28th March 2024
Share

TUMAKURU : SAHKTHIPEETA FOUNDATION

  ತುಮಕೂರು ನಿಮ್ಜ್ ಮಂಜೂರಾದಾಗಲೆ ರೈತರ ಉತ್ಪನ್ನಗಳ ರಫ್ತು ಚಟುವಟಿಕೆಗಳಿಗೆ ಒಂದು ಏರ್ ಸ್ಟ್ರಿಪ್ ನಿಮ್ಜ್‌ನಲ್ಲಿ ಆಗಲಿದೆ ಎಂಬ ಕೂಗು ಎದ್ದಿತ್ತು.

ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‌ನಲ್ಲಿ ಹೆಲಿಕ್ಯಾಪ್ಟರ್ ಘಟಕ ಶಂಕುಸ್ಥಾಪನೆ ಆದಾಗಲೂ  ಅಲ್ಲಿಯೇ ಏರ್ ಪೋರ್ಟ್ ಆಗಲಿದೆ ಎಂಬ ಕೂಗು ಎದ್ದಿತ್ತು.

  ದಿನಾಂಕ:19.09.2019 ರಂದು ತುಮಕೂರು ಜಿಲ್ಲೆಯ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರ ಅಧ್ಯಕ್ಷತೆಯಲ್ಲಿ ನಡೆದಾಗ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಸ್ತಾಪ ಮಾಡುವ ಮೂಲಕ ಸಭೆ ನಡವಳಿಕೆಯಲ್ಲಿ ಏರ್‌ಪೋರ್ಟ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

  ತುಮಕೂರು ಜಿಲ್ಲಾ ದಿಶಾ ಸಮಿತಿಯು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ:28.02.2020 ರಂದು ನಡೆದಾಗಲೂ ಸಭೆ ನಡವಳಿಕೆಯಲ್ಲಿ ಏರ್‌ಪೋರ್ಟ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

  ಈ ಮೊದಲು ಡಾ.ಜಿ.ಪರಮೇಶ್ವರ್‌ರವರು, ಶ್ರೀ ಟಿ.ಬಿ.ಜಯಚಂದ್ರರವರು ಮತ್ತು ಶ್ರೀ ಎಸ್.ಪಿ.ಮುದ್ದಹನುಮೇಗೌಡರವರು ಏರ್‌ಪೋರ್ಟ್ ಅಗತ್ಯದ ಬಗ್ಗೆ ಮಾತನಾಡಿದ್ದರೂ ಎಲ್ಲಿಯೂ ದಾಖಲೆ ಆಗಿ ಯೋಜನೆಯ ಪ್ರಗತಿ ಕಂಡು ಬಂದಿಲ್ಲ. ಒಂದು ವೇಳೆ ಯಾವುದಾದರೂ ಮಾಹಿತಿ ಇದ್ದಲ್ಲಿ ನೀಡಿದರೇ ಅನೂಕೂಲವಾಗಲಿದೆ.

   ಪ್ರಸ್ತುತ ಜಿ.ಎಸ್.ಬಸವರಾಜ್ ರವರು ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್, ಮೂಲ ಸೌಲಭ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕಪಿಲ್ ಮೋಹನ್, ಕೆಐಎಡಿಬಿ ಸಿಇಓ ಶ್ರೀ ಬಸವರಾಜೇಂದ್ರರವರು, ಕೆಐಎಡಿಬಿ ಸ್ಪೆಷಲ್ ಡಿಸಿ ಶ್ರೀಮತಿ ಅನುರಾಧರವರು ಹೀಗೆ ಯೋಜನೆಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

   ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕೇಂದ್ರ ಸರ್ಕಾರದ ನಾಗರೀಕ ವಿಮಾನಯಾನ ಸಚಿವರಾದ ಶ್ರೀ ಹರ್‌ದೀಪ್.ಎಸ್. ಪುರಿರವರಿಗೆ, ಪತ್ರ ಬರೆಯುವ ಮೂಲಕ ಚಾಲನೆ ನೀಡಿದ್ದಾರೆ.

   ಈಗಾಗಲೇ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾಹಿತಿ ಸಂಗ್ರಹಿಸುವ ಮೂಲಕ ಎಲ್ಲಿ, ಹೇಗೆ, ಯಾವ ಮಟ್ಟದ,  ಏರ್‌ಪೋರ್ಟ್ ಮಾಡಬೇಕು ಎಂಬ ಚರ್ಚೆಯೂ ಆಗಿದೆಯಂತೆ.

 ಇದೇ ರೀತಿ ಯೋಜನಾ ಇಲಾಖೆಯೂ ತನ್ನ ವರದಿಯಲ್ಲಿ ನೂತನವಾಗಿ ರಾಜ್ಯದ 2 ನೇ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನ್ನು  ಮಾಡಲು ತುಮಕೂರು ಜಿಲ್ಲೆ ಸೂಕ್ತ ಎಂಬ ವರದಿ ನೀಡಿದೆ ಎಂಬ ಮಾಹಿತಿಯೂ ಇದೆ.

    ಜಿಲ್ಲೆಯ ಯಾವ ಭಾಗದಲ್ಲಿ ಏರ್‌ಪೋರ್ಟ್ ಮಾಡಬೇಕು. ಸುಮಾರು ಎಷ್ಟು ಎಕರೆ ಜಮೀನು ಬೇಕಾಗ ಬಹುದು. ಎಂಬ ಬಗ್ಗೆ ಪ್ರಾಥಮಿಕ ಹಂತದ ಅಧ್ಯಯನ ವಿವಿಧ ಇಲಾಖಾ ಮಟ್ಟದಲ್ಲಿ ಆರಂಭವಾಗಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಈ ಯೋಜನೆ ಜಾರಿಗೆ ಶ್ರಮಿಸಲು ಮುಂದಾಗಿದೆ. ಶ್ರೀ ಟಿ.ಆರ್.ರಘೋತ್ತಮರಾವ್ ಈವರೆಗೆ ತುಮಕೂರು ಏರ್‌ಪೋರ್ಟ್ ಬಗ್ಗೆ ನಡೆದಿರುವ ಪ್ರಾಥಮಿಕ ಹಂತದ ಮಾಹಿತಿಗಳ ಸಂಗ್ರಹಣೆ ಮಾಡುವತ್ತಾ ಸಾಗಿದ್ದಾರೆ.

   ತುಮಕೂರಿನ ಏ-1 ಸರ್ವೆ ಶ್ರೀ ರಾಜಶೇಖರ್‌ರವರು ಮತ್ತು ಸ್ಪೆಕ್ಟ್ರಾ ಅಸೋಶಿಯೇಷನ್‌ನ ಶ್ರೀ ಸತ್ಯಾನಂದ್‌ರವರು ನನ್ನ ಸಲಹೆಯ ಮೇರೆಗೆ ಜಿಲ್ಲೆಯಲ್ಲಿ ಎಲ್ಲಿ ಸರ್ಕಾರ ಜಾಗವಿದೆ ಎಂಬ ಹುಡುಕಾಟದ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಜಾಗದಲ್ಲಿ ಬಗರ್ ಹುಕುಂ ಸಾಗುವಳಿ ಇದ್ದೇ ಇರುತ್ತದೆ ಎಂಬ ಅರಿವು ಸಹ ಇದೆ.

   ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್ ಮತ್ತು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್ ರವರು ಸಭೆಯ ನಿರ್ಣಯಗಳ ಜಾರಿಗೆ ಮುಂದಾಗಿದ್ದಾರೆ.

  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್‌ರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸುವ ಕೆಲಸ ಆರಂಭಿಸಿದ್ದಾರೆ. ಹಿಂದಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಶಾಲಿನಿರವರು ಮೂಲ ಸೌಲಭ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕಪಿಲ್ ಮೋಹನ್‌ರವರಿಗೆ ಪತ್ರ ಬರೆಯುವ ಮೂಲಕ ಚಾಲನೆ ನೀಡಿದ್ದರು.

ಈ ಬಗ್ಗೆ ಮಾಹಿತಿಯಿದ್ದಲ್ಲಿ ನೀಡಲು ಮತ್ತು ತಮ್ಮ ಅಭಿಪ್ರಾಯಗಳಿಗಾಗಿ ಆಹ್ವಾನಿಸಲಾಗಿದೆ.