27th July 2024
Share

TUMAKURU:SHAKTHIPEETA FOUNDATION

ಸಿಂಗ್‌ರವರು ಆರಂಭ ಮಾಡಿದ ಯೋಜನೆಗೆ ಮೋದಿವರು ರೂ 1701 ಕೋಟಿ ಬೃಹತ್ ಮೊತ್ತ ನೀಡುವ ಮೂಲಕ ಹಾಲು ತುಪ್ಪ ನೀಡಿದ್ದಾರೆ. ಬಸವರಾಜ್‌ರವರು ಗುರಿ ತಲುಪಬೇಕಾದರೆ ಇನ್ನೂ ಬಹಳಷ್ಟು ಕೆರೆ ನೀರು ಕುಡಿಯಬೇಕು.’

ಒಂದಿಷ್ಟು ಇತಿಹಾಸ.

ಮಾಜಿ ಪ್ರಧಾನಿ ಶ್ರೀ ಮನಮೋಹನ್‌ಸಿಂಗ್‌ರವರು 2008  ರಲ್ಲಿಯೇ ನಿಮ್ಜ್  ಕನಸು ಕಂಡಿದ್ದರು.

ದೇಶದಲ್ಲಿ ಮೊದಲ ಹಂತದಲ್ಲಿ 10 ನಿಮ್ಜ್ ನೀಡಲು ಆಗಿನ ವಾಣಿಜ್ಯ ಸಚಿವರಾದ ಶ್ರೀ ಆನಂದಶರ್ಮರವರು ಘೋಷಣೆ ಮಾಡಿದ್ದರು.

ತುಮಕೂರಿನಲ್ಲಿ ಜಿ.ಎಸ್.ಬಸವರಾಜ್‌ರವರು ಸೋತಿದ್ದರು.

ಶ್ರೀ ಎಸ್.ಸುರೇಶ್‌ಕುಮಾರ್‌ರವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇವರಿಗೆ ತುಮಕೂರಿಗೆ ನಿಮ್ಜ್ ಮಂಜೂರು ಮಾಡಿಸಬೇಕಾದರೆ 5000 ಹೆಕ್ಟೇರ್ ಜಮೀನು ಭೂ ಸ್ವಾಧೀನ ಮಾಡಬೇಕು ಎಂದು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಪತ್ರ ಬರೆದರು.

ಈ ಫೋರಂ ಪತ್ರ ನೋಡಿ ಸುರೇಶ್‌ಕುಮಾರ್ ಆಪ್ತ ಕಾರ್ಯದರ್ಶಿರವರಾದ ಶ್ರೀ ಡಾ.ಎ.ಆರ್ ಮಂಜುನಾಥ್‌ರವರು ಕೇಂದ್ರದಲ್ಲಿ ಯುಪಿಎ ಸರ್ಕಾರವಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಎಂಪಿಯವರು ಪತ್ರ ಬರೆದಿಲ್ಲ ಕುಂದರನಹಳ್ಳಿ ರಮೇಶ್ ಪತ್ರ ಬರೆದಿದ್ದಾರೆ. ಏನು ಮಾಡುವುದು ಎಂದು ಸಚಿವರನ್ನು ಕೇಳಿದ್ದಾರೆ.

ಸುರೇಶ್‌ಕುಮಾರ್‌ರವರು ನೋಡಿ ಮಂಜುನಾಥ್‌ರವರೇ ಕುಂದರನಹಳ್ಳಿ ರಮೇಶ್ ಒಬ್ಬ ಕನಸುಗಾರ, ಅವರು ಇದೂವರೆಗೂ ನಮ್ಮ ಬಳಿ ವರ್ಗಾವಣೆ ಅರ್ಜಿ, ಪೆಂಡಿಂಗ್ ಬಿಲ್ ಅರ್ಜಿ ಹಿಡಿದು ಬಂದಿಲ್ಲ. ಬೃಹತ್ ಯೋಜನೆಗಳ ಹಾಗೂ ಉತ್ತಮವಾದ ಯೋಜನೆಗಳ ಬಗ್ಗೆ ಪತ್ರ ಬರೆದಿದ್ದಾರೆ. ನಾವೂ ಪತ್ರ ಬರೆಯೋಣ, ಎಂದು ಹೇಳಿ  ಕೆಐಡಿಬಿಗೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರಂತೆ.

ಕೆಐಡಿಬಿಗೆ ಪತ್ರ ಬರೆದನಂತರ ಅಲ್ಲಿ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಶ್ರೀ ರಾಮಕೃಷ್ಣರವರು ಒಂದು ದಿವಸ ನನಗೆ ಕಾಲ್ ಮಾಡಿದರು. ರಮೇಶ್‌ರವರೇ ಸುರೇಶ್ ಕುಮಾರ್ ಪತ್ರ ಬಂದಿದೆ. ಇದರ ಜೊತೆ ನಿಮ್ಮ ಪತ್ರವೂ ಇದೆ. ನಾನೂ ಇಂದು ತುಮಕೂರಿಗೆ ಬರುತ್ತೇನೆ, ಮಾತಾಡೋಣ ಸಿಗಿ ಎಂದಿದ್ದರು.

ತುಮಕೂರಿನ ಹೊಯ್ಸಳ ಹೋಟೆಲ್‌ನಲ್ಲಿ ಕಾಫಿ ಕುಡಿದು ಇಬ್ಬರು ಮಾತನಾಡಿದೆವು. ಆಗಿನ ನಿಯಮದ ಪ್ರಕಾರ ಸುಮಾರು ೫೦ ಕೀಮೀ ರೇಡಿಯಸ್‌ನಲ್ಲಿ 12500 ಎಕರೆ ಜಮೀನು ಅಗತ್ಯವಿದೆ ಎಂದು ಹೇಳಿದ್ದರು. ರಾಮಕೃಷ್ಣರವರು ಹೇಳಿದ್ದು ಅಷ್ಟೆ ನೀವೂ ಜಿಲ್ಲೆಯಲ್ಲಿ ಎಲ್ಲೆಲ್ಲಿ ಜಮೀನು ಇದೆ ಹೇಳಿ, ನಾನು ನೋಟಿಫೀಕೇಷನ್ ಮಾಡುತ್ತೇನೆ, ಮುಂದೆ ನೋಡೋಣ ಎಂದು ಹೇಳಿದ ಪುಣ್ಯಾತ್ಮ. ಹಾಗೇಯೇ ಮಾಡಿಯೂ ಬಿಟ್ಟರು.

ನಂತರ 2009  ರಲ್ಲಿ 4 ನೇ ಭಾರಿಗೆ ಜಿ.ಎಸ್.ಬಸವರಾಜ್‌ರವರು ಸಂದರಾದ ನಂತರ ಶುರುವಾಯಿತು ನಮ್ಮ ನಿರಂತರ ಹೋರಾಟ. ಕಾಕತಾಳಿಯವೆಂಬಂತೆ ಆ ಅವಧಿಯಲ್ಲಿ ಬಸವರಾಜ್‌ರವರು ಕಾಮರ್ಸ್ ಕಮಿಟಿ ಸದಸ್ಯರು ಆದರು. ನಮ್ಮ ಜೊತೆಗೆ ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಜೊತೆಯಾದರು, ವಾರಕ್ಕೊಂದು ಜ್ಞಾಪನಾ ಪತ್ರ ಬರೆಯುವುದು ಅವರಿಗೆ ಖುಷಿ.

ದೇಶದಲ್ಲಿ 9 ನಿಮ್ಜ್ ಉತ್ತರ ಭಾರತದ ಪ್ರದೇಶಕ್ಕೆ ಮಂಜೂರಾದರೇ ದಕ್ಷಿಣ ಭಾರತಕ್ಕೆ ಮೊದಲು ಮಂಜೂರಾಗಿದ್ದು ತುಮಕೂರಿಗೆ ಮಾತ್ರ. ಫೋರಂ ಒಂದು ಪುಸ್ತಕವನ್ನೆ ಬರೆದು ಹಂಚುವ ಮೂಲಕ ಜನಜಾಗೃತಿ ಮಾಡಿತು. 

ಇದು ಜಿ.ಎಸ್.ಬಸವರಾಜ್‌ರವರ ಮಾತೃ ಪಕ್ಷದ ನಾಯಕರುಗಳ ಕೊಡುಗೆ.

2012 ರಲ್ಲಿ ಕೇಂದ್ರದಲ್ಲಿ ಇನ್ ಪ್ರಿನ್ಸಿಫಲ್ ಆದ ನಂತರ, ಮುಖ್ಯಕಾರ್ಯದರ್ಶಿ ಕಚೇರಿಗೆ ಹೋದಾಗ, ಆಗಿನ ಮುಖ್ಯ ಕಾರ್ಯದರ್ಶಿ ಶ್ರೀ ಎಸ್.ವಿ.ರಂಗನಾಥ್‌ರವರು ಬಸವರಾಜ್‌ರವರನ್ನು ತಬ್ಬಿಕೊಂಡು ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರಿ ಎಂದು ಹೇಳಿದ ಮಾತಿಗೆ ನಾನೇ ಸಾಕ್ಷಿ.

ಬಸವರಾಜ್‌ರವರು ಆಗಿನ ಹಣಕಾಸು ಸಚಿವರಾಗಿದ್ದ ದಿ.ಪ್ರಣವಮುಖರ್ಜಿರವರಿಗೆ ಮನವೊಲಿಸಿ ಚನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ನ್ನು, ಚಿತ್ರದುರ್ಗದ ಆಗಿನ ಎಂಪಿಯವರಾದ ಶ್ರೀ ಜನಾರ್ಧನ ಸ್ವಾಮಿರವರ ಜೊತೆಗೂಡಿ ಚಿತ್ರದುರ್ಗದವರೆಗೂ ವಿಸ್ತರಣೆ ಮಾಡಿಸಿದರು.

ಜೊತೆಗೆ ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಆಗಿಯೂ ಘೋಷಣೆ ಮಾಡಿಸಿದರು.

ನಂತರ ಬಸವರಾಜ್ ಸೋತರು, ಕೇಂದ್ರದಲ್ಲಿ ನಿಮ್ಜ್‌ಗೆ ಬದಲಾಗಿ ಇಂಡಸ್ಟಿಯಲ್ ನೋಡ್ ಎಂದು ನಾಮಕರಣ ಮಾಡಿದರು. ಯೋಜನೆ ನೆನೆಗುದಿಗೆ ಬಿದ್ದಿತ್ತು.

ನಂತರ ಬಸವರಾಜ್‌ರವರು 5 ನೇ ಭಾರಿ ಸಂಸದರಾದ ಮೇಲೆ ಮತ್ತೆ ಚಾಲನೆ ಬಂದ ಪರಿಣಾಮ ಇಂದು ಅಂತಿಮವಾಗಿ ಯೋಜನೆ ಮಂಜೂರಾತಿ ಪಡೆಯಿತು.

ಸಿಂಗ್‌ರವರು ಆರಂಭ ಮಾಡಿದ ಯೋಜನೆಗೆ ಮೋದಿವರು ರೂ 1701  ಕೋಟಿ ಬೃಹತ್ ಮೊತ್ತ ನೀಡುವ ಮೂಲಕ ಹಾಲು ತುಪ್ಪ ನೀಡಿದ್ದಾರೆ. ಬಸವರಾಜ್‌ರವರು ಗುರಿ ತಲುಪಬೇಕಾದರೆ ಇನ್ನೂ ಬಹಳಷ್ಟು ಕೆರೆ ನೀರು ಕುಡಿಯಬೇಕು.’

ಎತ್ತಿಹೊಳೆ ನೀರು ನೀರು ನಿಗದಿಯಾಗಿ ನೋಟಿಫಿಕೇಷನ್ ಆಗದಿದ್ದರೆ, ಯೋಜನೆಗೆ ಹೊಡೆತ ಗ್ಯಾರಂಟಿ.   

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಚುನಾಯಿತ ಜನಪ್ರತಿನಿಧಿಗಳ, ಅಧಿಕಾರಿಗಳ ನಿರಂತರ ಶ್ರಮಕ್ಕೆ ಅಭಿನಂದನೆ ಸಲ್ಲಿಸಲೇ ಬೇಕು.