27th July 2024
Share

TUMAKURU:SHAKTHIPEETA FOUNDATION

 ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ತುಮಕೂರು ಜಿಲ್ಲೆಯಲ್ಲಿ ಸದ್ದುಮಾಡುತ್ತಿದೆ.ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರೆಗೂ ಈ ಸುದ್ಧಿ ತಲುಪಿದೆ. ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರೇ ನಮ್ಮ ಜಿಲ್ಲೆಯಲ್ಲಿದ್ದಾರೆ.

ಈ ಯೋಜನೆಯ ಕನಸುಗಾರ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇನ್ನೂ ಕನಸು ಕಾಣುತ್ತಲೇ ಇದ್ದಾರೆ. ಇದನ್ನು ಹುಟ್ಟುಹಾಕಿದ ನೀರಾವರಿ ತಜ್ಞ ಜಿ.ಎಸ್.ಪರಮಶಿಯ್ಯನವರು ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದಾರೆ’. ನಾನು ಹುಟ್ಟುಹಾಕಿದ ಯೋಜನೆಗಾಗಿ ಇನ್ನೂ ಹೋರಾಟಮಾಡುವ ವರು ಇದ್ದಾರಲ್ಲ ಅಂತ.

ಸೋಪನಹಳ್ಳಿ ಕೆರೆ ಒಂದು ಸಣ್ಣ ಕೆರೆ, ಇದರ ಕೋಡಿಹಳ್ಳ ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಎರಡು ಗ್ರಾಮಗಳ್ಲೂ ಹರಿಯಲಿದೆ. ಒಂದು ಕಾಲದಲ್ಲಿ ಈ ಕೆರೆ ಮತ್ತು ಹಳ್ಳಗಳಲ್ಲಿ ಮಳೆ ನೀರು ನಿಂತರೆ ಎರಡು ಗ್ರಾಮಗಳಿಗೆ ಸುಭೀಕ್ಷೆ ಎಂಬ ಮಾತು ಇತ್ತು. ಬಾವಿಗಳು ಬತ್ತುತ್ತಿರಲಿಲ್ಲ.

ಮಾಜಿ ಸಚಿವ ದಿ.ನಜೀರ್ ಸಾಬ್ ರವರ ಪವಾಡ ನಮ್ಮನ್ನು ಪಾತಾಳಕ್ಕೆ ತಳ್ಳಿದೆ. ಈ ಹಳ್ಳವನ್ನು ಮತ್ತೆ ತೊರೆಯಾಗಿ ಕಾಣಲೇ ಬೇಕು ಎಂಬ ಹಗಲು ಕನಸನ್ನು 1999 ರಿಂದ ಕಾಣಲು ಆರಂಭ ಮಾಡಿದೆ. ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು, ದಿ.ವೀರಣ್ಣಗೌಡರವರು ಮತ್ತು ಶಾಸಕ ಶ್ರೀ ಎಸ್.ಆರ್.ಶ್ರೀನಿವಾಸ್ ರವರು ಈ ಹಳ್ಳಕ್ಕೆ ಸುಮಾರು 7-8 ಪಿಕ್ ಅಪ್ ಮಾಡಿಸಿದ್ದಾರೆ.

ಕಳೆದ 20 ವರ್ಷಗಳಿಲ್ಲಿ ಎಲ್ಲಾ ಪಿಕ್ ಅಪ್ ಗಳು ತುಂಬಿದ ಉದಾಹರಣೆ ಕೇವಲ ಒಂದೆರಡು ವರ್ಷ ಮಾತ್ರ. ಮಳೆಯ ನೀರನ್ನು ತಡೆಯಿರಿ, ತಡೆದ ನೀರನ್ನು ಹಿಂಗಿಸಿರಿ’ ಎಂಬ ಘೊಷಣೆ, ಈ ಹಳ್ಳಕ್ಕೆ ಅನ್ವಯ ಆಗುವುದಿಲ್ಲ. ಬೋರ್ ವೆಲ್ ಬಕಾಸುರ ಅಂತರ್ಜಲ ಕಸಿದಿದ್ದಾನೆ.

ನಮ್ಮ ಅಣ್ಣ ತಮ್ಮಂದಿರು ‘ಕೋಡಿ ಹಳ್ಳವನ್ನು ಅತ್ಯಾಚಾರ ಮಾಡಿ ಮುಚ್ಚಿಕೊಂಡಿದ್ದಾರೆ’. ಕಬಳಿಸಿದ್ದಾರೆ. ಅಧಿಕಾರಿಗಳು ಜಾಣಕುರುಡರಾಗಿದ್ದಾರೆ. ಆದರೂ ನನ್ನಹಠ ಛಲ ಬಿಡಲಿಲ್ಲ. 20 ವರ್ಷಗಳಿಂದ ಕಂಡ ಕನಸು ಈಗ ನನಸು ಆಗಲಿದೆ. ಇಡೀ ಜಿಲ್ಲೆಯ ಕೆರೆಕಟ್ಟೆಗಳಿಗೆ ನದಿ ನೀರು ತುಂಬಿಸುತ್ತೇವೆ ಎಂದು ಮಾಧುಸ್ವಾಮಿರವರು ಮತ್ತು ಬಸವರಾಜ್ ರವರು ಅಬ್ಬರಿಸುತ್ತಿದ್ದಾರೆ. ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಪ್ರಾಯೋಗಿಕವಾಗಿ ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಕೆರೆ, ಕಟ್ಟೆ ಮತ್ತು ಕರಾಬು, ಕೋಡಿಹಳ್ಳ ಅಭಿವೃದ್ಧಿ ಮಾಡಿ ಹೇಮಾವತಿ ನದಿ ನೀರಿನಿಂದ ತುಂಬಿಸುವ ಮೂಲಕ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯ ಅಧ್ಯಯನ ಮಾಡುವ ಕಾಲ ಈಗ ಒದಗಿ ಬಂದಿದೆ.

ಆದರೇ ಸೋಪನಹಳ್ಳಿ ಕೆರೆ ಕೋಡಿಹಳ್ಳ ಒತ್ತುವರಿ ತೆರವು ಮಾಡುವವರು ಯಾರು? ಗ್ರಾಮಲೆಕ್ಕಿಗ, ರೆವಿನ್ಯೂ ಇನ್ ಸ್ಪೆಕ್ಟರ್, ತಹಶೀಲ್ಧಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಇವರೆಲ್ಲರ ಸಹಕಾರ ಅಗತ್ಯ.

 ಗ್ರಾಮಪಂಚಾಯತ್ ಪಿಡಿಓ ಹಳ್ಳಮುಚ್ಚಿದರೂ ವರದಿ ನೀಡಲಿಲ್ಲ ಎಂದರೆ, ಸ್ಥಳೀಯ ಸಂಸ್ಥೆಗಳ ಪಾತ್ರವಾದರೂ ಏನು? ಈ ಕೆರೆ ಮತ್ತು ಹಳ್ಳದ ಮಾಲೀಕರು ಯಾರು? ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳು ಪಿಕ್ ಅಪ್ ಕಟ್ಟಿ ಬಿಲ್ ಮಾಡಿಕೊಂಡರೇ ಇವರ ಕೆಲಸ ಮುಗಿಯುತೇ?

ಹಳ್ಳ ಮುಚ್ಚಿದರೂ ಕೇಳುವಷ್ಟು ಧೈರ್ಯ ಈ ಎರಡು ಗ್ರಾಮಗಳ ಜನರಿಗೆ ಇಲ್ಲದಂತೆ ಆಗಿದೆಯೇ? ಚುನಾವಣೆಯಲ್ಲಿ ಗೆದ್ದ ಗ್ರಾಮಪಂಚಾಯಿತಿ ಸದಸ್ಯರುಗಳಿಗೆ ಈ ಜವಾಬ್ಧಾರಿ ಇಲ್ಲವೇ? ನ್ಯಾಯಾಲಯಗಳು ಮಾತ್ರ ಕರಾಬು ಹಳ್ಳ ಒತ್ತುವರಿ ತೆಗೆಸಲು ತೀರ್ಪು ನೀಡುತ್ತಲೇ ಇವೆ. ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯಲಿವೆ.

ಅದೇನೇಇರಲಿ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಹಳ್ಳದ ಒತ್ತುವರಿ ತೆರವು ಮಾಡಿಸುವ ಮೂಲಕ ಯೋಜನೆಗೆ ಚಾಲನೆ ನೀಡುವುದು ಅಗತ್ಯವಾಗಿದೆ’.

ಗ್ರಾಮಗಳ ಬೋರ್ ವೆಲ್, ಬಾವಿಗಳು, ಹಳ್ಳಗಳು, ಕೆರೆ-ಕಟ್ಟೆಗಳು, ಮಳೆ ನೀರು ಮತ್ತು ಹೇಮಾವತಿ ನದಿ ನೀರು ಹಾಗೂ ರೈತರ ಸ್ಥಿತಿ ಬಗ್ಗೆ ಯಾವುದಾರೂ ವ್ಯಕ್ತಿ ಅಥವಾ ಸಂಸ್ಥೆ ಅಧ್ಯಯನ ಮಾಡಲು ಮುಂದೆ ಬಂದರೆ ಅಗತ್ಯ ಸಹಕಾರ ನೀಡಲಾಗುವುದು.

‘ಈ ಎರಡು ಗ್ರಾಮಗಳ ಜನತೆ ಹಳ್ಳವನ್ನು ಮತ್ತೆ ಗತಕಾಲದ ವೈಭವದ ತೊರೆ ಮಾಡಲು ಕೈಜೋಡಿಸುವರೇ ಅಥವಾ ನಾಟಕ ಆಡುವರೇ ಸತ್ಯದ ಅರಿವು ಈಗ ಆಗಲಿದೆ’.

ಸ್ನೇಹಿತ ಶ್ರೀ ಬಸವರಾಜ್ ಸುರಣಗಿಯವರು ಅಧ್ಯಯನ ಮಾಡಿದ್ದರು. ನಂತರ ಶ್ರೀ ಗಂಗಣ್ಣ ಮತ್ತು ಶ್ರೀ ಸತ್ಯಾನಂದ್ ಅಧ್ಯಯನ ಮಾಡಲು ಆರಂಭಿಸಿದ್ದರು. ಈಗ ಯಾರು ಮಾಡಲಿದ್ದಾರೆ ನೋಡೋಣ?

ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯತ್ ಪಿಡಿಓ ರವರೇ ಅಧ್ಯಯನ ವರದಿ ಮಾಡಬೇಕಿದೆ. ಇವರಿಗೆ ಸೂಕ್ತ ಸಹಕಾರ ನೀಡುವುದು ಜನತೆಯ ಕರ್ತವ್ಯ ಆಗಿದೆ. ಇಂದಿನಿಂದಲೇ ಆರಂಭಿಸಲು ಸಲಹೆ ನೀಡಲಾಗುವುದು.ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ ಮತ್ತು ಹೇಮಾವತಿ ಇಂಜಿನಿಯರ್ ತಂಡ ತಾಂತ್ರಿಕ ನೆರವು ನೀಡುವುದು ಸೂಕ್ತವಾಗಿದೆ.

  ಮಾನ್ಯ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಕಾವೇರಿ ನೀರಾವರಿ ನಿಗಮದ ತಂಡ ಯೋಜನೆಯ ಬೆನ್ನುಲುಬಾಗಿ ನಿಂತಿದೆ. ಮಾನ್ಯ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ಆದೇಶ ಮಾಡಿದ್ದಾರೆ.