16th September 2024
Share

TUMAKURU:SHAKTHIPEETA FOUNDATION

 ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು, ಬಯಲು ಪ್ರದೇಶಗಳಿಗೆ ಹರಿಸಬಹುದು ಎಂದು ಮೊಟ್ಟ ಮೊದಲು, ಪರಿಚಯಿಸಿದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ಈ ಯೋಜನೆಗೆ   ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣರವರು, ಆಗಿನ ಜಲಸಂಪನ್ಮೂಲ ಸಚಿವ ಶ್ರೀ ಹೆಚ್.ಕೆ.ಪಾಟೀಲ್‍ರವರ ಚಾಲನೆ ನೀಡಿದರೆ, ಅಲ್ಲಿಂದ ಇಲ್ಲಿಯವರೆಗೂ ಆಗಿರುವ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಸೇರಿದಂತೆ, ಮಾಜಿ ಮುಖ್ಯಮಂತ್ರಿ ಶ್ರೀ ವೀರಪ್ಪಮೊಯ್ಯಿಲಿರವರ ಹೆಸರುಗಳನ್ನು ಯೋಜನೆಗೆ ಇಡಬೇಕು ಎಂದು ಸರ್ಕಾರವನ್ನು ತುಮಕೂರು ಕ್ಷೇತ್ರದ ಮಾಜಿ ಲೋಕಸಭಾ  ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಗ್ರಹಿಸಿದ್ದಾರೆ.

  1971 ರಲ್ಲಿ  ರಾಷ್ಟ್ರಪತಿ ಆಡಳಿತವಿದ್ದಾಗ, ಧರ್ಮವೀರವರು ರಾಜ್ಯಪಾಲರಾಗಿದ್ದರು, ಅವರ ಅಡಿಯಲ್ಲಿ ಕಾರ್ಯುನಿರ್ವಹಿಸುತ್ತಿದ್ದ ವರ್ಧನ್ ರವರು,  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನವರನ್ನು ಬೆಂಗಳೂರು ಸರ್ಕಲ್‍ಗೆ ವರ್ಗಾಯಿಸಿದ್ದರೂ, ಅವರು ಇನ್ನವೆಸ್ಟಿಗೇಷನ್ ಸರ್ಕಲ್‍ಗೆ ವರ್ಗಾವಣೆ ಮಾಡಿಸಿಕೊಂಡು ಅರಣ್ಯ ಸುತ್ತಿ, ಸಿದ್ಧಪಡಿಸಿದ ಸುಮಾರು 53 ವರ್ಷಗಳ ಕನಸು ಇದಾಗಿದೆ ಎಂದಿದ್ದಾರೆ.

  ನಂತರ ಬಂದ ಆನೇಕ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಯೋಜನೆಯ ಯಶಸ್ಸಿಗೆ ನಿರಂತರವಾಗಿ ಶ್ರಮಿಸಿದ್ದಾರೆ, ಅವರಿಗೆಲ್ಲಾ ಗೌರವಿಸುವ ಕೆಲಸ ಬಹಳ ಉತ್ತಮವಾಗಿದೆ, ಗೌರಿ ಹಬ್ಬದ ದಿವಸ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಹರ್ಷ ತಂದಿದೆ ಎಂದಿದ್ದಾರೆ.

  ಪರಮಶಿವಯ್ಯನವರು 140 ಟಿ.ಎಂ.ಸಿ ಅಡಿ ನೀರಿನ ಯೋಜನೆ ಜಾರಿ ತರಲು ಒತ್ತಾಯಿಸುತ್ತಿದ್ದರು. ಸರ್ಕಾರ ಪ್ರಾಯೋಗಿಕವಾಗಿ 24 ಟಿ.ಎಂ.ಸಿ ಅಡಿ ನೀರಿನ ಎತ್ತಿನಹೊಳೆ ಯೋಜನೆ ರೂಪಿಸಿದಾಗ, ಅವರು ಪ್ರಭಲವಾಗಿ ವಿರೋದಿಸಿದ್ದರು. ಪೈಪ್ ಬದಲಾಗಿ ಕಾಲುವೆಯನ್ನು ಮಾಡಿಸಲು ಹರಸಾಹಸ ಮಾಡಲಾಯಿತು ಎಂದಿದ್ದಾರೆ.

  ಕೆಲವು ಬದಲಾವಣೆ ಮತ್ತು ಅನಗತ್ಯ ಎನಿಸಿದರು, ಕಾಲುವೆ ನಿರ್ಮಾಣ ಬಹಳ ಪ್ರಮುಖವಾಗಿದೆ. ನಾವು 10000 ಕ್ಯುಸೆಕ್ಸ್ ಸಾಮಾಥ್ರ್ಯದ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ರೂಪಿಸಲು ಶ್ರಮಿದ್ದೆವು.

ಕೊನೆಗೂ ಪೈಪ್ ಬದಲಾಗಿ ಹಾಸನ ಜಿಲ್ಲೆಯ ಹರವನಹಳ್ಳಿಯಿಂದ, ತುಮಕೂರು ಜಿಲ್ಲೆಯ, ಬೈರಗೊಂಡ್ಲುವಿನವರೆಗೆ, ಸುಮಾರು 260 ಕೀ.ಮಿ ದೂರದ ಕಾಲುವೆಗೆ, ಸುಮಾರು 3300 ಕ್ಯುಸೆಕ್ಸ್   ಒಂದೇ ಸಾಮಾಥ್ರ್ಯದ ಕಾಲುವೆ ನಿರ್ಮಾಣ ಮಾಡಿರುವುದು ಒಂದು ವಿಶೇಷ. ಕಾಲುವೆಗೆ ಜಿ.ಎಸ್.ಪರಮಶಿವಯ್ಯ ಹೆಸರಿಡಲೇ ಬೇಕು. ಇದು ಅವರ ಪರಿಕಲ್ಪನೆಯ ಕೂಸಾಗಿದೆ ಎಂದಿದ್ದಾರೆ.

  ಈ ಕಾಲುವೆ ಫ್ರಿಬೋರ್ಡ್ ಸೇರಿದಂತೆ, ಒಂದು ವರ್ಷದ 365 ದಿವಸವೂ ನೀರು ಹರಿಸಿದರೆ, ಸುಮಾರು 140 ಟಿ.ಎಂ.ಸಿ ಅಡಿ ನೀರನ್ನು ಹರಿಸಬಹುದಾಗಿದೆ. ಸುಮಾರು 2000 ರಿಂದ 2500 ಟಿ.ಎಂ.ಸಿ ಅಡಿ ನೀರು ಸಮುದ್ರ ಸೇರಲಿದೆ. ಇದರಲ್ಲಿ ಈ ಕಾಲುವೆ ಮೂಲಕ 140 ಟಿ.ಎಂ.ಸಿ ಅಡಿ ನೀರನ್ನು ತರಲು ರಾಜ್ಯ ಸರ್ಕಾರ ಚಿಂತನೆ ಆರಂಭಿಸಿರುವುದು ಸ್ವಾಗಾತಾರ್ಹ, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೂ ಅಭಿನಂದನೆ ಸಲ್ಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ, ರಾಜ್ಯದ್ಯಾಂತ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಸಮೀಕ್ಷೆ ಶೀಘ್ರವಾಗಿ ಪೂರ್ಣಗೊಳ್ಳ ಬೇಕಿದೆ. ಇದರಿಂದ ಪರಮಶಿವಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದಿದ್ದಾರೆ.

ಜಲಜೀವನ್ ಮಿಷನ್ ಕಾರಿಡಾರ್

  ಯೋಜನೆಯ ವ್ಯಾಪ್ತಿಯ 7 ಜಿಲ್ಲೆಗಳು ಮತ್ತು ಬೆಂಗಳೂರು ನಗರಕ್ಕೆ 24/7 ಮತ್ತು ಜಲಜೀವನ್ ಮಿಷನ್ ಯೋಜನೆಯಡಿ ಮನೆ, ಮನೆಗೆ ನೀರು ಕೊಡಲು, ‘ಜಲಜೀವನ್ ಮಿಷನ್ ಕಾರಿಡಾರ್’ ಆಗಿ ಯೋಜನೆ ಬದಲಾಯಿಸಿ, ಕೇಂದ್ರ ಸರ್ಕಾರವೂ ಶೇ 60 ಹಣ ನೀಡಲು ಪ್ರಸ್ತಾವನೆಯನ್ನು, ರಾಜ್ಯ ಸರ್ಕಾರ ಸಿದ್ಧಪಡಿಸಿ ಕಳುಹಿಸಬೇಕಿದೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ವಿಶೇಷ ಆಸಕ್ತಿ ವಹಿಸಿ ಮಂಜೂರು ಮಾಡಿಸ ಬೇಕಿದೆ ಎಂದಿದ್ದಾರೆ.

 ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಜಗತ್ತಿನ ಪರಿಣಿತ ತಜ್ಞರ ಸಹಕಾರದಿಂದ ಜಲಗ್ರಂಥ @ 2047 ಸಿದ್ಧಪಡಿಸುತ್ತಿದೆ. ಇದರಲ್ಲಿ ರಾಜ್ಯದ ಪ್ರತಿಯೊಂದು ಹಳ್ಳಿಗೂ ನದಿ ನೀರಿನ ಅಲೋಕೇಷನ್ ಮಾಡಲು ವಿಶೇಷ ಒತ್ತು ನೀಡಲಾಗಿದೆ. ಶೀಘ್ರದಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿರುವುದು ಒಳ್ಳೆಯ ಆಲೋಚನೆ ಎಂದಿದ್ದಾರೆ.

ಗಂಗಸಂದ್ರದಲ್ಲಿ ನೀರಾವರಿ ಡಿಜಿಟಲ್ ಗ್ರಂಥಾಲಯ

ತುಮಕೂರು ನಗರದ 11 ನೇ ವಾರ್ಡ್ ಗಂಗಸಂದ್ರದಲ್ಲಿ, ಸುಮಾರು 30 ಗುಂಟೆ ಜಮೀನನನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದೆ. ಈಗ ತುಮಕೂರು ವಿಶ್ವ ವಿದ್ಯಾನಿಲಯ ವಿಶೇಷ ಆಸಕ್ತಿ ವಹಿಸಿದೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಸಹಕಾರ ಸಚಿವ ಶ್ರೀ ಕೆ.ಎನ್.ರಾಜಣ್ಣವರು ಸೇರಿದಂತೆ, ಜಿಲ್ಲೆಯ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು ಕೈಜೋಡಿಸಬೇಕು. ಸರ್ಕಾರ ಈ ಗ್ರಂಥಾಲಯಕ್ಕೆ ‘ರೂ 10 ಕೋಟಿ ಅನುದಾನ’ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

  ನಮ್ಮ ಜೊತೆ ಕಳೆದ 35 ವರ್ಷದಿಂದ ನಿರಂತರವಾಗಿ, ನೀರಾವರಿ ಹೋರಾಟಕ್ಕೆ ಬೆಂಬಲ ನೀಡಿರುವ, ಸಹಕರಿಸಿದ ಮುಖ್ಯಮಂತ್ರಿಯವರು, ಜಲಸಂಪನ್ಮೂಲ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯವರಾದ ದಿ.ಜೆ.ಹೆಚ್.ಪಟೇಲ್ ರವರ ಅವಧಿಯಲ್ಲಿ, ಅರೆಸ್ಟ್ ಆಗಿದ್ದ ಸುಮಾರು 72 ಜನರು, ಸಹಕರಿಸಿದ ಎಲ್ಲಾ ಜಿಲ್ಲೆಯ ಹೋರಾಟಗಾರರ ಮಾಹಿತಿಗಳನ್ನು ಒಳಗೊಂಡ, ಪುಸ್ತಕ ಹೊರತಂದು, ಎಲ್ಲರಿಗೂ ನಾಗರೀಕ ಸನ್ಮಾನ ಮಾಡುವ ಆಲೋಚನೆಯೂ  ಇದೆ ಎಂದಿದ್ದಾರೆ.