25th July 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಗುಬ್ಬಿ ತಾಲ್ಲೂಕು, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ, ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದ ಮೇರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 18 ಗ್ರಾಮಗಳಲ್ಲಿನ ಎಲ್ಲಾ ವಿಧವಾದ ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್’ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದರು.

  ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಉಪವಿಭಾಗಾಧಿಕಾರಿಯಾದ ಶ್ರೀ ಅಜಯ್‌ರವರು, ತಹಶೀಲ್ಧಾರ್ ಶ್ರೀ ಪ್ರದೀಪ್‌ಕುಮಾರ್‌ರವರು, ನಿಟ್ಟೂರು ಆರ್.ಐ. ಶ್ರೀ ನಾರಾಯಣ್ ರವರು, ಕಡಬ ಆರ್.ಐ. ಶ್ರೀ ನಾಗಭೂಷಣ್‌ರವರು, ಎಡಿಎಲ್‌ಆರ್, ತಾಲ್ಲೂಕು ಸರ್ವೇಯರ್, ಕೇಸ್ ವರ್ಕರ್ ಮತ್ತು ಗ್ರಾಮ ಲೆಕ್ಕಿಗರ ಸಭೆಯನ್ನು ಕರೆದು ಪ್ರತಿಯೊಬ್ಬರಿಗೂ ಕಾಲಮಿತಿ ನಿಗದಿಗೊಳಿಸಲು ದಿನಾಂಕ:19.08.2020 ರಂದು ಪ್ರಗತಿ ಪರಿಶಿಲನೆ ನಡೆಸಲಿದ್ದಾರೆ.

ಸಭೆಯಲ್ಲಿ ಕೆಳಕಂಡ 12 ವಿಷಯಗಳ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ.

  1. ಗ್ರಾಮವಾರು, ಸರ್ಕಾರಿ ಜಮೀನುವಾರು ಪ್ರತಿಯೊಂದು ಸರ್ವೆನಂಬರ್‌ವಾರು ಬಗರ್ ಹುಕುಂ ಅರ್ಜಿ ಹಾಕಿರುವವರ ಮಾಹಿತಿ, ಜಮೀನು ಅನುಭವದಲ್ಲಿರುವವರ ಮಾಹಿತಿ, ವಿಸ್ತೀರ್ಣ, ಹೀಗೆ ಪ್ರತಿಯೊಂದು ಮಾಹಿತಿಗಳ ಇತಿಹಾಸದ ಮಾಹಿತಿ ಸಂಗ್ರಹಿಸುವುದು.
  2. ಬಗರ್ ಹುಕುಂ ಯೋಜನೆಯಡಿ ಅರ್ಜಿ ಹಾಕಿದ್ದು, ನಿಯಮ ಪ್ರಕಾರ ಅವರ ಕುಟುಂಬಕ್ಕೆ ಸರ್ಕಾರಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲದೆ ಇದ್ದಂತಹ ಸಂದರ್ಭದಲ್ಲಿ, ಅವರ ಕುಟುಂಬದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇದ್ದಲ್ಲಿ ಕೈಗಾರಿಕೆ ಸ್ಥಾಪಿಸಲು ಅಗತ್ಯವಿರುವ ಸರ್ಕಾರಿ ಜಮೀನನ್ನು ನಿಯಮ ಪ್ರಕಾರ ಮಂಜೂರು ಮಾಡುವುದು.
  3. ಜಲಸಂಗ್ರಹಗಾರಗಳ ಮತ್ತು ಕರಾಬುಹಳ್ಳಗಳ ಜಿಐಎಸ್ ಲೇಯರ್ ಮಾಡಿ ಒತ್ತುವರಿ ಗುರುತಿಸಿ ತೆರವು ಗೊಳಿಸುವುದು.
  4. ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಗುರುತಿಸುವುದು.
  5. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸಕ್ತ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಸರ್ಕಾರಿ ಜಮೀನು ಜಿಐಎಸ್ ಲೇಯರ್ ಮಾಡುವುದು.
  6. ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್‌ಗಾಗಿ ಸರ್ಕಾರಿ ಜಮೀನು ಗುರುತಿಸುವುದು.
  7. ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್‌ನಲ್ಲಿ ಹೆಚ್.ಎ.ಎಲ್ ಭೂ ಸಂತ್ರಸ್ಥರಿಗೆ ನಿವೇಶನ ನೀಡಲು ಪಟ್ಟಿ ಅಂತಿಮ ಗೊಳಿಸುವುದು.
  8. ಅಗತ್ಯವಿರುವ ಸರ್ಕಾರಿ ಇಲಾಖೆಗಳ ಯೋಜನೆಗೆ ಸರ್ಕಾರಿ ಜಮೀನನಲ್ಲಿ ಜಮೀನು ನಿಗದಿ ಗೊಳಿಸುವುದು.
  9. ಪ್ರತಿಯೊಂದು ಗ್ರಾಮವಾರು ಲ್ಯಾಂಡ್ ಆಡಿಟ್ ಮಾಡಿ,ಭೂ ಬಳಕೆ ಜಿಐಎಸ್ ಮ್ಯಾಪ್ ಮಾಡುವುದು.
  10. ಪ್ರತಿಯೊಂದು ಗ್ರಾಮದ ಗ್ರಾಮಠಾಣ, ಸರ್ಕಾರಿ ಜಮೀನು ಮತ್ತು ರೈತರ ರೆವಿನ್ಯೂ ಜಮೀನುಗಳಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ವಿಧವಾದ ಕಟ್ಟಡಗಳ ಜಿಐಎಸ್ ಲೇಯರ್ ಮಾಡಿ ಇ-ಸ್ವತ್ತು ನೀಡುವುದು.
  11. ಗ್ರಾಮ ಪಂಚಾಯತ್ ಪಿಡಿಓ ಶ್ರೀ ಗುರುಮೂರ್ತಿಯವರಿಗೆ ನಿವೇಶನ ರಹಿತರ ಮಾಹಿತಿ, ವಸತಿ ರಹಿತರ ಮಾಹಿತಿ, ಅಲೆಮಾರಿ ಜನರಲ್ಲಿ ನಿವೇಶನ ಮತ್ತು ವಸತಿ ರಹಿತರ ಮಾಹಿತಿ, ಈಗಾಗಲೇ ಸರ್ಕಾರದ ಅನುದಾನದಲ್ಲಿ ವಸತಿ ನಿರ್ಮಾಣಮಾಡಿದ್ದರೂ ಕಟ್ಟಡ ಶೀಥಿಲ ಗೊಂಡಿದ್ದಲ್ಲಿ ಅಂಥವರ ಪಟ್ಟಿ ಮಾಡಲು ಕಾಲಮಿತಿ ನಿಗದಿಗೊಳಿಸಲಿದ್ದಾರೆ.
  12. ಜಿಲ್ಲಾ ಕೈಗಾರಿಕಾ ಕೇಂದ್ರದವರು ಮತ್ತು ಕೌಶಲ್ಯ ಇಲಾಖೆಯವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿಗಳ, ವಿವಿಧ ಸಂಘಸಂಸ್ಥೆಗಳ  ಪಟ್ಟಿ ಮಾಡಿ ಅವರು ಕೈಗೊಳ್ಳಲು ಆಸಕ್ತಿ ಇರುವ ಉದ್ದಿಮೆವಾರು ಪಟ್ಟಿ ಮಾಡಿ ಸೂಕ್ತ ತರಬೇತಿ ನೀಡಲು ಸೂಚಿಸಲಿದ್ದಾರೆ.