19th April 2024
Share

TUMAKURU:SHAKTHIPEETA FOUNDATION

ತುಮಕೂರು ಪ್ರೆಸ್ ನವರು ಎಂದರೆ, ಇವರ ಕಾಟ ಸಾಕಪ್ಪ, ಇವರು ಏಕೆ ಹೀಗೆ ಆಡುತ್ತಾರೆ, ಎಂಬ ಭಾವನೆ ಒಂದು ಕಾಲದಲ್ಲಿ ಮೂಡಿತ್ತು. ಈಗ ಬದಲಾವಣೆಯ ಪರ್ವ ಆದಂತೆ ಕಾಣುತ್ತಿದೆ. ಜ್ಞಾನ ದೇಗುಲದಲ್ಲಿ ತುಮಕೂರು ಪ್ರೆಸ್ ಕ್ಲಬ್ ಹಲವಾರು ಜನಪರ ಅಭಿವೃದ್ಧಿ ಯೋಜನೆಗಳ ಜ್ಞಾನ ಭಂಡಾರ ಸ್ಥಾಪಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾಗಿರುವ ಆಲದ ಮರದ ಪಾರ್ಕ್ ಸ್ಥಳದಲ್ಲಿ ಹಿಂದೆ ಒಂದು ನಾಮಫಲಕವಿತ್ತು. ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಬರಹ ಕಿರೀಟ ದಂತೆ ಇತ್ತು. ಆಲದ ಮರದ ಪಾರ್ಕ್ ಆದ ನಂತರ ಖಾಲಿ ಎಣ್ಣೆ ಬಾಟಲ್‍ಗಳು, ಕಾಂಡೋಮ್ ಗಳು ಚೆಲ್ಲಾಡುತ್ತಿದ್ದ ದೃಷ್ಯ ನನಗೆ ಬಹಳ ನೋವು ತಂದಿತ್ತು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಆನೇಕಬಾರಿ ಚರ್ಚೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸಲು ಪ್ರಾಥಮಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವಾನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಸಹ ಕಾಯಕಲ್ಪ ನೀಡಲು ಮುಂದಾಗಿದ್ದರು.

ಸರ್ಕಾರಿ ಜ್ಯೂನಿಯರ್ ಕಾಲೇಜಿನ ಯಾವೊಬ್ಬ  ಪ್ರಾಂಶುಪಾಲರುಗಳು ಮೈದಾನದ ಸಂರಕ್ಷಣೆ ಮಾಡಲು ಮುಂದಾಗಲಿಲ್ಲ ಎಂಬ ಕೊರಗು ನನಗಿದೆ. ಏನು ಮಾಡುವುದು, ಸತ್ಯ ಯಾವಾಗಲೂ ಕಹಿ.

ಪ್ರೆಸ್ ಕ್ಲಬ್ ಪದಾಧಿಕಾರಿಗಳ ಆಶಯದಂತೆ ತುಮಕೂರು ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ, ಸ್ಮಾರ್ಟ್ ಚಿಂತನೆಗಳಿಗೆ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಸಂಪೂರ್ಣ ಸಹಕಾರ ನೀಡಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮುಂದಾಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳುವುದು ಪ್ರೆಸ್ ಕ್ಲಬ್ ಪದಾಧಿಕಾರಿಗಳಿಗೆ ಬಿಟ್ಟಿದ್ದು.

ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು ಸಹ ಸಂಪೂರ್ಣ ಸಹಕಾರ ನೀಡುವ ಭರವಸೆಯಿದೆ. ಈ ಆಸ್ತಿಯ ಮಾಲೀಕತ್ವ ಅವರ ಇಲಾಖೆಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗ ಜ್ಞಾನೇಂದ್ರರವರು ವಿಶೇಷ ಒತ್ತು ನೀಡುವ ಅಗತ್ಯವಿದೆ.

ನಾನು ಹಲವಾರು ಭಾರಿ ಆಲದ ಮರದ ಪಾರ್ಕ್ ಗೆ ಭೇಟಿ ನೀಡಿದ್ದೇನೆ. ಭೇಟಿ ನೀಡಿದಾಗಲೆಲ್ಲಾ ಸ್ಮಾರ್ಟ್ ಸಿಟಿ ಎಂಡಿಯವರಾದ ಶ್ರೀ ರಂಗಸ್ವಾಮಿಯವರೊಂದಿಗೆ ಗಡುಸಿನ ಚರ್ಚೆ ನಡೆದಿದೆ.

 ‘ಈ ಸಲ ಭೇಟಿ ನೀಡಿದಾಗ ನನಗೆ ತೃಪ್ತಿ ಭಾವನೆ ಇತ್ತು. ಸಚಿವರು, ಸಂಸದರು, ಶಾಸಕರು ಜಿಲ್ಲಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಎಂಡಿಯವರ ನಿರ್ಣಯ ನನಗೆ ಖುಷಿ ತಂದಿದೆ.’

ಆಲದ ಮರದ ಪಾರ್ಕ್ ಅನ್ನು, ಇನ್ನೂ ಸ್ಮಾರ್ಟ್ ಮಾಡಬೇಕಿದೆ. ನಗರದ ಪರಿಸರ ಪ್ರೇಮಿಗಳು, ಅಭಿವೃದ್ಧಿ ಪರ ಚಿಂತಕರು, ಪರಿಣಿತರೊಂದಿಗೆ ಸಂವಾದ ನಡೆಸಿ, ಯಾವ ಯಾವ ಸೌಲಭ್ಯದ ಅಗತ್ಯವಿದೆ ಎಂಬ ಬಗ್ಗೆ  ಪ್ರಸ್ತಾವನೆ ಸಿದ್ಧಡಿಸುವಾಗ ಕೆಳಕಂಡ ಮೂರು ಅಂಶಗಳಿಗೆ ಒತ್ತು ನೀಡುವ ಅಗತ್ಯವಿದೆ. ಎಲ್ಲವೂ ಪಾರದರ್ಶಕವಾಗಿರಲಿ.

  1. ಅಗತ್ಯವಿರುವ ಮೂಲಭೂತ ಸೌಕರ್ಯ.
  2. ನಿರ್ವಹಣಾ ವೆಚ್ಚ.
  3. ನಿರ್ವಹಣಾ ವೆಚ್ಚಕ್ಕೆ ತಕ್ಕಂತಹ ಆದಾಯ ಮೂಲ.

ಆದರೇ ಯಾವುದೇ ಕಾರಣಕ್ಕೂ ಇಲ್ಲಿ ಎಣ್ಣೆ ಹೊಡೆಯುವುದು, ಬೀಡಿ, ಸಿಗರೇಟ್ ಸೇದುವುದು, ಇಸ್ಪೀಟ್ ಆಡುವುದು, ಗುಟ್ಕ ತಿಂದು ಉಗಿಯುವುದು, ಇಂಥಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹೊಣೆಗಾರಿಕೆ ಪ್ರೆಸ್ ಕ್ಲಬ್ ಪದಾಧಿಕಾರಿಗಳಿಗೆ ಸೇರಿದೆ.

 ‘ಸರ್ಕಾರವೇ ಅನುಮತಿ ನೀಡಿದೆ, ಅಗತ್ಯವಿದ್ದಲ್ಲಿ ಇವುಗಳನ್ನು ಬೇರೆ ಕಡೆ ಮಾಡಿಕೊಳ್ಳ ಬಹುದು. ಇದನ್ನು ಕೇಳಲು ನಾವ್ಯಾರು? ಇಲ್ಲಿ ಮಾತ್ರ ದಯವಿಟ್ಟು ಬೇಡ. ಕ್ಲಬ್ ಎಂಬ ಪದದ ಅರ್ಥ ಇವೆಲ್ಲಾ ಇರಲಿದೆ ಎಂಬ ಭಾವನೆ ಮೂಡುವುದು ಸಹಜ.

ಬರೀ ಆಲದ ಮರದ ಪಾರ್ಕ್ ಅಷ್ಟೆ ಅಲ್ಲ, ಇಡೀ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದ ಶುಚಿತ್ವ, ಹಸೀರೀಕರಣದ ಬಗ್ಗೆಯೂ ಗಮನ ಹರಿಸಿ ಎಂಬುದು ನನ್ನ ಅನಿಸಿಕೆ. ನಿರ್ಧಾರ ಅವರಿಗೆ ಬಿಟ್ಟಿದ್ದು.

ಬಹಳ ಹಿಂದೆ ಮಾಜಿ ಶಾಸಕರಾದ ಶ್ರೀ ಸೊಗಡು ಶಿವಣ್ಣನವರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾಗ ನನ್ನ ಮನವಿಯ ಮೇರೆಗೆ ಅಪ್ನಾಸ್ ಸಮಿತಿಗೆ ಶುಚಿತ್ವ ಮತ್ತು ಹಸೀರಕರಣ ಮಾಡಲು ಅನುಮತಿ ನೀಡಿದ್ದರು. ಆದರೆ ವಿವಿಧ ಕಾರಣಗಳಿಂದ ನನೆಗುದಿಗೆ ಬಿತ್ತು.