18th April 2024
Share

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರದಿಂದ  ಕರ್ನಾಟಕ ರಾಜ್ಯ ದೇಶದಲ್ಲಿಯೇ ಹೆಚ್ಚು ಅನುದಾನ ಪಡೆಯಲು, ಕಾಲಮಿತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಅನುದಾನ ದುರುಪಯೋಗವಾಗದ ರೀತಿಯಲ್ಲಿ ಸದ್ಭಳಕೆ ಮಾಡಲು,  ರಾಜ್ಯ ಮಟ್ಟದ ದಿಶಾ ಸಮಿತಿ, ದಿಶಾ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲು ಕ್ರಮಕೈಗೊಂಡಿರುವುದು ಸ್ವಾಗಾತಾರ್ಹ.

 ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಮಾನ್ಯ ಲೋಕಸಭಾ ಸದಸ್ಯರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ದೇಶದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ, ವಿವಿಧ ಯೋಜನೆಗಳ ಮಾಹಿತಿ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಚುನಾಯಿತ ಜನಪ್ರತಿನಿಧಿಗಳಿಗೆ ಅನೂಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವುದು ಅಗತ್ಯವಾಗಿದೆ.

 ರಾಜ್ಯದ 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು ಮತ್ತು 75 ಜನ ವಿಧಾನ ಪರಿಷತ್ ಸದಸ್ಯರು ಹಾಗೂ ಇಬ್ಬರು ದೆಹಲಿ ಪ್ರತಿನಿಧಿಗಳು ಸೇರಿದಂತೆ 342 ಜನರು ಕೇಂದ್ರ ಸರ್ಕಾರದ ಯಾವ ಯೋಜನೆಗಳ ಮಂಜೂರಾತಿಗೆ ಶ್ರಮಿಸುತ್ತಿದ್ದಾರೆ ಎಂಬ ಮಾಹಿತಿಯೂ ಬೆರಳ ತುದಿಯಲ್ಲಿ ಲಭ್ಯವಾಗಬೇಕು.

 ಜೊತೆಗೆ ಲೋಕಸಭಾ ಅಧಿವೇಶನಗಳಲ್ಲಿ ಲೋಕಸಭಾ ಸದಸ್ಯರು ಮತ್ತು ರಾಜ್ಯ ಸಭಾ ಸದಸ್ಯರು ಯಾವ ರೀತಿ ಅಭಿವೃದ್ಧಿ ಪರ ಚರ್ಚಿಸಬೇಕು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ಪ್ರಶ್ನೆಗಳನ್ನು ಹಾಕಬೇಕು ಎಂಬ ಮಾಹಿತಿಯೂ ಒಂದೇ ಕಡೆ ಇರುವಂತಾಗಬೇಕು.

ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಹಲವಾರು ಪರಿಣಿತ ತಜ್ಞರು, ಹೋರಾಟ ಸಮಿತಿಗಳು ಮತ್ತು ಸಂಘಸಂಸ್ಥೆಗಳು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸುತ್ತಿರುತ್ತಾರೆ, ಅವರ ಅಭಿಪ್ರಾಯಗಳು, ಕನಸುಗಳು ಒಂದೇ ಸೂರಿನಡಿ ಬರಬೇಕು, ಈ ಯೋಜನೆಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುವಂತಾಗ ಬೇಕು.

  ದೆಹಲಿಯಲ್ಲಿರುವ ರೆಸಿಡೆಂಟ್ ಕಮೀಷನರ್ ಯಾವ ರೀತಿ ಕಾರ್ಯ ನಿರ್ವಹಿಸಬೇಕು? ಪ್ರಸ್ತುತ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ. ದೆಹಲಿ ಪ್ರತಿನಿಧಿಗಳ ಕಚೇರಿಯ ಕಾರ್ಯವೈಖರಿ ಹೇಗಿರಬೇಕು. ಪ್ರಸ್ತುತ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ. ಮಾನ್ಯ ಮುಖ್ಯ ಮಂತ್ರಿಗಳ ಕಚೇರಿಯಲ್ಲಿರುವ ದೆಹಲಿ ಯೋಜನೆಗಳ ವಿಭಾಗ ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಪ್ರಸ್ತುತ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಗಮನಿಸಲು ಡಿಪಿಆರ್ ವಿಭಾಗದ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ. ಎಂಬ ಮಾಹಿತಿಗಳ ಅಧ್ಯಯನ ಮಾಡಿ ಒಂದು ಅತ್ಯತ್ತಮವಾದ ದಿಶಾ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸುವುದು ಅಗತ್ಯವಾಗಿದೆ.

 ಸುಮಾರು 1988 ರಿಂದ ಸುಮಾರು 33 ವರ್ಷಗಳ ಕಾಲ ನಿರಂತರವಾಗಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಶ್ರಮಿಸುತ್ತಿರುವ ಹಾಗೂ 2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆ ಮಾಡಿ ತುಮಕೂರು ನಗರ, ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಮತ್ತು 2019 ರಲ್ಲಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ ಅಭಿವೃದ್ಧಿ ಪೀಠ, ಜಲಪೀಠ ಮತ್ತು ಶಕ್ತಿಪೀಠಗಳ ಕ್ಯಾಂಪಸ್ ನಿರ್ಮಾಣ ಮಾಡುವ ಮೂಲಕ ದೇಶದಲ್ಲಿಯೇ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯ ಬೇಕು ಎಂಬ  ಗುರಿ ಹೊಂದಿರುವ, ನನ್ನ ಪರಿಕಲ್ಪನೆಗೆ ಪೂರಕವಾಗಿ ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯನಾಗಿ ಶ್ರೀ ಜಿ.ಎಸ್.ಬಸವರಾಜ್‌ರವರು ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ನೇಮಿಸಿದರೇ, ರಾಜ್ಯ ಮಟ್ಟದ ದಿಶಾ ಸಮಿತಿಯ ಸಂಘಸಂಸ್ಥೆಗಳ ಪ್ರತಿನಿಧಿಯಾಗಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೇಮಿಸಿದ್ದಾರೆ.

  ಪ್ರಸ್ತುತ ನಾನು ನೀಡಿದ ಸಲಹೆಗಳನ್ನು ಪರಿಗಣಿಸಿ ಒಂದು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಮಾನ್ಯ ಮುಖ್ಯಮಂತ್ರಿಯವರು ಕೈಗೊಂಡಿರುವ ಕ್ರಮ ನಿಜಕ್ಕೂ ತೃಪ್ತಿ ತಂದಿದೆ. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್‌ರವರು ಮತ್ತು ದಿಶಾ ಸಮಿತಿಗಳ ಕಾರ್ಯವೈಖರಿ ನೋಡಿಕೊಳ್ಳುತ್ತಿರುವ ಜಂಟಿ ನಿರ್ದೇಶಕರಾದ ಶ್ರೀಮತಿ ಕಲ್ಪನಾರವರು  ದಿಶಾ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು, ನನ್ನ ಅಭಿಪ್ರಾಯಗಳನ್ನು ಕೇಳಿರುವುದು ನನಗೆ ಖುಷಿ ಕೊಟ್ಟಿದೆ. ಸಿದ್ಧಗಂಗಾ ಶ್ರೀ ಜನ್ಮದಿನದ ಇಂದೇ(01.04.2021) ಪತ್ರ ನೀಡಿರುವುದು ನಿಜಕ್ಕೂ ಕಾಕತಾಳಿಯವಾಗಿದೆ.

 ಕಾರಣ ಶ್ರೀಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಹಲವಾರು ಅಭಿವೃದ್ಧಿ ಯೋಜನೆಗಳ 100 ವಿಚಾರ ಸಂಕಿರಣಗಳನ್ನು ಫೋರಂ ಹಮ್ಮಿಕೊಂಡಿತ್ತು. ಜೊತೆಗೆ ಶ್ರೀಗಳ 100 ವರ್ಷಗಳ ಪ್ರತಿ ದಿನದ ನೆನಪಿಗೆ ಒಂದೊಂದು ಗಿಡದಂತೆ ಸುಮಾರು 36500 ಗಿಡಗಳನ್ನು ಹಾಕಿ ಬೆಳೆಸುವ ಹಸಿರು-ತುಮಕೂರು ಯೋಜನೆಯ ಆಂದೋಲನಕ್ಕೆ ನಗರದಲ್ಲಿ ಬೆಳೆದು ನಿಂತಿರುವ ಗಿಡಗಳೇ ಸಾಕ್ಷಿಯಾಗಿವೆ.

 ಇಂತಹ ಶುಭ ದಿವಸ ರಾಜ್ಯ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರದ ಕರಡು ಪ್ರತಿಯನ್ನು ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ನೀಡಲು ಶಕ್ತಿ ಕೊಡಲು ಇಂದು ಸಿದ್ಧಗಂಗಾ ಶ್ರೀಗಳ ಗದ್ದುಗೆಯಲ್ಲಿ ಪ್ರಾರ್ಥಿಸಿದ ನಂತರ ಕರಡು ಪ್ರತಿ ಸಿದ್ಧಪಡಿಸಲು ಆರಂಭಿಸಿದ್ದೇನೆ.

 ಎಲ್ಲರ ಅಭಿಪ್ರಾಯ ಪಡೆದು ಒಂದು ಉತ್ತಮವಾದ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ತಾವೂ ಕೈಜೋಡಿಸಲು ಬಹಿರಂಗ ಮನವಿ ಮಾಡಲಾಗಿದೆ. ಈ ಬಗ್ಗೆ ಒಂದು ಸ್ಪಷ್ಟ ರೂಪು ರೇಷೆಗಳನ್ನು ಶೀಘ್ರದಲ್ಲಿಯೇ ಸಿದ್ಧಪಡಿಸಲಾಗುವುದು. ಉತ್ತಮವಾದ ಸಲಹೆಗಳನ್ನು ಸ್ವೀಕರಿಸಲಾಗುವುದು.

  ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರು ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರ ಒಂದು ಸಮಾವೇಶ ನಡೆಸಲು ಸಹ ಚಿಂತನೆ ನಡೆಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ದಿಶಾ ವಿಭಾಗಕ್ಕೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ದೆಹಲಿಯಲ್ಲಿ ಅಧಿಕಾರಿಗಳನ್ನೂ ಭೇಟಿಯಾಗಿ ಪತ್ರ ನೀಡಿ ಸಮಾಲೋಚನೆ ನಡೆಸಲಾಗಿದೆ. ಈ ಸಮಾವೇಶದಲ್ಲಿ ಎಲ್ಲರ ಚಿಂತನೆಗಳಿಗೆ ಸುವರ್ಣ ಅವಕಾಶ ಕಲ್ಪಿಸಲಾಗುವುದು.

ದಿನಾಂಕ:21.09.2019 ರಂದು ರಚನೆಯಾದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಲೈವ್ ಯೋಜನೆಗಳು ನನಗೆ ಸಹಕಾರಿಯಾಗಲಿದೆ. ನಮ್ಮ ಅಧಿಕಾರಿಗಳು ಕೈಗೊಂಡಿರುವ ಪ್ರಾಯೋಗಿಕ ಚಿಂತನೆಗಳೇ, ದಿಶಾ ಮಾರ್ಗದರ್ಶಿ ಸೂತ್ರಕ್ಕೆ ಮುನ್ನುಡಿ ಬರೆಯಲಿದೆ. 2022 ರ ನಿರ್ಧಿಷ್ಠ ಗುರಿ ಮತ್ತು ಆಂದೋಲನ ನಿಜಕ್ಕೂ ಹೆಮ್ಮೆ ತರುವಂತಿದೆ. ಕರ್ನಾಟಕ ರಾಜ್ಯದ ದಿಶಾ ಮಾರ್ಗದರ್ಶಿ ಸೂತ್ರಗಳನ್ನು ಪ್ರಧಾನಿ ಮೋದಿಯವರು ಮೆಚ್ಚುವಂತಿರಬೇಕು ಎಂಬುದೇ ನನ್ನ ಪರಿಕಲ್ಪನೆ.