27th July 2024
Share

TUMAKURU: SHAKTHI PEETA FOUNDATION

  ಶ್ರೀಮತಿ ಶಾಲಿನಿರಜನೀಶ್‌ರವರು ತುಮಕೂರು ಸ್ಕಿಲ್ ಸಿಟಿ ಬಗ್ಗೆ ಶಕ್ತಿಪೀಠ ಪೌಂಡೇಷನ್ ಸಿದ್ಧಪಡಿಸಿದ್ದ ಪಿಪಿಟಿ ನೋಡಲು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನಡೆದ ಸಭೆಗೆ ಬರುವುದಾಗಿ ತಿಳಿಸಿದ್ದರು. ಜಿಲ್ಲಾ ಕಾರ್ಯದರ್ಶಿರವರು ಹಾಜರಾಗುವ ಸಭೆಗೆ ಪ್ರೋಟೋಕಾಲ್ ಪ್ರಕಾರ ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್‌ರವರು, ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ಶುಭಕಲ್ಯಾಣ್‌ರವರು ಹಾಜರಾದರು. 

  ಅಂದು ತುಮಕೂರಿನ ಕೆಲವು ಮಹಾನ್ ನಾಯಕರುಗಳು ಎಂಪಿ. ಎಂಎಲ್‌ಎ ಇಬ್ಬರನ್ನು ಬಿಟ್ಟು ಕುಂದರನಹಳ್ಳಿ ರಮೇಶ್ ಅಧಿಕಾರಿಗಳ ಸಭೆ ನಡೆಸಿದ್ದಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸಿದರು.

 ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿದ ನಂತರ ಬಹುಷಃ ನಾನು ಕಳೆದ 20 ವರ್ಷಗಳಿಂದಲೂ  ಅಧಿಕಾರಿಗಳಿಗೆ ಮನವಿ ಮಾಡಿ, ಆ ಸಭೆಯಲ್ಲಿ ನಾನು ಸಹ ಭಾಗಿಯಾಗಿ ಸಮಾಲೋಚನೆ ನಡೆಸುವುದು ಸಾಮಾನ್ಯವಾಗಿತ್ತು. ಇದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ.

 ಯಾವುದೇ ಅಧಿಕಾರಿ ಒಂದು ಪಕ್ಷಕ್ಕೆ, ಜಾತಿಗೆ ಅಥವಾ ಚುನಾಯಿತ ಜನಪ್ರತಿನಿಧಿಗಳಿಗೆ ಬಾಂಡೆಡ್ ಲೇಬರ್ ಅಲ್ಲ, ಈ ದೇಶದ ಯಾವೊಬ್ಬ ಸಾಮಾನ್ಯ ವ್ಯಕ್ತಿ ನೀಡುವ ಸಲಹೆಗಳ ಬಗ್ಗೆ ಅವರು ಮನವರಿಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.

  ದೆಹಲಿಯಲ್ಲಿದ್ದ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೂ ವಿಷಯ ಮುಟ್ಟಿಸಿದರು. ಅವರು ನನ್ನನ್ನು ಪೋನ್ ಮೂಲಕ ಕೇಳಿದಾಗ ನಾನು ಅವರಿಗೆ ಮನವರಿಕೆ ಮಾಡಿದೆ, ನಾನು ಲೋಕಸಭಾ ಸದಸ್ಯರಾಗಿದ್ದ  ದಿ.ಎಸ್.ಮಲ್ಲಿಕಾರ್ಜುನಯ್ಯನವರು,  ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಮತ್ತು ವಿಧಾನಸಭಾ ಸದಸ್ಯರಾಗಿದ್ದ ಶ್ರೀ ಸೊಗಡುಶಿವಣ್ಣವರು ಮತ್ತು ಶ್ರೀ ರಫೀಕ್ ಅಹಮ್ಮದ್‌ರವರ ಕಾಲದಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವಾರು ಸಭೆ ನಡೆಸಿದ್ದೇವೆ.

 ಈಗಲೂ ಅದೇ ರೀತಿ ಸಭೆಯಲ್ಲಿ ಪಾಲ್ಗೊಂಡಿದ್ದೇನೆ ಇದರಲ್ಲಿ ವಿಶೇಷತೆ ಏನು ಸಾರ್ ಅಂದಾಗ, ಸರಿ ಇದರಲ್ಲಿ ತಪ್ಪಿಲ್ಲ ಎಂದರು, ತುಮಕೂರಿಗೆ ಬಂದಾಗ ಸಂಸದರೇ ಪತ್ರಿಕಾ ಘೋಷ್ಟಿ ಕರೆದು ಸ್ಪಷ್ಟನೆ ನೀಡುವ ಮಟ್ಟಕ್ಕೆ ತಲುಪಿತು. ನಾನು ಅಂದಿನಿಂದ ಸ್ಕಿಲ್ ಸಿಟಿ ಬಗ್ಗೆ ಗಮನಹರಿಸಿಲ್ಲ, ಬಹುತೇಕ ಯೋಜನೆ ಸತ್ತುಹೋಗಿರಬಹುದು ಅದೇನೆ ಇರಲಿ.

 ಶ್ರೀ ಟಿ.ಬಿ.ಜಯಚಂದ್ರರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಿಜ್ಞಾನಗುಡ್ಡ ಯೋಜನೆ ಭೂಗಳ್ಳರ ಹಾವಳಿಯಿಂದ ನೆನೆಗುದಿಗೆ ಬಿದ್ದಾಗ ಎಸ್‌ಐಟಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಭೆ ನಡೆದಾಗ ನಾನು ಅಲ್ಲಿ ಸಾಂಕೇತಿಕ ಪ್ರತಿಭಟನೆ ಘೋಶಿಸಿದ್ದೆ.

 ಅಲ್ಲಿಗೆ ಆಗಿನ ಗೃಹಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‌ರವರು ಸೇರಿದಂತೆ ಶಾಸಕರು ಸಂಸದರು, ಸಚಿವರು ಬರುತ್ತಿದ್ದಾರೆ ಪ್ರತಿಭಟನೆ ನಡೆಸಿದರೆ ಅರೆಸ್ಟ್ ಮಾಡುವುದಾಗಿ ಪೋಲೀಸ್ ಅಧಿಕಾರಿಯೊಬ್ಬರೂ ನನಗೆ ಕೇಳಿದರು.

 ಆಗಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ.ಪಿ.ಮೋಹನ್‌ರಾಜುರವರು ರಮೇಶ್‌ರವರು ಬಡವರಪರ ಧ್ವನಿ ಎತ್ತಿದ್ದಾರೆ, ಅವರು ಯಾವುದೇ ಅಹಿತಕರ ಘಟನೆಯಲ್ಲಿ ಇದೂವರೆಗೂ ಪಾಲ್ಗೊಂಡಿಲ್ಲ, ಅರೆಸ್ಟ್ ಮಾಡಲು ನಾನೇ ಹೇಳಿಲ್ಲ ನಿಮಗೆ ಹೇಳಿದವರು ಯಾರು ಎಂದಾಗ ಆ ಅಧಿಕಾರಿ ಮೌನವಾಗಿ ಹಿಂತಿರುಗಿದ್ದರು.

  ಪ್ರತಿಭಟನೆ ಸ್ಥಳಕ್ಕೆ ಶ್ರೀ ಟಿ.ಬಿ.ಜಯಚಂದ್ರರವರು, ಶ್ರೀ ಡಾ.ಜಿ.ಪರಮೇಶ್ವರ್‌ರವರು ಸೇರಿದಂತೆ ಶಾಸಕರು ಸಂಸದರು, ಸಚಿವರು, ಅಧಿಕಾರಿಗಳು ಬಂದಾಗ ಸಾರ್ ಪಿಲಿಕುಳ ಮಾದರಿಯಲ್ಲಿ ವಿಜ್ಞಾನಗುಡ್ಡ ಯೋಜನೆ ಮಾಡಿ ಅಥವಾ ಭೂಗಳ್ಳರಿಗೆ ಹೆದರುವುದಾದರೆ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಈ ಯೋಜನೆ ಮಾಡಿ ಎಂದಾಗ ತಕ್ಷಣ ಶ್ರೀ ಟಿ.ಬಿ.ಜಯಚಂದ್ರರವರು ಶಿರಾದಲ್ಲಿ ಮಾಡಲಾ ಎಂದರು, ದಯವಿಟ್ಟು ಮಾಡಿ ಸಾರ್ ಎಂದಾಗ ಅವರ ಕನಸಿನ ಕೂಸಾಗಿ ಶಿರಾ ಮತ್ತು ಹಿರಿಯೂರಿನ ಸುಮಾರು 900 ಎಕರೆ ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ಹೆರಿಟೇಜ್ ಹಬ್‌ಗೆ ಚಾಲನೆ ನೀಡಿದರು.

 ಅವರಿಗೆ ನಾನು ಹೇಳಿದೆ ಸಾರ್ ಅವಧಿಯಲ್ಲಿ ಭೂಮಿಪೂಜೆ ಮಾಡಿ, ರೂ 2 ಕೋಟಿ ಹಣವನ್ನು ಇಟ್ಟಿದ್ದೀರಿ, ಸಚಿವ ಸಂಪುಟದ ಅನುಮೋದನೆಯೂ ಆಗಿದೆ ಎಂದರೂ ಅವರು ಕೇಳಲಿಲ್ಲ, ನಾನೇ ಗೆಲ್ಲುವುದು, ಮುಂದೆ ನಮ್ಮ ಸರ್ಕಾರವೇ ಬರುತ್ತದೆ ಎಂದು ಉದಾಸೀನ ಮಾಡಿದರು.

 ಅವರು ಸೋತ ಮೇಲೆ ಈ ಯೋಜನೆ ಬಗ್ಗೆ ಯಾರೊಬ್ಬರೂ ಚಕಾರ ಎತ್ತಿಲ್ಲ. ನಾನು ದಿಶಾ ಸಮಿತಿಯಲ್ಲಿ ವಿಷಯ ಪ್ರಸ್ತಾಪಿಸಿದೆ. ಈಗ ಇನ್ವೆಸ್ಟ್ ತುಮಕೂರು ಯೋಜನೆಯ ಪ್ರಸ್ತಾವನೆಯಲ್ಲಿ ಸೇರ್ಪಡೆ ಮಾಡಲಾಗಿದೆ. ನಾನು ಹಿರಿಯೂರು ಶಾಸಕರಾದ ಶ್ರೀಮತಿ ಪೂರ್ಣಿಮಾರವರ ಬಳಿಯೂ ಸಮಾಲೋಚನೆ ನಡೆಸಿದೆ, ಅವರು ಈ ಯೋಜನೆಯ ಬಗ್ಗೆ ವಿಶೇಷ ಗಮನಹರಿಸಿ ಮೌನವಾಗಿದ್ದಾರೆ.

 ಪ್ರಸ್ತುತ ನೆದರ್‌ಲ್ಯಾಂಡ್ ಉದ್ಯಮಿಯೊಬ್ಬರೂ ಈ ಯೋಜನೆಯ ಒಂದು ಭಾಗವಾಗಿ ಸ್ಕಿಲ್‌ಸಿಟಿ ಆರಂಭಿಸಲು ಮುಂದೆ ಬಂದಿದ್ದಾರೆ. ಸುಮಾರು 342 ನಿರ್ಗತಿಕರಿಗೆ ಒಂದೊಂದು ಉತ್ಪನ್ನದ ಘಟಕಗಳನ್ನು ಸ್ಥಾಪಿಸಿ, ರಾಜ್ಯದ ಆಸಕ್ತರಿಗೆ ತರಬೇತಿ ನೀಡುವುದು, ಉತ್ಪನ್ನದ ಡೇಟಾ ಬೇಸ್ ಮಾಡುವುದು ಹಾಗೂ ರಫ್ತು ಉಧ್ಯಮಕ್ಕೆ ಅವಕಾಶ ಕಲ್ಪಿಸಲು ಮುಂದೆ ಬಂದಿದ್ದಾರೆ.

  ಶಕ್ತಿಪೀಠ ಪೌಂಡೇಷನ್ ಅವರಿಗೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮಿಸಲಿದೆ. ಜಿಲ್ಲಾಧಿಕಾರಿಗಳೇ ಈ ಯೋಜನೆ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟ ಪಡಿಸಿ, ಕರ್ನಾಟಕ ಹೆರಿಟೆಜ್ ಹಬ್  ಮಾಡುತ್ತಿರೋ ಅಥವಾ ಇಲ್ಲವೋ. ಒಂದು ವೇಳೆ ಸರ್ಕಾರ ಮಾಡದೇ ಇದ್ದಲ್ಲಿ ಬೇರೆ ಕಡೆ ಜಮೀನುಕೊಂಡು ಕೊಂಡು ಈ ಯೋಜನೆ ಮಾಡಲು ಚಿಂತನೆ ನೆಡೆಸಲಾಗಿದೆ.

  ಅಲ್ಲದೇ ಶಿರಾ ತಾಲ್ಲೂಕಿನ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ರವರಾದ ಶ್ರೀ ಮಂಜುಪ್ರಸಾದ್‌ರವರು ಮತ್ತು ಅವರ ತಂಡ ಜಮೀನಿನಲ್ಲಿ ನರೇಗಾ ಯೋಜನೆಯಡಿ ಗಿಡ ಬೆಳೆಸಲು ಮತ್ತು ಅಂತರ್ಜಲ ಮರುಪೂರಣ ಯೋಜನೆಗಳನ್ನು ಆರಂಭಿಸಲು ಮುಂದೆ ಬಂದಿದ್ದಾರೆ.

 ಕರ್ನಾಟಕ ಹೆರಿಟೆಜ್ ಹಬ್‌ಗೆ  ತುಮಕೂರು ಸ್ಮಾರ್ಟ್ ಸಿಟಿ ಎಂಡಿ ಶ್ರೀ ರಂಗಸ್ವಾಮಿರವರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ, ಅವರ ಜೊತೆಗೆ ಶ್ರೀ ಮುಂಜುಪ್ರಸಾದ್‌ರವರಿಗೂ ಹೊಣೆಗಾರಿಕೆ ನೀಡಿ ಲೇಔಟ್ ಮತ್ತು ಹಸಿರು ಕ್ಯಾಂಪಸ್ ಮಾಡಲು ಮುಂದಾಗಲು ಮನವಿ ಮಾಡಲಾಗಿದೆ.

  ಒಬ್ಬ ಚುನಾಯಿತ ಜನಪ್ರತಿನಿಧಿ ಸೋತ ತಕ್ಷಣ ಯಾವುದೇ ಯೋಜನೆ ನಿಲ್ಲಬಾರದು, ಅವರ ಸಲಹೆಯನ್ನು ಪಡೆದು ಶಿರಾ ಶಾಸಕರಾದ ಶ್ರೀ ಬಿ.ಸತ್ಯನಾರಾಯಣರವರು ಮತ್ತು ಹಿರಿಯೂರು ಶಾಸಕರಾದ ಶ್ರೀಮತಿ ಪೂರ್ಣಿಮಾರವರು ಗಮನ ಹರಿಸಲು ಶಕ್ತಿದೇವತೆ ಮನಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.