29th March 2024
Share

 ಅಧಿಕಾರ, ಹಣ ಅಂತಸ್ತು ಯಾರಿಗೂ ಶಾಶ್ವತವಲ್ಲ, ದಿನ ಬೆಳಗಾದರೆ ಬದಲಾವಣೆ ಜಗದ ನಿಯಮ. ಎಲ್ಲರೂ ಒಂದು ದಿವಸ ಸಾಯಲೇ ಬೇಕು. ಒಂದು ದಿವಸ ಅಧಿಕಾರ ತ್ಯಜಿಸಲೇ ಬೇಕು.

 ಕಳೆದ ಸರ್ಕಾರವನ್ನು ಬೀಳಿಸಿ ತಮಗಿದ್ದ ಅಧಿಕಾರವನ್ನು ತ್ಯಜಿಸಿ, ಪಕ್ಷಾಂತರ ಮಾಡಿದವರಿಗೆ ಅಂದು ಯಾರು, ಯಾವ ಆಶ್ವಾಸನೆ ಅಥವಾ ಮಾತು ನೀಡಿದ್ದರೋ ಅದನ್ನು ಶೇ 100 ರಷ್ಟು ಪಾಲಿಸಿಸುವುದು ರಾಜಕೀಯ ಧರ್ಮ.

  ಜೀವನದುದ್ದಕ್ಕೂ ಹೋರಾಟವನ್ನೇ ಬದುಕಾಗಿಸಿಕೊಂಡು ಬಂದಿರುವ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನರು ಯಾವುದೇ ಕಾರಣಕ್ಕೂ ಮಾತು ತಪ್ಪಬಾರದು, ವಚನ ಬ್ರಷ್ಠರಾಗಬಾರದು ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

  ಮಾನ್ಯ ಶ್ರೀ ಬಿ.ಎಲ್.ಸಂತೋಷ್ ರವರು ರಾಜ್ಯದ ಬಿಜೆಪಿ ಪಕ್ಷದ ರಾಜಕಾರಣದಲ್ಲಿ ಇತೀಚೆಗೆ ಸುದ್ದಿ ಮಾಡುತ್ತಿದ್ದಾರೆ. ಅವರು ಸಹ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಇದು ರೊಟ್ಟಿ ಮಗುಚಿ ಹಾಕಿದ ಕಾಲ, ಯಾವಾಗ ಯಾರಿಗೆ ಯಾವ ಅವಕಾಶ ಬರುತ್ತದೋ ಗೊತ್ತಾಗುವುದಿಲ್ಲ.

ಮಾತಿಗೆ ಒಮ್ಮೆ ತಪ್ಪಿದರೇ, ಮಾತು ಕೊಟ್ಟವರನ್ನು ಇಕ್ಕಟ್ಟಿಗೆ ಸಿಲುಕಿಸಿದರೆ, ನಿಜ ಸ್ಥಿತಿ ಗೊತ್ತಿದ್ದು ವಚನ ಭ್ರಷ್ಟರಾಗುವಾಗ ನೋಡುತ್ತಾ ಸುಮ್ಮನೆ ಇದ್ದರೇ ಅದು ಸಹ ತಪ್ಪೇ. ಅವರು ಸಹ ಪಾಲುದಾರರಾಗುತ್ತಾರೆ. ಇದು ನಾಳೆ ನಮಗೂ ತೊಂದರೆ ಆಗಲಿದೆ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. 

  ಬಿಎಸ್‌ವೈ ಸುತ್ತ-ಮುತ್ತ ಇರುವವರು ಸಹ ಒಟ್ಟಾಗಿ ಕುಳಿತು ಯೋಚನೆ ಮಾಡುವ ಕಾಲ ಇದು. ಮಾಧ್ಯಮಗಳಲ್ಲಿ ತ್ಯಾಗದ ಮಾತು ಆಡುವುದು ಬಿಟ್ಟು ಅಧಿಕಾರ ಅನುಭವಿಸುತ್ತಿರುವ ಎಲ್ಲರೂ ಮುಂದೆ ಬರಬಹುದಾದ ಅನಿವಾರ್ಯತೆ ಬಗ್ಗೆ ಚಿಂತನೆ ನಡೆಸಬೇಕೆನ್ನುವುದು ತ್ಯಾಗರಾಜರ ಅಭಿಮಾನಿಗಳ ಅಭಿಪ್ರಾಯ. 

  ಅನರ್ಹರು-ಅರ್ಹರು ಯಾವುದೇ ಕಾರಣಕ್ಕೂ ಛಿದ್ರವಾಗಬಾರದು. ಎಲ್ಲರೂ ಒಗ್ಗಟ್ಟಾಗಿಯೇ ಇರಬೇಕು, ಪಾಲಿಗೆ ಬಂದಿದ್ದು ಪಂಚಾಮೃತ, ತಾವೇ ಒಟ್ಟಾಗಿ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ. ಅವಕಾಶಗಳು ಏನೇ ಬರಲಿ, ಬರದಿರಲಿ ಒಗ್ಗಟ್ಟು ಮಾತ್ರ ಮುರಿಯಬಾರದು ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

ಶ್ರೀ ಮೋದಿಯವರ ಮತ್ತು ಶ್ರೀ ಅಮಿತ್‌ಷಾರವರ ಅಂತರಂಗ ಬಲ್ಲವರಿಲ್ಲವಂತೆ.

ಶ್ರೀಮತಿ ಸೋನಿಯಾರವರು ಮತ್ತು ಶ್ರೀ ರಾಹುಲ್‌ರವರು ಗಲಿಬಿಲಿಯಾಗಿದ್ದಾರಂತೆ.

ಶ್ರೀ ದೇವೆಗೌಡರವರು ಮತ್ತು ಶ್ರೀ ಕುಮಾರಸ್ವಾಮಿರವರು ಮಾಜಿ ಮುಖ್ಯ ಮಂತ್ರಿಯವರಾದ ಜೆ.ಹೆಚ್. ಪಟೇಲ್‌ರವರ ಭಾಷೆಯಂತೆ ಯಾವಾಗ ಬೀಳುತ್ತೇ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರಂತೆ.

ಶ್ರೀ ಬಿ.ಎಸ್.ವೈ ಅಭಿಮಾನಿಗಳಂತೂ ಕೊತ ಕೊತ ಕುದಿಯುತ್ತಿದ್ದಾರಂತೆ.

ಇದರ ಲಾಭ ನನಗೆ ವರದಾನವಾಗಬಹುದು ಎಂದು ಶ್ರೀ ಸಿದ್ಧರಾಮಯ್ಯನವರು ಒಳಗೊಳಗೆ ಕೇಕೇ ಹಾಕುತ್ತಿದ್ದಾರಂತೆ.