24th July 2024
Share
ನಾನು ಬರೆದಿರುವ ಎತ್ತಿನಹೊಳೆ- ತಪ್ಪು ತಿದ್ದಿಕೊಳ್ಳಿ ಪುಸ್ತಕದ ನಕ್ಷೆ.

TUMAKURU:SHAKTHIPEETA FOUNDATION

 ಈಗ ರೂಪಿಸಿರುವ ಎತ್ತಿನಹೊಳೆ ಯೋಜನೆ ನೀರಲ್ಲಿ ಬಹುತೇಕ ಯೋಜನೆಯ ನೀರನ್ನು ಸಮುದ್ರಮಟ್ಟದಿಂದ 9೦೦ ಮೀ ಎತ್ತರಕ್ಕೆ ಲಿಪ್ಟ್ ಮಾಡಲೇ ಬೇಕಿತ್ತು, ಅದರಲ್ಲಿ ಎರಡು ಮಾತಿಲ್ಲ. ನೊಡಿ ಇಲ್ಲಿ ಹಾಕಿರುವ ನಕ್ಷೆಯನ್ನು ಗಮನಿಸಿ 9೦೦ ಮೀ ಎತ್ತರದಿಂದ ಗುರುತ್ವಾಕರ್ಷಣೆ ಕಾಲುವೆಯಲ್ಲಿ ನೀರು ಹರಿಯುವ ಅವಕಾಶ ಇದ್ದಾಗ ಅನಗತ್ಯವಾಗಿ 965 ಮೀ ಎತ್ತರಕ್ಕೆ ಲಿಪ್ಟ್ ಮಾಡುವ ಹುಚ್ಚು ನಿರ್ಧಾರ ಏಕೆ ಬೇಕಿತ್ತು.

ಈಗ ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಈಗಾಗಲೇ ಆಗಿ ಹೋಗಿದೆ. ಆದರೇ ಈಗಲೂ ಅದೇ ತಪ್ಪು ಮಾಡಬೇಡಿ ಎಂಬ ನಮ್ಮ ಕಳಕಳಿಯ ಮನವಿ.

 ಈಗ ವಿಶ್ವೇಶ್ವರಯ್ಯ ಜಲನಿಗಮದಲ್ಲಿ ಇರುವ ಎಂ.ಡಿ. ಆಗಿರುವ ಶ್ರೀ ಲಕ್ಷ್ಮಣರಾವ್ ಪೇಶ್ವೆರವರು  ಆಗ ಕೆ.ಎನ್.ಎನ್.ಎಲ್ ನಲ್ಲಿಯೂ ಎಂ.ಡಿ ಆಗಿದ್ದರು. ನಾನು ಬರೆದ ಊರಿಗೊಂದು ಕೆರೆ- ಕೆರೆಗೆ ನದಿ ನೀರು’  ಯೋಜನೆಯ ಪುಸ್ತಕವನ್ನು ಅವರಿಗೆ ನೀಡಲು ಅವರ ಕಚೇರಿಗೆ ಹೋಗಿದ್ದೆ. ಅವರು ಕಚೇರಿಯಲ್ಲಿ ಇರಲಿಲ್ಲ. ಪುಸ್ತಕವನ್ನು ಅವರ ಪಿಎ ರವರಿಗೆ ನೀಡಿ ಬಂದಿದ್ದೆ.

 ಪುನಃ ನಾಳೆ ಜಿ.ಎಸ್.ಬಸವರಾಜ್‌ರವರು ಮತ್ತು ನಾನು ಅವರ ಕಚೇರಿಗೆ ಹೋಗಿ ಚರ್ಚೆ ಆರಂಭಿಸಲು ಶುರು ಮಾಡಿದಾಗ. ಅವರೇ ಎಲ್ಲಾ ವಿಚಾರ ಹೇಳಿ 900 ಮೀಟರ್‌ನಿಂದ ಕಾಲುವೆ ಮಾಡೋಣ, 965 ಮೀ ವರೆಗೆ ಲಿಪ್ಟ್ ಮಾಡುವುದು ಬೇಡ ಎಂದರು. ನನಗೆ ಆಶ್ಚರ್ಯವಾಯಿತು. ಏನ್ ಸಾರ್ ಹೀಗೆ ಹೇಳುತ್ತಿದ್ದೀರಿ ಎಂದಾಗ ನನ್ನ ಪುಸ್ತಕವನ್ನು ತೆಗೆದು ತೋರಿಸಿ ಪೂರ್ಣವಾಗಿ ಓದಿದ್ದೇನೆ, ನಿಮ್ಮ ಚಿಂತನೆ ಸರಿಯಾಗಿದೆ ಎಂದಿದ್ದರು. 

 ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್‌ರವರ ಸೂಚನೆ ಮೇರೆಗೆ ಚರ್ಚೆ ಮಾಡುವಾಗ ಆಗಿನ ಮುಖ್ಯ ಇಂಜಿನಿಯರ್ ಶ್ರೀ ಚಲುವರಾಜ್‌ರವರು ಸಹ ಕುಮಾರಧಾರ ನೀರಿನ ಯೋಜನೆ ರೂಪಿಸುವಾಗ ಕಾಲುವೆ ಮಾಡಿ 9೦೦ ಮೀ ಸರಿದೂಗುವ  ಎತ್ತಿನಹೊಳೆ ಕಾಲುವೆಗೆ ನೀರು ಹರಿಸೋಣ ಎಂದು ನನಗೆ ಮಾತು ನೀಡಿದ್ದರು.

ಆಗಿನ ಜಲಸಂಪನ್ಮೂಲ ಕಾರ್ಯದರ್ಶಿಯವರಾದ ಶ್ರೀ ಗುರುಪಾದಸ್ವಾಮಿಯವರು ಸಹ ನಮ್ಮ ಪ್ರಸ್ತಾವನೆಗೆ ಒಪ್ಪಿ ಖಂಡಿತ ಕುಮಾರಧಾರ ನೀರಿನ ಯೋಜನೆ ರೂಪಿಸುವಾಗ ಸರಿಪಡಿಸೋಣ  ಎಂದು ನನಗೆ ಮಾತು ನೀಡಿದ್ದರು.

ವಿಜೆಎನ್‌ನಲ್ಲಿ ಎಂ.ಡಿ ಯವರಾಗಿದ್ದ ಶ್ರೀ ಕೆ.ಜೈಪ್ರಕಾಶ್‌ರವರು ಸಹ ನಮ್ಮ ಪ್ರಸ್ತಾವನೆಗೆ ಒಪ್ಪಿ ಖಂಡಿತ ಕುಮಾರಧಾರ ನೀರಿನ ಯೋಜನೆ ರೂಪಿಸುವಾಗ ಸರಿಪಡಿಸೋಣ  ಎಂದಿದ್ದರು.

 ಇಐ ಟೆಕ್ನಾಲಜಿಯ ಎಂ.ಡಿ. ಯವರಾದ ಶ್ರೀ ಎನ್.ರಂಗನಾಥ್‌ರವರ ಬಳಿ ಇತ್ತೀಚೆಗೆ ಚರ್ಚೆ ಮಾಡಿದಾಗ ಖಂಡಿತ ಜಿ.ಎಸ್.ಪರಮಶಿವಯ್ಯನವರ, ಶ್ರೀ ಜಿ.ಎಸ್.ಬಸವರಾಜ್‌ರವರ ಮತ್ತು ನಿಮ್ಮ ಆಲೋಚನೆ ಸರಿಯಾಗಿದೆ. ನಾನು ಸಹ ಅಧ್ಯಯನ ಮಾಡಿದ್ದೇನೆ. ಆದರೇ ಆವಾಗ—– ಏನೋ ಆಯಿತು, ಈಗ ಸರಿಪಡಿಸೋಣ ಎಂದು ಹೇಳಿದ್ದರು.

 ಕುಮಾರಧಾರ ನೀರಿನ ಯೋಜನೆಯಿಂದ ಸುಮಾರು ೮ ಟಿಎಂಸಿ ಅಡಿ ನೀರು 9೦೦ ಮೀಟರ್‌ವರೆಗೆ ಗುರುತ್ವಾಕರ್ಷಣೆಯಿಂದ ಹರಿಯಲಿದೆ. ಎತ್ತಿನಹೊಳೆ ಯೋಜನೆಯ ಕಾಲುವೆಗೆ ಅರಸಿಕೆರೆ ಸಮೀಪ ಬಂದು ಸೇರಲಿದೆ. ಸುಮಾರು 8೦ ಕೀಮೀ ಹೊಸದಾಗಿ ಗುರುತ್ವಾಕರ್ಷಣೆ ಕಾಲುವೆ ಮಾಡಲೇ ಬೇಕಿದೆ. ಪುನಃ ಈ ನೀರನ್ನು 965 ಮೀಟರ್‌ವರೆಗೆ ಲಿಪ್ಟ್ ಮಾಡಿ ಹರವನಹಳ್ಳಿವರೆಗೆ ಹಾಕುವುದು ಹುಚ್ಚುತನ.

  ಕೇಂದ್ರ ಸರ್ಕಾರ ರೂಪಿಸುತ್ತಿರುವ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ನೇರವಾಗಿ ನೀರು ಕೊಡುವುದಿಲ್ಲ. ಬದಲಿಗೆ ಕಾವೇರಿಯಿಂದ ತಮಿಳು ನಾಡಿಗೆ ಬಿಡುವ ನೀರಿನಲ್ಲಿ ಮತ್ತು ಕೃಷ್ಣಾದಿಂದ ಆಂಧ್ರ ಮತ್ತು ಇತರ ರಾಜ್ಯಗಳಿಗೆ ಬಿಡುವ ನೀರಿನಲ್ಲಿ ಕಡಿಮೆ ಮಾಡಿ ನಮಗೆ ಅಷ್ಟೆ ಪ್ರಮಾಣದ ನೀರು ಕೊಡುವ ಆಲೋಚನೆ ಇದೆ.  

 ಆಗ ಎತ್ತರದಲ್ಲಿರುವ ಅಂದರೆ 900 ಮೀ ಎತ್ತರದಿಂದ ಹೇಮಾವತಿ ನೀರನ್ನು ಇದೇ ಗುರುತ್ವಾಕರ್ಷಣೆ ಕಾಲುವೆಯ ಮೂಲಕ ಹರಿಸಬಹುದಾಗಿದೆ. ಈಗಲೂ ಸುಮಾರು 15 ರಿಂದ 8೦ ಟಿ.ಎಂ.ಸಿ ಅಡಿ ನೀರು ಹೇಮಾವತಿಯ ಪ್ರವಾಹ ಸಂದರ್ಭದಲ್ಲಿ  ಹರಿದು ಸಮುದ್ರ ಸೇರಲಿದೆ. ನೀರು ಕಡಿಮೆ ಆಗಿರುವ ವರ್ಷಗಳು ಅತಿ ಕಡಿಮೆ. ತೀವೃ ಬರಗಾಲವಿದ್ದಾಗ ಮಾತ್ರ.

 ಇದೇ ಕಾರಣಕ್ಕೆ ಶ್ರೀ ಗುರುಪಾದಸ್ವಾಮಿರವರು 15 ಟಿಎಂಸಿ ಅಡಿ ನೀರಿನ ಹೇಮಾವತಿ ಫ್ಲಡ್ ಪ್ಲೋ ಕೆನಾಲ್ ಯೋಜನೆ ರೂಪಿಸಿದ್ದರು. ಅಷ್ಟೆ ಅಲ್ಲ ಸುಮಾರು 1೦೦೦೦ ಕ್ಯುಸೆಕ್ಸ್ ನೀರಿನ ಸಾಮಾರ್ಥ್ಯದ ಕಾಲುವೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಒಂದು ವೇಳೆ ಅದು ಆಗಿದ್ದರೆ ಈ ಎತ್ತಿನಹೊಳೆ ನೀರನ್ನು ಪ್ರತಿ ವರ್ಷ 9೦೦ ಮೀ ಎತ್ತರದಿಂದ 965 ಮೀಟರ್ ಎತ್ತರದವರೆಗೆ ಲಿಪ್ಟ್ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಶ್ರೀ ಹೆಚ್.ಬಿ.ಮಲ್ಲೇಶ್‌ರವರು ಮತ್ತು ಅವರ ತಂಡ ಈ ಯೋಜನೆ ರೂಪಿಸಿದ್ದರು.

ಈ ಎಲ್ಲಾ ಕಾರಣದಿಂದ ಪ್ರಸ್ತುತ ಕುಮಾರಧಾರ ಯೋಜನೆ ರೂಪಿಸುತ್ತಿರುವ ಈ ಸಂದರ್ಭದಲ್ಲಿ ಅದೇ ತಪ್ಪು ಮಾಡ ಬೇಡಿ ಎಂಬ ಕೂಗು ಈಗ ಆರಂಭವಾಗಿದೆ.