29th March 2024
Share

TUMAKURU:SHAKTHIPEETA FOUNDATION

   ಕೆರೆಸಂಜೀವಿನಿ ಯೋಜನೆಯಡಿ ರಾಜ್ಯದ ಕೆರೆ-ಕಟ್ಟೆಗಳಿಂದ ಹೂಳೆತ್ತಿ ರೈತರ ಜಮೀನುಗಳಿಗೆ ಮಣ್ಣು ಸಾಗಿಸಲು ಸರ್ಕಾರ ಜೆಸಿಬಿ ಮತ್ತು ಇಟಾಚಿಗಳಿಗೆ ತಗಲುವ ಬಾಡಿಗೆಯನ್ನು ರಾಜ್ಯದ ಸಣ್ಣ ನೀರಾವರಿ ಇಲಾಖೆ ಪಾವತಿಸಲಿದೆ.

   ಈ ಬಗ್ಗೆ ಕೇಂದ್ರ ಸರ್ಕಾರದ ನೀತಿ ಆಯೋಗವೂ ವಿಶೇಷ ಕಾಳಜಿ ವಹಿಸಿದೆ. ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ದಿನಾಂಕ:07.05.2020 & 20.05.2020 ರಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

 ಸಂಘ ಸಂಸ್ಥೆಗಳು, ಮಠಗಳು ಮತ್ತು ಎನ್.ಜಿ.ಓ ಗಳು ಮುಂದೆ ಬಂದು ರೈತರಿಗೆ ಅನೂಕೂಲ ಮಾಡಲು ಸೂಚಿಸಿದ್ದಾರೆ. ವಿಪರ್ಯಾಸ ಎಂದರೆ ರೆವಿನ್ಯೂ ಇಲಾಖೆ ಅಧಿಕಾರಿಗಳು ಕೆರೆ-ಕಟ್ಟೆಗಳಲ್ಲಿ ರೈತರು ಮಣ್ಣು ಹೊಡೆಯಲು ಬಂದರೆ ದಂಡ ಹಾಕುತ್ತೇವೆ ಎಂದು ಹೆದರಿಸುತ್ತಾರೆ.

ಸ್ವತ: ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯಸ್ವಾಮಿರವರು ಅವರನ್ನು ಸಂಪರ್ಕ ಮಾಡಿದ ಬಹುತೇಕ ಎಲ್ಲರಿಗೂ ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ ಇಂಜಿನಿಯರ್‌ಗಳು ಅನುಮತಿ ನೀಡಲು ರೈತರು ಮನವಿ ಸಲ್ಲಿಸಿದರೆ ತಿಂಗಳುಗಟ್ಟಲೆ ಅರ್ಜಿಗಳನ್ನು ಇಟ್ಟುಕೊಂಡು ಕಾಲಕಳೆಯುತ್ತಾರೆ. ಇವರಿಗೆ ಸರ್ಕಾರಿ ಆದೇಶಗಳ ಅರಿವು ಇರುವುದಿಲ್ಲವೇ? ಈ ಆದೇಶ ಹೊರಡಿಸಿದ ನಂತರ ಯಾವ ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಅನುಕೂಲವಾಗಿದೆ ಎಂಬ ಬಗ್ಗೆ ಕೆರೆ ಸಂಜೀವಿನಿ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಲ್.ಕೆ.ಅತೀಕ್‌ರವರು  ರೈತರ ಅರ್ಜಿಗಳನ್ನು ವಿನಾ ಕಾರಣ ಇಟ್ಟುಕೊಂಡಿರುವ ಅವರ ಇಲಾಖೆಯ ಇಂಜಿನಿಯರ್‌ಗಳಿಗೆ ನಾಗರೀಕ ಸನ್ಮಾನ ಮಾಡಲಿ ಅಥವಾ ನಿಯಮ ಪ್ರಕಾರ ಅಂತಹವರ ಮೇಲೆ ಕಾನೂನು ಕ್ರಮಕೈಗೊಳ್ಳುವುದು ಸೂಕ್ತವಾಗಿದೆ.