20th April 2024
Share

TUMAKURU:SHAKTHIPEETA FOUNDATION

ನನ್ನ ತಾಯಿ ದಿ.ಪಾರ್ವತಮ್ಮನವರು ಕೆಲವರ ಪಾಲಿಗೆ ಪ್ರೀತಿಯ ಪಾರು’ ಆಗಿದ್ದರು. ಅವರಿಗೆ ಚಿಕ್ಕವ್ವ, ಪಾರು ಎಂದು ಕರೆದರೆ ಬಹಳ ಪ್ರೀತಿ. ಸುಮಾರು 83 ವರ್ಷ ತನ್ನ ಜೀವನದ ರಥ ಸಾಗಿಸಿದವರು.

ನನ್ನ ತಂದೆ ದಿ.ಕೆ.ಎಸ್.ರಾಮಲಿಂಗಯ್ಯನವರು 2002 ರಲ್ಲಿಯೇ ನಮ್ಮನ್ನು ಅಗಲಿದ್ದರು. ದಿನಾಂಕ:14.04.2022 ರಂದು ನನ್ನ ತಾಯಿಯು ವಯೋಸಹಜ ಕಾಯಿಲೆಗಳಿಂದ ಲಿಂಗೈಕ್ಯರಾದರು.

ನನಗೆ ಬಹಳ ಅಟ್ಯಾಚ್ ಮೆಂಟ್ ನನ್ನ ತಾಯಿ ಜೊತೆಗೆ ಇತ್ತು. ಕಳೆದ ಒಂದು ವರ್ಷದಿಂದ ಮಾತ್ರ ತುಮಕೂರಿನಲ್ಲಿ ನನ್ನ ಜೊತೆಯಲ್ಲಿಯೇ ಇದ್ದರು. ಅಲ್ಲಿಯವರೆಗೂ ನಾನು ಎಷ್ಟೇ ಬೇಡಿಕೊಂಡರು ಕುಂದರನಹಳ್ಳಿಯಲ್ಲಿಯೇ ಮನೆಯಲ್ಲಿ ಒಬ್ಬರೇ ವಾಸವಿದ್ದವರು. ಶಿಸ್ತಿನ ಶಿಫಾಯಿ ನನ್ನ ತಾಯಿ’.

 ಒಂದು ವರ್ಷದಲ್ಲಿ ನನ್ನ ಅಕ್ಕಂದಿರ ಮನೆಗೆ ಒಂದೊಂದು ವಾರ ಹೋಗಿ ಇದ್ದು ಬಂದಿದ್ದರು. ಅವರ ತವರು ಮನೆಯಲ್ಲಿಯೂ ಒಂದು ವಾರ ತಂಗಿದ್ದರು.

ನಾನು ಮನೆಯಲ್ಲಿ ಇದ್ದ ಪ್ರತಿ ದಿವಸವೂ ರಾತ್ರಿ ನಮ್ಮಿಬ್ಬರ ಜೀವನದ ಮೆಲುಕು, ಅಜ್ಜಿಯ ಆಸೆ, ಕನಸುಗಳು, ಸಾಗಿಸಿದ ಜೀವನದ ಗತ ಕಾಲದ ನೆನಪುಗಳು  ನಿಜಕ್ಕೂ ಹಿಂದಿನ ಕಾಲದಲ್ಲಿ ಅಜ್ಜಿಯರು ಹೇಳುತ್ತಿದ್ದ ಕಥೆಯಂತೆ ಇತ್ತು.

ನನ್ನ ಅಕ್ಕಂದಿರಾದ ಶ್ರೀಮತಿ ಕೆ.ಆರ್.ಸರ್ವಮಂಗಳ, ಶ್ರಿಮತಿ ಕೆ.ಆರ್.ಭ್ರಮರಾಂಭಿಕ, ಮುಮ್ಮೊಕ್ಕಳು, ಮತ್ತು ಮರಿ ಮುಮ್ಮಕ್ಕಳನ್ನು ಕಂಡಿದ್ದ ಪಾರು ಹುಟ್ಟಿದಾಗ ಜೀವನದಲ್ಲಿ ಬಹಳಷ್ಟು ಕಷ್ಟ ಅನುಭವಿಸಿ, ಈಗ ಬಹಳ ನೆಮ್ಮದಿಯಿಂದ ಇತ್ತು.

‘ನನಗೆ ತಾಯಿ ಸೇವೆ ಮಾಡುವ ಅವಕಾಶ ಬಹಳ ನೆಮ್ಮದಿ ನೀಡಿದೆ. ಸೊಸೆಯ ಸೇವೆ ಕಂಡು ಅಜ್ಜಿಗೆ ಆನಂದವೇ ಅಗಿತ್ತು. ನನಗೆ ಆಗಾಗ ಹೇಳುತ್ತಿದ್ದರು, ನಾನು ಮೂಲೆಗೆ ಬಿದ್ದರೆ ಹೇಗೆ ಎಂಬ ಚಿಂತೆಯಿತ್ತು, ನೀವು ಮಾಡುತ್ತಿರುವ ಸೇವೆ ನೋಡಿದರೆ ನಾನೇ ಪುಣ್ಯವಂತಳು ಅಲ್ಲವಾ ಎಂದು ನಗುತ್ತಿತ್ತು

ಅವರು ನನ್ನ ಮೇಲೆ ಇಟ್ಟಿದ್ದ ವಾತ್ಸಲ್ಯ ನೋಡಿ ಹೆಣ್ಣು ಮಕ್ಕಳಿಗೂ ಅಸೂಯೇ ಬರುವಂತಿತ್ತು. ಜೀವನದ ಕೊನೆವರೆಗೂ ಅವರು ತೋರಿದ ಪ್ರೀತಿ, ನನ್ನ ಮೇಲೆ ಇಟ್ಟಿದ್ದ ಭರವಸೆ, ಅವರ ಅಪ್ಪ ದಿ.ಚಂದ್ರಹಳ್ಳಿ ರುದ್ರಣ್ಣನವರು ನನ್ನ ಬಗ್ಗೆ ಇವರ ಜೊತೆ ಮಾತನಾಡಿದ್ದನ್ನು ಅವರು ಹೇಳುತ್ತಿದ್ದರೆ ನನಗೆ ಕಣ್ಣೀರು ಬರುತ್ತಿತ್ತು.

 ಪಾರು ಇಲ್ಲದ ಜೀವನ ನನಗೆ ಬಹಳಷ್ಟು ನೋವು ತಂದಿದೆ. ತಾಯಿ ಶಕ್ತಿದೇವತೆಯ ಕಾಯಕ ನನ್ನ ನೋವಿಗೆ ವಿರಾಮ ಹಾಕಿಸ ಬಹುದೇನೋ ನೋಡೋಣ.

ಪವಿತ್ರ ವನ ಮತ್ತು ಅಡಿಕೆ ತೋಟ

ಅಜ್ಜಿಗೆ ಊರಿನ ಬಗ್ಗೆ ಮತ್ತು ಊರಿನ ಜನರ ಬಗ್ಗೆ ಬಹಳ ಆಸೆ ಇತ್ತು. ಅಂದು ಊರಿನ ಜನರು ಪಟ ಪಟನೆ ಎಲ್ಲಾ ಕಾರ್ಯಕ್ರಮವನ್ನು ನಡೆಸಿದ ರೀತಿ ಸಾಕ್ಷಿಯಾಯಿತು. ನನಗೆ ಸಂತೋಷ ತಂದಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅನುದಾನದಲ್ಲಿ 2000 ನೇ ಇಸವಿಯಲ್ಲಿ ಕುಂದರನಹಳ್ಳಿಯಲ್ಲಿ ನಿರ್ಮಾಣ ಮಾಡಿದ್ದ,  ಡಾ.ಶ್ರೀ,ಶ್ರೀ. ಶಿವಕುಮಾರ ಮಹಾ ಸ್ವಾಮಿಜಿಯವರ ತಪೋವನದಲ್ಲಿ ಇರುವ ತೆಂಗಿನ ಗಿಡಗಳಿಂದ ಪ್ರತಿ ವರ್ಷ ಊರಿಗೆ ಆದಾಯ ಬರುತ್ತಿದೆ.

ಇನ್ನೂ ಖಾಲಿ ಇರುವ ಸುಮಾರು ಒಂದು ಎಕರೆ ಜಮೀನಿನಲ್ಲಿ ಪಾರು ಊರಿನ ಮೇಲೆ ಇಟ್ಟಿದ್ದ  ನೆನಪಿಗಾಗಿ  ಅಡಿಕೆ ಗಿಡ ಮತ್ತು ಪವಿತ್ರ ವನ ಮಾಡಿಸುವ ಆಸೆಯಿದೆ. ಊರಿನ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದಾಯ ಬರುಂತಾಗಲಿ ಎಂಬ ಪರಿಕಲ್ಪನೆ ನನ್ನದು.

ತಪೋವನವನ್ನು ಸುಮಾರು 22 ವರ್ಷಗಳಿಂದ ನಿರ್ವಹಣೆ ಮಾಡುತ್ತಿರುವ ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ದಿನಾಂಕ:20.04.2022 ರಂದು ಸಭೆ ಸೇರಿ ಚರ್ಚೆ ನಡೆಸಿ ತೀರ್ಮಾನ ಹೇಳುವುದಾಗಿ ತಿಳಿಸಿದ್ದಾರೆ.

 ಈ ಟ್ರಸ್ಟ್ ನಲ್ಲಿ ಕುಂದರನಹಳ್ಳಿಯ ಪ್ರತಿ ಕುಟುಂಬದವರೂ ಇದ್ದಾರೆ. ಗ್ರಾಮದಲ್ಲಿರುವ ಒಂದೊಂದು ಮನೆತನದವರಲ್ಲಿ ಒಬ್ಬೊಬ್ಬರು ಟ್ರಸ್ಟಿಗಳಿದ್ದಾರೆ. ಇದೂವರೆಗೂ ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ಊರಿನ ಜನತೆ ಊರಿಗಾಗಿ ಒಂದು ತೋಟ ಮಾಡಿದ್ದಾರೆ ಎಂಬುದೇ ಒಂದು ವಿಶೇಷ. ಈ ವಿಚಾರದಲ್ಲಿ ದೇಶದ ಪ್ರತಿಯೊಂದು ಗ್ರಾಮದ ಜನತೆಗೆ ಟ್ರಸ್ಟ್ ಕಾರ್ಯ ಸ್ಪೂರ್ತಿಯಾಗ ಬೇಕು’.

ಯಾವುದಾದರೂ ಕಟ್ಟಡ ನಿರ್ಮಾಣ ಮಾಡೋಣ ಎಂದು ಖಾಲಿ ಜಾಗವನ್ನು ಉಳಿಸಿಕೊಂಡಿದ್ದೆವು, ಊರಿನ ಕೆಲವು ಕುಟುಂಬಗಳು ಊರಿನವರು ಜಾಗ ನೀಡಿದರೆ ಕಟ್ಟಡ ನಿರ್ಮಿಸಿ ಕೊಡುವುದಾಗಿ ಹೇಳಿದ್ದರಂತೆ, ಅವರನ್ನೂ ಕೇಳಿ ಕಟ್ಟಡ ನಿರ್ಮಾಣ ಮಾಡಿಸುವುದಾದರೆ ಮಾಡಿಸಲಿ ಎಂಬ ಬಗ್ಗೆಯೂ ಚರ್ಚೆ ನಡೆಯಿತು.

ದಿನಾಂಕ:08.05.2022 ನೇ ಭಾನುವಾರ  ಕುಂದರನಹಳ್ಳಿಯಲ್ಲಿ ‘ಪಾರು ಶಿಸ್ತು ಒಂದು ಘೋಷ್ಟಿ ನಡೆಯಲಿದೆ. ಅಂದು ಅಂತಿಮ ತೀರ್ಮಾನ ಆಗಬಹುದು.