27th July 2024
Share

TUMAKURU:SHAKTHIPEETA FOUNDATION

ಇಲ್ಲಿಯವರೆಗೂ ಯಾರಾದರೂ ಫಾರಿನ್‌ನಲ್ಲಿ ಇದ್ದಾರೆ ಎಂದರೆ ಅದೊಂದು ಸಾಧನೆ, ಯಾವುದೇ ಹುದ್ದೆಯಲ್ಲಿರಲಿ, ಯಾವುದೇ ದೇಶದಲ್ಲಿ ಇರಲಿ ಅವರ ಕುಟುಂಬದವರ ಸ್ಟೇಟಸ್ ಹೆಚ್ಚಾಗುತ್ತಿತ್ತು. ವಿದೇಶದಲ್ಲಿದ್ದಾರೆ ಎಂದರೆ ಅವರು ಬುದ್ದಿವಂತರೂ, ಬುದ್ದಿವಂತರೆಲ್ಲಾ ದೇಶ ಬಿಟ್ಟು ಹೋಗುತ್ತಿದ್ದಾರೆ ಎಂಬ ಕೂಗು ಇತ್ತು.

  ಸ್ವತಃ ನಮ್ಮ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ ವಿದೇಶದಲ್ಲಿರುವವರೆಗೆ ಆಹ್ವಾನ ನೀಡಿ ಸ್ವದೇಶಕ್ಕೆ ಮರಳಿ ಹೂಡಿಕೆ ಮಾಡಿ ಎಲ್ಲಾ ಸವಲತ್ತು ಕೊಡುತ್ತೇವೆ ಎಂದು ಬಹಿರಂಗವಾಗಿ ಘೋಶಿಸಿದ್ದರು.

   ಒಂದು ಊರಿನಲ್ಲಿ ಸ್ವದೇಶಕ್ಕೆ ಹೊರಟರೆ ಹಬ್ಬ ಹರಿದಿನದಂತೆ ಆಚರಿಸಿ ಊಟ ಹಾಕಿ, ಪೂಜೆ ಮಾಡಿ ಬಿಳ್ಕೋಡುತ್ತಿದ್ದರು. ಅದೇ ರೀತಿ ಬಂದಾಗಲೂ ಮಾಡುತ್ತಿದ್ದರು. ಮಾಧ್ಯಮಗಳಲ್ಲಿಯೂ ವಿದೇಶ ಪ್ರಯಾಣ ಎಂಬ ಜಾಹಿರಾತು ನೀಡುತ್ತಿದ್ದರು.

  ನೋಡಿ ಈ ಕೊರೊನಾ ಎಂಬ ಮಹಾಮಾರಿ ಫಾರಿನ್ ರಿಟರ್ನ್ ಎಂದರೆ ಗಢ, ಗಢ ನಡುಗುವ ಹಾಗೆ ಮಾಡಿದೆ. ಅಂದು ಅಬ್ಬರ ಮಾಡುತ್ತಿದ್ದವರು ಪಕ್ಕದ ರಾಜ್ಯದ ಏರ್‌ಪೋರ್ಟ್‌ಗೆ ಬಂದಿಳಿದು ಗೊತ್ತಿಲ್ಲದ ಹಾಗೆ ಬಸ್ಸಿನಲ್ಲಿ, ರೈಲಿನಲ್ಲಿ ಬಂದು ಮನೆ ಸೇರುವ ಹಾಗೆ ಮಾಡಿದೆ.

  ಬಂದವರೆಲ್ಲರನ್ನು ಬಹುತೇಕ ದಿಗ್ಭಂದನದಲ್ಲಿಡಲಾಗಿದೆ. ತಾಯ್ನಾಡಿಗೆ ಬರಲು ವ್ಯವಸ್ಥೆಯೇ ಇಲ್ಲದಂತಾಗಿದೆ. ನಮ್ಮ ರಾಜ್ಯದ ಅರಣ್ಯ ಸಚಿವರು ಅವರ ಮಗಳ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದು ಎಂಥವರಿಗೂ ಕನಿಕರ ಬರುವಂತಿತ್ತು. ಈಗಲೂ ಅದೆಷ್ಟೋ ಪೋಷಕರು ನೆಮ್ಮದಿಯಿಂದಿಲ್ಲ.

  ದಾವಣಗೆರೆ ಸಂಸದರ ಮಗಳಿಗೆ ಕೊರೊನಾ ಬಂದಿದೆ ಎಂಬ ಸುದ್ದಿ ಮಾಧ್ಯಮದಲ್ಲಿ ಬಂದಾಗ, ಅವರ ಮನೆಯ ಸುತ್ತ ಐದು ಕೀಮಿ ದೂರ ಬಫರ್ ಝೋನ್ ಘೋಷಣೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಾಗ. ಚಿತ್ರದುರ್ಗ ಜಿಲ್ಲೆಯ ರೋಗಿಯನ್ನು ನಮ್ಮ ದಾವಣಗೆರೆ ಆಸ್ಪತ್ರೆಗೆ ತರಬೇಡಿ ಎಂಬ ಕೂಗು ಎದ್ದಾಗ ಎಲ್ಲರೂ ಯೋಚಿಸುವಂತಾಗಿದೆ.

  ಗ್ರಾಮಗಳ  ಜನ ಬೆಂಗಳೂರಿನಿಂದ ಬಂದವರನ್ನೇ ಊರಿಗೆ  ಸೇರಿಸಿಲ್ಲ ಎಂಬ ವರದಿ ಓದುತ್ತಿದ್ದೇವೆ. ಅಷ್ಟೆ ಏಕೆ ನಮ್ಮ ತಾಯಿ ಕುಂದರನಹಳ್ಳಿಯಲ್ಲಿ, ಮಗಳು ಬೆಂಗಳೂರಿನಲ್ಲಿ, ನಾವು ತುಮಕೂರಿನಲ್ಲಿ ನನಗೆ ಸ್ವತಃ ನೆಮ್ಮದಿಯಿಲ್ಲ. ಪ್ರಜಾ ಪ್ರಭುತ್ವದ ಬೆಲೆ ನಮಗೆ ಈಗ ಅರ್ಥವಾಗುತ್ತಿದೆ. ಮನೆ ಬಿಟ್ಟು ಆಚೆಗೆ ಹೋದರೆ ಲಾಠಿ ಏಟು. ವಿದೇಶದಲ್ಲಿರುವ ಜನರ ಪೋಷಕರ ಗತಿ ಏನಾಗಿರಬೇಕು?

  ಸರ್ಕಾರ ಈ ಪಾರಿನ್ ರಿಟರ್ನ್  ಬಗ್ಗೆ ನಿಗಾ ಇಡಲು ರಾಜ್ಯದ ಯಾವ ಗ್ರಾಮದ/ನಗರದ ಜನ ಯಾವ ದೇಶದಲ್ಲಿದ್ದಾರೆ, ಯಾರು ವಾಪಾಸ್ಸು ಆಗಿದ್ದಾರೆ. ವಾಪಸ್ಸಾಗಲೂ ಯಾರು ಇಚ್ಚಿಸಿದ್ದಾರೆ, ಕೊರೊನಾ ದಿಂದ ಯಾರು ತೊಂದರೆ ಅನುಭವಿಸುತ್ತಿದ್ದಾರೆ, ವಿದೇಶದಲ್ಲಿನ ಜನರ ಸ್ಥಿತಿಗತಿ ಏನು. ಎಂಬ ಬಗ್ಗೆ ಜಿಐಎಸ್ ಆಧಾರಿತ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಿ ಜನತೆಗೆ ಬುಲೆಟಿನ್ ತಿಳಿಸುವುದು ಸೂಕ್ತ. 

   ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಎನ್.ಆರ್.ಐ ಸೆಲ್, ವಿದೇಶಾಂಗ ಸಚಿವಾಲಯ ಮತ್ತು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಸ್ಥಳೀಯ ಗ್ರಾಮೀಣ/ ನಗರ ಸಂಸ್ಥೆಗಳ ಸಹಕಾರದಿಂದ ವಿದೇಶದಲ್ಲಿರುವ ರಾಜ್ಯದ ಪ್ರತಿಯೊಬ್ಬರ ಡಿಜಿಟಲ್ ಮಾಹಿತಿ ಸಂಗ್ರಹಿಸಿ ಅವರ ಬೇಡಿಕೆಗಳ ಬಗ್ಗೆ ಅಧ್ಯಯನ ಮಾಡುವುದು ಸೂಕ್ತವಾಗಿದೆ.

   ಈ ಮಾಹಿತಿ ಮುಂದೂ ಅನೂಕೂಲಕ್ಕೆ ಬರಲಿದೆ. ಸರ್ಕಾರ ದೂರದೃಷ್ಟಿಯಿಂದ ಈ ಮಾಹಿತಿ ಕ್ರೋಢಿಕರಿಸಿ ವಿದೇಶದಲ್ಲಿರುವ ಪೋಷಕರಿಗೆ ನೆಮ್ಮದಿ ತರುವ ಕೆಲಸ ಮಾಡಲಿ. ರಾಜ್ಯದ ಜನತೆಗೂ ವಿದೇಶದಲ್ಲಿರುವರ ಮಾಹಿತಿ ತಿಳಿಯಲಿ.