18th April 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ದೇಶದ ಎಲ್ಲಾ ಗ್ರಾಮಗಳ ಗ್ರಾಮಠಾಣಗಳಲ್ಲಿರುವ ಮನೆ ಮತ್ತು ನಿವೇಶನ ಹಾಗೂ ಸರ್ವೇನಂಬರ್‌ಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳ ಕರಾರುವಕ್ಕಾದ ಡಿಜಿಟಲ್ ಸರ್ವೆ ಮಾಡಿ ಜಿಐಎಸ್ ಆಧಾರಿತ ಸ್ವತ್ತಿನ ಕಾರ್ಡ್ ನೀಡಲು ರೂಪಿಸಿರುವ ಯೋಜನೆಯೇ SVAMITVA : SURVEY OF VILLAGES AND MAPPING WITH IMPROVISED TECHNOLOGY IN VILLAGE AREAS

ಇದೊಂದು ನಿಜಕ್ಕೂ ಅದ್ಬುತ ಯೋಜನೆ, ಆದರೇ ನಮ್ಮ ರಾಜ್ಯದಲ್ಲಿ ಇನ್ನೂ ಕುಂಟುತ್ತಾ ಸಾಗಿದೆ ಎಂದರೆ ತಪ್ಪಾಗಲಾರದು. ಕೆಂದ್ರ ಸರ್ಕಾರದ ಮಾರ್ಗದರ್ಶಿಯಲ್ಲಿರುವ ಪ್ರಕಾರ ನಮ್ಮ ರಾಜ್ಯದಲ್ಲಿ 33157  ಗ್ರಾಮಗಳಿವೆ. 2020-21  ರಲ್ಲಿ 16580 , 2021-22   ರಲ್ಲಿ 11157  ಮತ್ತು 2022-23   ರಲ್ಲಿ 5420  ಪೂರ್ಣಗೊಳಿಸಬೇಕಂತೆ.

ನಮ್ಮ ರಾಜ್ಯದಲ್ಲಿ ಒಂದು ಅಂದಾಜಿನ ಪ್ರಕಾರ ಒಂದು ಕೋಟಿ ಎಂಭತ್ತು ಲಕ್ಷ ಸ್ವತ್ತುಗಳಿವೆಯಂತೆ. ಏನೇ ಡ್ರೋನ್ ಸರ್ವೇ ಮಾಡಿದರೂ, ಸರ್ವೇಯರ್ ಸ್ವತ್ತಿನ ಬಳಿ ಹೋಗಿ ಸಮೀಕ್ಷೆ ಮಾಡಲೇ ಬೇಕು. ನಮ್ಮ ರಾಜ್ಯದಲ್ಲಿ ಕೇವಲ 3600 ಜನ ಸರ್ವೇಯರ್ ಗಳಿದ್ದಾರೆ. ಅವರಿಗೆ ಕಚೇರಿ ಕೆಲಸ ಮತ್ತು ಜಮೀನುಗಳ ಸಮೀಕ್ಷೆ ಮಾಡುವುದರಲ್ಲಿ ಸಾಕು ಸಾಕಾ ಗುತ್ತದೆಯಂತೆ.

ಒಬ್ಬ ಖಾಸಗಿ ಸರ್ವೆಯರ್ ದಿನಕ್ಕೆ 25 ಸ್ವತ್ತಿನ ಸರ್ವೇ ಮಾಡಬೇಕಂತೆ. ಇವರಿಗೆ ದಿನವೊಂದಕ್ಕೆ ರೂ 800 ನೀಡುತ್ತಾರಂತೆ. ಹಾಲಿ ಇರುವ ನಿಯಮ ಪ್ರಕಾರ ಒಂದು ಸ್ವತ್ತಿಗೆ ರೂ 32 ಸಾಕಾಗುತ್ತದೆ. ಲ್ಯಾಪ್‌ಟಾಪ್, ಸ್ಕಾನರ್, ಪ್ರಿಂಟರ್, ಸ್ಟೇಷನರಿ, ಮ್ಯಾಪ್, ಜೆರಾಕ್ಸ್ ಹೀಗೆ ಎಲ್ಲಾ ಸೇರಿದರೂ ಒಂದು ಸ್ವತ್ತಿಗೆ ರೂ 50 ಖರ್ಚು ಮಾಡಿದರೆ ಸಾಕಂತೆ.

ನಮ್ಮ ರಾಜ್ಯದಲ್ಲಿರುವ 1.80  ಕೋಟಿ ಸ್ವತ್ತಿಗೆ ಕೇವಲ ರೂ 90 ಕೋಟಿ ವೆಚ್ಚ ಆಗಲಿದೆ.  ಈ ಹಣವನ್ನು ರಾಜ್ಯ ಸರ್ಕಾರ ನೀಡಬೇಕು ಅಥವಾ ಒಂದು ಸ್ವತ್ತಿಗೆ ಸ್ವತ್ತಿನ ಮಾಲೀಕ ರೂ 50 ನೀಡಬೇಕು ಎಂದು ಸರ್ಕಾರ ಆದೇಶ ಮಾಡಬೇಕು. ಇದು ಮಾಡದ ತನಕ ಈ ಯೋಜನೆ ಅಸಾಧ್ಯ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಬರುತ್ತಿದೆ.

ಕೇಂದ್ರ ಸರ್ಕಾರ ಡ್ರೋನ್ ಸರ್ವೆ ಸೇರಿದಂತೆ ಉಳಿದ ಎಲ್ಲಾ ವೆಚ್ಚಗಳನ್ನು ನೀಡಲಿದೆ. ರಾಜ್ಯ ಸರ್ಕಾರ ಕ್ರಾಸ್ ವೆರಿಫಿಕೇಷನ್ ಮಾಡಿ ನಂತರ ಸ್ವತ್ತಿನ ಕಾರ್ಡ್ ವಿತರಣೆ ಮಾಡುವುದು ಅಗತ್ಯವಾಗಿದೆ. ಇ- ಖಾತೆ ಮಾಡಲು ಒಂದು ಸ್ವತ್ತಿಗೆ ರೂ 5000 ದಿಂದ 15000 ವರೆಗೂ ಲಂಚ ನೀಡಬೇಕು. ಜೊತೆಗೆ ಸರ್ಕಾರಕ್ಕೂ ಒಂದು ಸ್ವತ್ತಿಗೆ ರೂ 800 ಕಟ್ಟಬೇಕು. ರೂ 50 ನೀಡಿದರೆ ಈ ಖಾತಾ ನೀಡುವುದಾದರೇ ನಾವೇ ಹಣ ನೀಡುತ್ತೇವೆ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಸ್ವತ್ತಿನ ಮಾಲೀಕರು.

ಜೊತೆಗೆ ಗ್ರಾಮಠಾಣದ ಹೊರಗಡೆ ಸರ್ವೇ ನಂಬರ್‌ನಲ್ಲಿರುವ ಕಟ್ಟಡಗಳ ಸ್ವತ್ತಿನ ಕಾರ್ಡ್ ನೀಡಲು ಕೆಲವು ತಾಂತ್ರಿಕ ಅಡಚಣೆಗಳು ಇವೆ. ಇವುಗಳಿಗೆ ಒಂದು ಕಟಾಪ್‌ಡೇಟ್ ನೀಡಿ, ತಂತಾನೆ ಭೂ ಪರಿವರ್ತನೆ ಮಾಡಲು ಯೋಜನೆ ರೂಪಿಸ ಬೇಕಿದೆ. ಈ ಬಗ್ಗೆಯೂ ರಾಜ್ಯ ಸರ್ಕಾರದ ರೆವಿನ್ಯೂ ಇಲಾಖೆ ಯೋಜನೆ ರೂಪಿಸ ಬೇಕಾಗಿದೆ.

ಗ್ರಾಮಪಂಚಾಯಿತಿ ಕಂದಾಯ ಪಾವತಿಸಿಕೊಳ್ಳಲು ಮಾತ್ರ ಕಟ್ಟಡದ ವಿಸ್ಥೀರ್ಣವನ್ನು ಖಾತೆ ಮಾಡಿರುತ್ತಾರೆ. ಗ್ರಾಮಠಾಣದ ಇತರೆ ನಿವೇಶನ/ಆಸ್ತಿಗಳಿಗೆ ಈವರೆಗೂ ದಾಖಲೆಯೇ ಇಲ್ಲ, ಇವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಒಂದು ಯಕ್ಷ ಪ್ರಶ್ನೆ.

ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಲೆಕ್ಕಾಚಾರಕ್ಕಿಂತ ಬೆಕ್ಕಿಗೆ ಗಂಟೆ ಕಟ್ಟುವರು ಯಾರು, ಯಾವ ಇಲಾಖೆ ಈ ಹಣ ಭರಿಸಬೇಕು ಎಂಬ ಚಿಂತೆ ರಾಜ್ಯ ಸರ್ಕಾರದ್ದಾಗಿದೆ. ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಯೋಜನೆ ಹಳ್ಳ ಹಿಡಿಯುವುದು ಗ್ಯಾರಂಟಿ.