28th March 2024
Share

TUMAKURU:SHAKTHIPEETA FOUNDATION

 ಇಂದಿನ ಆಧುನಿಕ ರಾಜಕಾರಣಿಗಳು ಮತ್ತು ಓಲೈಕೆ ಅಧಿಕಾರಿಗಳು ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು, ಒಂದು ಮೂಲಭೂತ ಹಕ್ಕು ಎಂಬಂತಾಗಿದೆ. ಇನ್ನು ಎಷ್ಟು ದಿವಸ ಈ ನಾಟಕ ಆಡುತ್ತೀರಿ, ಪ್ರವಾಹ ಬಂದಾಗ ಹರಿಯುವ ನೀರಿನ ಮುಂದೆ ನಿಂತು ಅಥವಾ ಸತ್ತ ಹೆಣದ ಮುಂದೆ ನಿಂತು ಮೊಸಳೆ ಕಣ್ಣೀರು ಸುರಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದವರು ಮತ್ತೆ ಮುಂದಿನ ವರ್ಷ ಪ್ರವಾಹ ಬಂದಾಗ ಈ ಸಮಸ್ಯೆ ಪುನಃ ನೆನಪಿಗೆ ಬರುವುದು ವಾಡಿಕೆಯಾಗಿದೆ.

ಎಲ್ಲಾ ಪಕ್ಷದ ಸರ್ಕಾರಗಳೂ ಮಾಡುವುದು ಇದನ್ನೆ, ಟೀಕೆ ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅವರ ಅವಧಿಯಲ್ಲಿಯಾದರೂ ಈ ನಾಟಕಕ್ಕೆ ತೆರೆ ಎಳೆದು ಒಂದು ಶಾಶ್ವತ ಪರಿಹಾರಕ್ಕೆ ಭಧ್ರಬುನಾದಿ ಹಾಕುವ ಕೆಲಸವನ್ನು ಆರಂಭ ಮಾಡುವರೇ ಎಂದು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ.

  ಪ್ರವಾಹದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹರಿಸುವ ಮಹತ್ತರವಾದ ರಾಜ್ಯದ ನದಿಜೋಡಣೆ ಯೋಜನೆ ಜಾರಿಗೊಳಿಸಿದಲ್ಲಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಿದಂತಾಗುತ್ತದೆ. ಪ್ರವಾಹಗಳಿಗೆ ಮೂಗುದಾರ ಹಾಕಬಹುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿರವರ ಕನಸಿನ ಯೋಜನೆಗೆ ಚಾಲನೆ ನೀಡಿಂತಾಗುತ್ತದೆ. ಕೇಂದ್ರದಲ್ಲೂ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದಾಗ ಮಾಡದೇ ಇನ್ನೂ ಯಾವಾಗ ಮಾಡುವುದು.

  ನೀರಿಲ್ಲ ಎಂದು ಕೆಲವೆಡೆ ಬೊಬ್ಬೆ, ನೀರು ಜಾಸ್ತಿ ಎಂದು ಕೆಲವೆಡೆ ಗೋಳು, ಮಧ್ಯದಲ್ಲಿ ಜನತೆಯ ಕಣ್ಣೀರು. ಪ್ರವಾಹ ಮತ್ತು ಚುನಾವಣಾ ಸಮಯದಲ್ಲಿ ಮಾತ್ರ ಎಲ್ಲಾ ಪಕ್ಷಗಳಿಂದಲೂ ಬಣ್ಣ ಬಣ್ಣದ ಪೊಳ್ಳು ಪ್ರಣಾಳಿಕೆ, ಇದಕ್ಕೆ ಇತಿ ಶ್ರೀ ಆಡುವರು ಯಾರು?

 ಈ ಅತಿವೃಷ್ಠಿ ಅಥವಾ ಅನಾವೃಷ್ಠಿ ಜಿಲ್ಲೆ ಜಿಲ್ಲೆಗೂ ವ್ಯತ್ಯಾಸವಿದೆ. ರಾಜ್ಯದ 30 ಜಿಲ್ಲೆಗಳಿಗೂ ಪ್ರತ್ಯೇಕ ವರದಿ ತಯಾರಿಸಿ ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಇಲ್ಲಿ ಬೇಕಾಗಿರುವುದು ಬದ್ಧತೆ, ತಾತ್ಕಾಲಿಕ ಪರಿಹಾರ ಅಥವಾ ಅನುಕಂಪದ ಮಾತುಗಳು ಶಾಶ್ವತವಾದ ಸಮಸ್ಯೆಗೆ ಉತ್ತರವಲ್ಲ. 

 30 ಜಿಲ್ಲೆಗಳಿಗೂ ವರದಿ ನೀಡಲು ಒಂದೊಂದು ಉನ್ನತ ಮಟ್ಟದ ಅಧ್ಯಯನ ಸಮಿತಿ ರಚಿಸಬೇಕು ಅಥವಾ ಒಂದೇ ಮಾದರಿ ಸಮಸ್ಯೆ ಇರುವ ಜಿಲ್ಲೆಗಳ ಕ್ಲಸ್ಟರ್ ಮಾಡಲು ಬಹುದು. ಆದರೇ ಇಡೀ ರಾಜ್ಯಕ್ಕೆ ಒಂದೇ ಸಮಿತಿ ರಚಿಸುವುದು ಸೂಕ್ತವಲ್ಲ. ವರದಿಗಳನ್ನು ಧೂಳು ತಿನ್ನಲು ಬಿಡದೆ ಅನುಷ್ಠಾನಕ್ಕೆ ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಧ್ಯಕರ್ತವ್ಯವಾಗಬೇಕು.

  ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಆಶೋಕ್‌ರವರು ಕೆಲವು ಜಿಲ್ಲೆಗಳಲ್ಲಿ ಶಾಶ್ವತವಾದ ಸಂತ್ರಸ್ಥ ಭವನಗಳನ್ನು ನಿರ್ಮಾಣ ಮಾಡುವುದಾಗಿ ಘೋಶಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ  ಈ ಕಟ್ಟಡಗಳು ಬಹುಪಯೋಗಿ ಕ್ಯಾಂಪಸ್ ಆಗಿರುವಂತೆ ನೋಡಿಕೊಳ್ಳುವುದು ಉತ್ತಮ.

 ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ್ಲೂ ಈ  ಬಹುಪಯೋಗಿ ಕ್ಯಾಂಪಸ್‌ಗೆ ಸುಮಾರು 50 ಎಕರೆ ಸರ್ಕಾರಿ ಜಮೀನು ನಿಗದಿಗೊಳಿಸಿ, ಆರ್ಥಿಕ ಸ್ಥಿತಿಗತಿ ಮತ್ತು ಅಗತ್ಯಕ್ಕೆ ತಕ್ಕಂತೆ ಕ್ಯಾಂಪಸ್ ನಿರ್ಮಿಸಲು ಕ್ರಮ ಕೈಗೊಂಡಲ್ಲಿ ಆಶೋಕ್‌ರವರ ಜೀವನದಲ್ಲಿ ಒಂದು ಸಾರ್ಥಕವಾಗುವಂತಹ ಉತ್ತಮ ಯೋಜನೆಯಾಗಲಿದೆ.