29th March 2024
Share

TUMAKURU: SHAKTHIPEETA FOUNDATION

 ತುಮಕೂರು ನಗರದಲ್ಲಿರುವ ಯಾವುದೇ ವಿಧವಾದ ಕಟ್ಟಡ ಮಾಲಿಕರೇ, ಎಚ್ಚರವಹಿಸಿ ನಿಮ್ಮ ಕಟ್ಟಡದ ಇತಿಹಾಸ ಸದ್ದು ಗದ್ಧಲವಿಲ್ಲದೆ, ಜಾತಕ ಸಹಿತ ಸಿದ್ಧವಾಗಿ ಪಾಲಿಕೆಯಲ್ಲಿ ಸಂಗ್ರಹವಾಗಿದೆ.

 ನೀವೂ ಜೋತಿಷ್ಯದವರ ಬಳಿ ಹೋಗಿ ಶಾಸ್ತ್ರ ಕೇಳಿದಾಗ ಹೇಳುವಂತೆ, ನಿಮ್ಮ ಕಟ್ಟಡದ ಶಾಸ್ತ್ರವನ್ನು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ನಿಮ್ಮ ಕಟ್ಟಡದ ವಿಸ್ಥೀರ್ಣ, ಒತ್ತುವರಿ ಮಾಡಿದ್ದಲ್ಲಿ ಎಷ್ಟು ಒತ್ತುವರಿ ಮಾಡಲಾಗಿದೆ, ಲೆಸೆನ್ಸ್ ಪಡೆದ ವಿಸ್ಥೀರ್ಣ, ಸೆಟ್‌ಬ್ಯಾಕ್ ಮಾಹಿತಿ, ಅನಧಿಕೃತವಾಗಿ ಎಷ್ಟು ವಿಸ್ಥೀರ್ಣದ ಕಟ್ಟಡ ನಿರ್ಮಾಣ ಮಾಡಿದ್ದೀರಿ, ವಾಣಿಜ್ಯ, ವಾಸ, ಕೈಗಾರಿಕೆ ಇತ್ಯಾದಿ ಬಗ್ಗೆ ಕರಾರುವಕ್ಕಾದ ಮಾಹಿತಿ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ.

 ನಿಯಮ ಪ್ರಕಾರ ನೀವು ಲೇಸೆನ್ಸ್ ಪಡೆದ ಜಾಗಕ್ಕಿಂತ ಹೆಚ್ಚಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲ, ಭಾಗವನ್ನು ಒಡೆದು ಹಾಕಬೇಕು, ನ್ಯಾಯಾಲಯದಲ್ಲಿ ಇದ್ದಲ್ಲಿ ಲೇಸೆನ್ಸ್ ಪಡೆದ ದಿನದಿಂದ ಅಥವಾ ಬಳಕೆ ದಿನದಿಂದ ಹೆಚ್ಚಿನ ಭಾಗದ ಕಟ್ಟಡಕ್ಕೆ ಎರಡುಪಟ್ಟು ದಂಡ ವಸೂಲಿ ಮಾಡಬೇಕು.

  ಯಾವುದೇ ಅನಧಿಕೃತ ಕಟ್ಟಡದ ನಿರ್ಮಾಣದಲ್ಲಿ ಮಾಲೀಕರಿಂದ, ಪಾಲಿಕೆ ಇಂಜಿನಿಯರ್‌ಗಳಿಂದ ಮತ್ತು ಪಾಲಿಕೆ ಸದಸ್ಯರು ಅಥವಾ ಇತರೆ ರಾಜಕಾರಣಿಗಳು ಸೇರಿದಂತೆ ಮೂರು ಜನರ ತಪ್ಪು ಇರುತ್ತದೆ, ಎಲ್ಲರೂ ಪಾಲುದಾರರೇ? ಜೀವನವೆಲ್ಲಾ ನೀವು ನಿಯಮ ಪಾಲಿಸಿಲ್ಲ ಎಂದು ನಿರಂತರವಾಗಿ ಕಪ್ಪಕಾಣಿಕೆ ವಸೂಲಿಯೂ ನಡೆಯುತ್ತಿದೆ. ಇನ್ನೂ ಎಷ್ಟು ದಿವಸ ನೀವೂ ಹೆದರಿ ಕುಳಿತುಕೊಳ್ಳಬೇಕು?

  ನಮ್ಮ ಕಾಯಿಲೆ ಗೊತ್ತಾಗಿದೆ, ಅದಕ್ಕೆ ತಕ್ಕ ಸರ್ಜರಿ ಮಾಡಿಸಲೇಬೇಕು. ಮುಚ್ಚಿಹಾಕಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಕಟ್ಟಡದ ದಾಖಲೆಯನ್ನು ಪಾಲಿಕೆಯ ದಾಖಲೆಗಳೊಂದಿಗೆ ತಾಳೆ ಹಾಕಿ ಪರಿಶೀಲಿಸಿಕೊಳ್ಳಿ. ವ್ಯತ್ಯಾಸವಿದ್ದಲ್ಲಿ ಸರಿಪಡಿಸಿಕೊಳ್ಳಿ, ತಪ್ಪಾಗಿದ್ದಲ್ಲಿ ನಾವಿಷ್ಟು ತಪ್ಪು ಮಾಡಿದ್ದೇವೆ ಎಂದು ಧೈರ್ಯವಾಗಿ ಹೇಳಿ, ಕಪ್ಪಕಾಣಿಕೆಯನ್ನು ಮಾತ್ರ ಯಾರಿಗೂ ಕೊಡಬೇಡಿ. ಅದು ಮುಗಿದು ಹೋದ ಅಧ್ಯಾಯ.

  ತುಮಕೂರಿನಲ್ಲಿ ಅಲ್ಲ ಇಡೀ ದೇಶದಲ್ಲಿಯೇ ಈ ರೀತಿ ಅನಧಿಕೃತ ವ್ಯವಹಾರ ಒಂದು ಮಾಫಿಯಾ ರೀತಿ ನಡೆದುಹೋಗಿದೆ. ಈಗ ತುಮಕೂರಿನ ಎಲ್ಲಾ ಕಟ್ಟಡಗಳ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಕಟ್ಟಡ ನಿರ್ಮಾಣ ಮಾಡಿದ ದಿವಸದಿಂದ ದಂಡ ಬೇಡ, ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡ ಒಡೆದುಹಾಕುವುದು ಬೇಡ, ನಿಯಾಮನುಸಾರ ಅಕ್ರಮ-ಸಕ್ರಮ ಮಾಡಿಕೊಡಿ, ಇಲ್ಲಿಂದ ಮುಂದೆ ತೆರಿಗೆ ಪಾವತಿಸಿಕೊಂಡು ಹೋಗುತ್ತೇವೆ ಎಂದು ತೆರಿಗೆದಾರರು ಹೇಳುತ್ತಾರೆ ಎಂದು ಪಾಲಿಕೆಯೇ ವರದಿ ಸಲ್ಲಿಸಲು ಚಿಂತನೆ ನಡೆದಿದೆಯಂತೆ.

  ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುಮತಿ ನೀಡುವವರೆಗೂ, ಪ್ರಸ್ತುತ ದಂಡವನ್ನು ಪಾಲಿಕೆ ವಸೂಲಿ ಮಾಡಬಾರದು, ಅವರ ಖಾತೆಯಲ್ಲಿ ಜಮಾ ಮಾಡುವುದು ನಿಯಮ. ಆದರೇ ಯಾರು ಹೆದರಬೇಕಿಲ್ಲ, ನಿಮ್ಮ ಅನಧಿಕೃತ ಕಟ್ಟಡವನ್ನು ಹಂತದಲ್ಲಿ ಯಾರು ಒಡೆದಹಾಕಲು ಸಾಧ್ಯವಿಲ್ಲ, ಸುಪ್ರೀಂ ಕೋರ್ಟ್ ಮುಂದೆ ಅಕ್ರಮ-ಸಕ್ರಮ ಮೊಕದ್ದಮೆಯೂ ಬಾಕಿ ಇದೆ.

  ನನ್ನ ಕಚೇರಿಯೂ ಸೇರಿದಂತೆ, ಇಂತಹ ಕಟ್ಟಡ ನಗರದಲ್ಲಿ ಶೇಕಡ ೯೫ ಕ್ಕೂ ಹೆಚ್ಚು ಇರುತ್ತದೆ. ಯಾರೋ ಪುಣ್ಯಾತ್ಮರು ಶೇಕಡ 100 ರಷ್ಟು ಸರಿಯಾಗಿ ನಿಯಮ ಪಾಲಿಸಿರಬಹುದು. ಈಗ ಇದಕ್ಕೆ ಇತಿ ಶ್ರೀಹಾಡಲೇ ಬೇಕು. ನಾವು ಕಳ್ಳರಲ್ಲ ನಿಯಮ ಗೊತ್ತಿಲ್ಲ, ಅಗಿದ್ದು ಆಗಿ ಹೋಗಿದೆ, ಇಡೀ ನಗರದಲ್ಲಿಯೇ ತಪ್ಪು ನಡೆದು ಹೋಗಿದೆ. 

  ಸರ್ಕಾರದ ಸಚಿವ ಸಂಪುಟದ ನಿರ್ಧಾರ ಬರುವವರೆಗೂ ಕಟ್ಟಡ ಒಡೆಯಬಾರದು ಅಥವಾ ಎರಡುಪಟ್ಟು ದಂಡ ವಸೂಲಿ ಮಾಡಬಾರದು ಎಂಬ ಬಗ್ಗೆ, ಹಾಲಿ ನಿಯಮಕ್ಕೆ ವಿರುದ್ಧವಾದರೂ ಪಾಲಿಕೆ ಮೊದಲು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲೇಬೇಕು, ಜನತೆಯ ಜೊತೆ ಚೆಲ್ಲಾಟ ಬೇಡ, ಇಲ್ಲಿಂದ ಮುಂದೆ ನಿಯಮ ಪ್ರಕಾರ ಕಟ್ಟಡಗಳು ನಿರ್ಮಾಣವಾಗಲಿ. ಪ್ರತಿ ಹಂತದಲ್ಲಿಯೂ ಅಧಿಕಾರಿಗಳು ಎಚ್ಚರದಿಂದ ಇರುವುದು ಸೂಕ್ತ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಒಂದು ಸ್ಪಷ್ಟ ನಿಲುವು ಘೋಶಿಸಬೇಕು.

ಜನತೆಯ ನೆಮ್ಮದಿಯೂ ಒಂದು ಸ್ಮಾರ್ಟ್ ಸಿಟಿಯಭಾಗ.