26th July 2024
Share

TUMAKURU:SHAKTHIPEETA FOUNDATION

 ಭಾರತ ದೇಶದಲ್ಲಿ ಯಾವ ಜಿಲ್ಲೆಯಲ್ಲಿ ಏನೇನು ಮಾಡಿದ್ದಾರೋ ಗೊತ್ತಿಲ್ಲ. ಆದರೇ ತುಮಕೂರು ಜಿಲ್ಲೆಯಲ್ಲಿ ಮಾತ್ರ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಎಂಬ ಯೋಜನೆಯಡಿಯಲ್ಲಿ ನದಿ ನೀರಿನ ಅಲೋಕೇಷನ್ ಮಾಡಲು ಇಲ್ಲಿನ   ಚುನಾಯಿತ ಜನಪ್ರತಿನಿಧಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

 ಉಪಚುನಾವಣೆ ಆದ ನಂತರ ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳಿಯ ಸಂಸ್ಥೆಗಳಲ್ಲಿ ಪ್ರತಿಯೊಂದು ಗ್ರಾಮದ ನದಿ ನೀರಿನ ಅಲೋಕೇಷನ್ ನಕ್ಷೆಯನ್ನು ಪ್ರಕಟಿಸಲು ಚಿಂತನೆ ನಡೆದಿದೆ.

 ನಕ್ಷೆಯಲ್ಲಿ ಜಿಲ್ಲೆಗೆ ಅಲೋಕೇಷನ್ ಆಗಿರುವ ಹೇಮಾವತಿ, ಭಧ್ರಾಮೇಲ್ದಂಡೆ, ಎತ್ತಿನಹೊಳೆ, ತುಂಗಭಧ್ರಾ ನೀರಿನಿಂದ ತುಂಬುವ ಕೆರೆಗಳ ಮಾಹಿತಿ ಸಿದ್ಧವಿದೆ. ಉಳಿದ ಕೆರೆಗಳಿಗೆ ನದಿ ನೀರಿನ ಅಲೋಕೇಷನ್ ಮಾಡಿಸಲು ಕುಮಾರಧಾರ ನದಿ ನೀರಿನ ಯೋಜನೆ ರೂಪಿಸಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಆದೇಶಿಸಿದ್ದಾರೆ.

  ಈ ಬಗ್ಗೆ ಮಾನ್ಯಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಶ್ರೀ ಮಾಧವ ಸೇರಿದಂತೆ ಅವರ ತಂಡ,  ಶ್ರೀ ಮಲ್ಲೇಶ್, ಶ್ರೀ ವೇದಾನಂದಮೂರ್ತಿ, ಶ್ರೀ ಹರೀಶ್ ಮತ್ತು ಕುಂದರನಹಳ್ಳಿ ರಮೇಶ್ ಭಾಗವಹಿಸಿದ್ದರು.

  ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಫೈಲಟ್ ಮಾದರಿಯಲ್ಲಿ ಎತ್ತಿನಹೊಳೆ ಯೋಜನೆ ಈಗಾಗಲೇ ಆರಂಭವಾಗಿದೆ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ 2023  ರೊಳಗೆ ಜಿಲ್ಲೆಯ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಕೊರತೆ ಇರುವ ನೀರನ್ನು ಒದಗಿಸಲು ಇದೆ ಕಾಲುವೆಗೆ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಕುಮಾರಧಾರ ನದಿಯೋಜನೆಯ ನೀರನ್ನು ಹಾಕಲು ಶ್ರೀ ವೇದಾನಂದಾಮೂರ್ತಿ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿದ್ದಾರೆ.

 ಈ ಯೋಜನೆಯಿಂದ ಜಿಲ್ಲೆಯಲ್ಲಿ ಯಾವ ಕೆರೆಗಳಿಗೆ ನದಿ ನೀರು ಅಲೋಕೇಷನ್ ಬೇಕು ಮತ್ತು ಜಿಲ್ಲೆಯಲ್ಲಿ ಕೆರೆ-ಕಟ್ಟೆಗಳಿಲ್ಲದ 712 ಗ್ರಾಮಗಳಲ್ಲಿ ಯಾವ ರೀತಿ ನದಿ ನೀರು ಸಂಗ್ರಹಿಸಬಹುದು ಎಂಬ ಬಗ್ಗೆ ಚಿಂತನೆ ಆರಂಭವಾಗಿದೆ. 

 ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ತಿಪಟೂರು ಕ್ಷೇತ್ರದಲ್ಲಿ ಶಾಸಕರಾದ ಶ್ರೀ ನಾಗೇಶ್‌ರವರು ಮತ್ತು ತುಮಕೂರು ನಗರದ ಕ್ಷೇತ್ರದಲ್ಲಿ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಬಹುತೇಕ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಲು ನೀಲಿನಕ್ಷೆ ತಯಾರಿಸಿ ಮಂಜೂರಾತಿಗೆ ಶ್ರಮಿಸುತ್ತಿದ್ದಾರೆ. ಬಹುತೇಕ ಈ ಅವರ ಅವಧಿಯಲ್ಲಿ ಚಾಲನೆ ನೀಡುವ ಭರವಸೆಯಿದೆ. ಪಾವಗಡ ಕ್ಷೇತ್ರದಲ್ಲಿ ತುಂಗಭಧ್ರಾ ಯೋಜನೆಯಿಂದ ಬಹುತೇಕ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿದೆ. ಉಳಿದ ಶಾಸಕರುಗಳ ಯೋಜನೆಯ ಮಾಹಿತಿ ದೊರೆತಿಲ್ಲ.

    ‘ಜಿಲ್ಲೆಯ ಸಂಸದರಾದ ಶ್ರೀ ಡಿ.ಕೆ.ಸುರೇಶ್‌ರವರು ಮತ್ತು ಶ್ರೀ ನಾರಾಯಣಸ್ವಾಮಿರವರೊಂದಿಗೆ ಈಗಾಗಲೇ ಶ್ರೀ ಜಿ.ಎಸ್.ಬಸವರಾಜ್‌ರವರು ಸಮಾಲೋಚನೆ ನಡೆಸಿದ್ದಾರೆ. ಎಲ್ಲಾ ಶಾಸಕರು ಪಕ್ಷಬೇಧ ಮರೆತು ಒಟ್ಟಾಗಿ ಕುಳಿತು ಎಲ್ಲರೂ ಒಪ್ಪುವ ಕೆಲಸವನ್ನು ಮಾಡುವ ಗುರಿಯಿದೆ. ಮುಂದಿನ ಆರು ತಿಂಗಳೊಳಗೆ ಯೋಜನೆಯ ಸಂಪೂರ್ಣ ರೂಪುರೇಷೆ ಪೂರ್ಣಗೊಳ್ಳುವ ಭರವಸೆಯನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ಖುಷಿಯಿಂದ ವ್ಯಕ್ತಪಡಿಸುತ್ತಾರೆ’