 2024
Share

TUMAKURU:SHAKTHIPEETA FOUNDATION

ಎಲ್ಲಾ ಪಕ್ಷಗಳ ಚುನಾವಣೆಯ ಪ್ರಣಾಳಿಕೆಗಳಲ್ಲಿ ರಂಗು ರಂಗಿನ ಘೋಷಣೆಗಳು ರಾರಾಜಿಸುತ್ತವೆ. ಎಣ್ಣೆ, ದುಡ್ಡು, ಸೀರೆ, ಲುಂಗಿ, ಇತ್ಯಾದಿ ಕೊಟ್ಟಿಲ್ಲವೇ, ಪುಕ್ಸಟ್ಟೆ ಯಾರೂ ಓಟು ಹಾಕಿಲ್ಲ, ಇಂಥ ಮತದಾದರರಿಗೆ ನದಿ ನೀರಿನ ಲೆಕ್ಕ ಯಾಕೆ ಕೊಡಬೇಕು ಎನ್ನ ಬೇಡಿ.

ದಯವಿಟ್ಟು ದಿನಾಂಕ:12.06.2022 ರ ತುಮಕೂರು ಜಿಲ್ಲಾ ದಿಶಾ ಸಭೆಯಲ್ಲಿ ನದಿ ನೀರಿನ ಬಗ್ಗೆ ಚರ್ಚೆ ನಡೆಯಬೇಕು. ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ತಾರ್ಕಿಕ ಅಂತ್ಯ ಹಾಡಲೇಬೇಕು.

ಉಳ್ಳವರು ಶಿವಾಲಯ ಕಟ್ಟುವರು ಎಂದು ಸುಮ್ಮನೇ ಕೂರುವುದು ಒಳ್ಳೆಯದಲ್ಲ. ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ, ತುಂಗಾಭದ್ರಾ ಯೋಜನೆಯಡಿ 11 ವಿಧಾನಸಭಾ ಕ್ಷೇತ್ರವಾರು ಎಷ್ಟು ಹಂಚಿಕೆ ಮಾಡಲಾಗಿದೆ, ಎಷ್ಟು ಬಳಸಲು ಯೋಜನೆ ರೂಪಿಸಲಾಗಿದೆ.

 ಅಲೋಕೇಷನ್ ಆಗಿದ್ದ ನೀರನ್ನು ಯಾರು, ಯಾರು ಕಬಳಿಸಿದ್ದಾರೆ, ಒಂದು ವೇಳೆ ಕಬಳಿಸಿರುವುದು ಹಾಳಾಗಿ ಹೋಗಲಿ. ಎಷ್ಟು ಕೆರೆಗಳಿಗೆ ನದಿ ನೀರಿನಿಂದ ತುಂಬಿಸಲಾಗಿದೆ, ಇನ್ನೂ ಎಷ್ಟು ಕೆರೆಗಳಿಗೆ ನೀರು ತುಂಬಿಸ ಬೇಕಿದೆ. ಬಾಕಿ ಉಳಿದಿರುವ ಕೆರೆಗಳಿಗೆ ನದಿ ನೀರು ತುಂಬಿಸಲು, ಇನ್ನೂ ಎಷ್ಟು ನದಿ ನೀರು ನಿಮ್ಮ ನಿಮ್ಮ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಿದೆ.

ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ  ಪ್ರಸ್ತಾವನೆಯನ್ನಾದರೂ ಸಲ್ಲಿಸಲು ಸಹಕರಿಸಿ. ಜಿಲ್ಲೆಯಲ್ಲಿ ಸರ್ಕಾರಿ ಲೆಕ್ಕದಲ್ಲಿ 1596 ಕೆರೆ-ಕಟ್ಟೆ ಇವೆಯಂತೆ, ಗೂಗಲ್ ಇಮೇಜ್ ನಲ್ಲಿ 4365 ಕೆರೆ-ಕಟ್ಟೆಗಳು ಇವೆಯಂತೆ, ಸರ್ಕಾರಿ ಲೆಕ್ಕದಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಕೆರೆ-ಕಟ್ಟೆಗಳಿವೆ, ಗೂಗಲ್ ಇಮೇಜ್‍ನಲ್ಲಿ ಎಷ್ಟು ಕೆರೆ-ಕಟ್ಟೆಗಳು ಕಾಣುತ್ತಿವೆ. ಇದರಲ್ಲಿ ಸತ್ಯ ಯಾವುದು ಎಂಬ ಬಗ್ಗೆಯಾದರೂ ತಿಳಿದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ’, ಇಲ್ಲಿ ಪಕ್ಷ, ಜಾತಿ, ದ್ವೇಷ, ಅಸೂಯೇ ಬೇಡ, ವಸ್ತು ಸ್ಥಿತಿ ಚರ್ಚೆ ನಡೆಸಿ ಸ್ವಾಮಿ. 84 ವರ್ಷದ ಸಂಸದರೇ ಪತ್ರಿಕೆಯಲ್ಲಿ ತಮ್ಮ ತಮ್ಮ ಹೇಸರು ಹೇಳಿ ಬಹಿರಂಗವಾಗಿ ಮನವಿ ಮಾಡಿದ್ದಾರೆ

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಇಲಾಖೆ, ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ ರೂ 1249 ಕೋಟಿ ವೆಚ್ಚದಲ್ಲಿ’ ನದಿ ನೀರಿನಿಂದ ಕೆರೆ ತುಂಬಿಸಲು ಯೋಜನೆ ರೂಪಿಸುತ್ತಿದೆ.  

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ‘ಆರ್ಥಿಕ ನೆರವು ಮಂಜೂರು ಮಾಡಿಸಲು ಶತ ಪ್ರಯತ್ನ’ ಮಾಡುತ್ತಿದ್ದಾರೆ. ಜೊತೆಗೆ ಉಳಿದಿರುವ ಕೆರೆಗಳಿಗೂ ನದಿ ನೀರಿನ ಯೋಜನೆ ರೂಪಿಸಲು ಶ್ರಮಿಸುತ್ತಿದ್ದಾರೆ.

  ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ, ರಾಜ್ಯದ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೇ ಸಮಗ್ರ ನೀರಾವರಿಗಾಗಿ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಿ ಎಂದು ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಆತ್ಮೀಯ ಶಾಸಕರುಗಳೇ ನೀವೂ ಮೌನವಾಗಿದ್ದರೇ ಹೇಗೆ ಸ್ವಾಮಿ, ಕೇಂದ್ರ ಸರ್ಕಾರ ಹಣ ಕೊಡುತ್ತದೋ, ಬಿಡುತ್ತದೋ, ಪ್ರಸ್ತಾವನೆ ಕಳುಹಿಸುವುದು ನಿಮ್ಮ ಕರ್ತವ್ಯವಲ್ಲವೇ?

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಪ್ರಸ್ತಾವನೆ ಕಳುಹಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಜೊತೆಗೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್‍ರವರು ಸಹ, ಸರ್ಕಾರದ ಮುಖಾಂತರ ಪ್ರಸ್ತಾವನೆ ಸಲ್ಲಿಸಲು ಸಂಸದರಿಗೆ ಸಲಹೆ ನೀಡಿದ್ದಾರೆ.

ಉಳಿದ ವಿಚಾರ ನಿಮಗೆ ಬಿಟ್ಟಿದ್ದು ಸ್ವಾಮಿ. ನೀವೂ ದೊಡ್ಡವರು!