27th June 2025
Share

TUMAKURU:SHAKTHIPEETA FOUNDATION

  ಸಾವಯವ ಗೊಬ್ಬರದ ಹುಡುಕಾಟ ಆರಂಭವಾಗಿದೆ. ಶಕ್ತಿಪೀಠ ಕ್ಯಾಂಪಸ್ ಮತ್ತು ಶ್ರೀಗಂಧ ಕೃಷಿ ಆಶ್ರಮ ಒಟ್ಟು 25 ಎಕರೆ ಜಮೀನು ಸಂಪೂರ್ಣವಾಗಿ ಸಾವಯವ ಕೃಷಿ ಆರಂಭವಾಗಿದೆ.

  ಈ ಭೂಮಿ ವಿಚಿತ್ರವಾಗಿದೆ, ಕಾರಣ ಮೂಲ ಭೂ ಮಾಲೀಕರು ಈ ಜಮೀನಿನ ಮಣ್ಣನ್ನು ರಸ್ತೆಗಾಗಿ ಮಾರಾಟ ಮಾಡಿದ್ದಾರಂತೆ, ಜೊತೆಗೆ ನೀರು ನಿಂತು ಹಾಳಾಗಿದೆ ಎನ್ನುತ್ತಾರೆ, ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆಜಿ ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಗ್ಗನಡು ಕಾವಲ್(ವಡ್ಡನಹಳ್ಳಿಗೆ ಹೊಂದಿ ಕೊಂಡಿರುವ) ಗ್ರಾಮಸ್ಥರು.

ನಮ್ಮ ಶಕ್ತಿಪೀಠ ಕ್ಯಾಂಪಸ್ ಅನ್ನು, ಇಂಡಿಯಾ ಮ್ಯಾಪ್ ನವರ ಜಮೀನು ಎಂದು ಕರೆಯತ್ತಾರಂತೆ. ನಾವು ಇನ್ನೂ ನಾಮಫಲಕ ಹಾಕಿಲ್ಲ. ಪೂರ್ಣ ಪ್ರಮಾಣದ ಸಂಶೋಧನೆ ಆರಂಭವಾಗಿಲ್ಲ. ಅಧಿಕೃತವಾಗಿ ದಿನಾಂಕ:01.08.2025 ರಂದು ಶಂಕುಸ್ಥಾಪನೆ ಆಗಲಿದೆ.

ಈ ವೇಳೆಗೆ 1008 ಪ್ರಭೇಧಗಳ ಗಿಡಗಳನ್ನು ಹಾಕುವ ಕೆಲಸ ಭರದಿಂದ ಸಾಗಿದೆ.  ವಿಶ್ವದ ಎಲ್ಲಾ ಧರ್ಮಗಳ/ಜಾತಿ/ಉಪಜಾತಿಗಳ ಧಾರ್ಮಿಕ ಗಿಡಗಳನ್ನು ಹಾಕಲು ಪರಿಸರ ತಜ್ಞ ಶ್ರೀ ಜಗನ್ನಾಥ್ ರಾವ್ ರವರು ಮತ್ತು ಶ್ರೀ  ವನಲೋಕ ಸಂತೋಶ್ ರವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ಪಾರಂಪರಿಕ ವೈಧ್ಯ ಶ್ರೀ ಗುಸಿದ್ಧರಾಧ್ಯರವರು ಮತ್ತು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಗೋವಿಂದಪ್ಪನವರು ಈಗಾಗಲೇ ಸುಮಾರು 500 ಜಾತೀಯ ಗಿಡಗಳನ್ನು ಹಾಕಿದ್ದರು, ಇದರಲ್ಲಿ ಸುಮಾರು 400 ಜಾತಿಯ ಸಾವಿರಾರು ಗಿಡಗಳು ಬೆಳೆಯುತ್ತಿವೆ, ಶೀಘ್ರದಲ್ಲಿ ಡಿಜಿಟಲ್ ಗಿಡ ಗಣತಿ ನಡೆಯಲಿದೆ.

ಈಗ ಹಾಕುವ ಸುಮಾರು 1000 ಪ್ರಭೇಧಗಳ ಗಿಡಗಳಿಗೆ ಸಾವಯವ ಗೊಬ್ಬರ ಹಾಕುವುದು ನಮ್ಮ ಉದ್ದೇಶ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ಕೃಷಿ ಸಂತ ಶ್ರೀ ವಿ.ಪಿ.ಹೆಗ್ಗಡೆಯವರನ್ನು ದಿನಾಂಕ: 30.05.2025 ರಂದು ನಾನು ಮತ್ತು ಶ್ರೀಗಂಧ ಕೃಷಿ ಆಶ್ರಮದ ಶ್ರೀ ಎಸ್.ಪಿ.ರಾಜೇಶ್ ರವರು ಭೇಟಿ ಮಾಡಿದೆವು.

ಕೃಷಿ ಸಂತ ಶ್ರೀ ವಿ.ಪಿ.ಹೆಗ್ಗಡೆಯವರ ಅನುಭವ ಮತ್ತು ಅವರ ದಿನಚರಿಗಳ ಪರಿಚಯ ಮಾಡಿಕೊಂಡೆವು. ಅವರು ಕಳೆದ 40 ವರ್ಷಗಳಿಂದ ಸಾವಯವ ಕೃಷಿಗೆ ಪೂರಕವಾದ 16 ಗಿಡಮೂಲಿಕೆಗಳು ಮತ್ತು ದೇಸಿ ಹಸುವಿನ ಉತ್ಪನ್ನಗಳಿಂದ ತಯಾರಿಸುತ್ತಿರುವ ಸಾವಯವ ಗೊಬ್ಬರದ ಗುಳಿಗೆ ಮತ್ತು ಗೊಬ್ಬರದ ಮಾಹಿತಿ ಹಂಚಿಕೊಂಡೆವು.

ಈ ವರ್ಷ ಇವರ ಗೊಬ್ಬರವನ್ನು ಹಾಕುವ ನಿರ್ಣಯ ಮಾಡಿದೆವು. ಜೊತೆಗೆ ಇವರ ಗೊಬ್ಬರದ ಮಾದರಿಯ ಸಾವಯವ ಗೊಬ್ಬರವನ್ನು ನಮ್ಮ ಕ್ಯಾಂಪಸ್ ನಲ್ಲಿಯೇ ಮಾಡಿಕೊಳ್ಳಲು ಇವರಿಂದ ತರಬೇತಿ ಪಡೆಯಲು ಸಹ ಸಮಾಲೋಚನೆ ಮಾಡಿದೆವು.

ಈ ಬಗ್ಗೆ ಶೀಘ್ರದಲ್ಲಿ ಒಂದು ವಾರದಲ್ಲಿಯೇ ಪುಸ್ತಕವನ್ನು ಹೊರತರುತ್ತಿದ್ದಾರಂತೆ, ಪುಸ್ತಕ ಪಡೆದ ನಂತರ ಅವರ ಅನುಭವದೊಂದಿಗೆ ಮಾಹಿತಿ ಹಂಚಿಕೊಳ್ಳೋಣ.