![](https://epaper.shakthipeeta.in/wp-content/uploads/2020/11/Capture-2.png)
TUMAKURU:SHAKTHIPEETA FOUNDATION
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು 2023 ರೊಳಗೆ ದೇಶದ ಪ್ರತಿಯೊಂದು ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ನಲ್ಲಿ ಹಾಕಿ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆ ಘೋಶಿಸಿದ್ದಾರೆ.
ನಮ್ಮ ರಾಜ್ಯ ಸರ್ಕಾರ 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣಗಳ ಮತ್ತು 6657 ಗ್ರಾಮಗಳ ಸುಮಾರು 75 ಲಕ್ಷ ಜನರಿಗೆ ಕುಡಿಯುವ ನೀರನ್ನು ಎತ್ತಿನಹೊಳೆಯಿಂದ 2023-24 ರ ಅವಧಿಯ ಜನಸಂಖ್ಯೆಗೆ ಅನುಗುಣವಾಗಿ ನೀಡಲು ಯೋಜನೆ ರೂಪಿಸಿದೆ.
ಜೊತೆಗೆ ಬೆಂಗಳೂರು ನಗರಕ್ಕೂ ನೀರು ನೀಡಲಿದೆ. ಅಲ್ಲದೆ 527 ಕೆರೆಗಳಿಗೂ ಶೇ 50 ರಷ್ಟು ನೀರು ತುಂಬಿಸಿ ಅಂತರ್ಜಲ ಅಭಿವೃದ್ಧಿ ಮಾಡಲಾಗುವುದು ಎಂದು ವರದಿಯಲ್ಲಿದೆ.
ಮುಂದೆ ಸುಮಾರು 2 ಕೋಟಿ ಜನರಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವ ಯೋಜನೆ ಇದಾಗಲಿದೆ. ಕೇಂದ್ರ ಸರ್ಕಾರಕ್ಕಿಂತ ಮೊದಲೇ ರಾಜ್ಯದ 1/3 ಭಾಗದ ಜನರಿಗೆ ಕುಡಿಯುವ ನೀರಿನ ಯೋಜನೆ ಇದಾಗಿದೆ. 2014 ರ ಪ್ರಕಾರ ರೂ 12912.36 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ. ಯೋಜನೆ ಮುಗಿಯುವ ವೇಳೆಗೆ ಎಷ್ಟು ವೆಚ್ಚವಾಗಲಿದೆ ಎಂಬುದು ದೇವರಿಗೆ ಗೊತ್ತು.
ಸರ್ಕಾರ ಈಗ ನೀಡುತ್ತಿರುವ ಅನುದಾನದಂತೆ ನೀಡಿದರೆ ಈ ಯೋಜನೆ ಪೂರ್ಣಗೊಳ್ಳುವ ವೇಳೆಗೆ 2 ಪಟ್ಟದಾರೂ ಸಾಲದು ಎಂಬ ಒಂದು ಅಂದಾಜಿದೆ. ಅಷ್ಟೇ ಪ್ರಮಾಣದಲ್ಲಿ ಜನಸಂಖ್ಯೆಯೂ ಹೆಚ್ಚಳವಾಗುವುದು. ಚಿಕ್ಕಬಳ್ಳಾಪುರದ ಶ್ರೀ ಆಂಜನೇಯ ರೆಡ್ಡಿರವರು, ಶ್ರೀ ಚೌಡಪ್ಪನವರು ಹೇಳುವ ಪ್ರಕಾರ ಈ ಯೋಜನೆಯಿಂದ ಎಲ್ಲರಿಗೂ ದೇವಾಸ್ಥಾನದಲ್ಲಿ ತೀರ್ಥ ನೀಡುವ ಹಾಗೆ ನೀಡಬಹುದಷ್ಟೆ.
ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣ ಅಗುತ್ತಿದೆ. ಈಗ ಕುಮಾರಧಾರ ಯೋಜನೆ ರೂಪಿಸಿ, ಆರಂಭದಿಂದ ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣ ಮಾಡಿ ಇದೇ ಎತ್ತಿನಹೊಳೆ ಕಾಲುವೆಗೆ ನೀರು ಹರಿಸುವುದು. ಹಾಗೂ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಯಾವ ಕೆರೆಯಿಂದ ನೀರು ನೀಡಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ. ಬೇಸಿಗೆಯಲ್ಲಿ ಇದೇ ಕಾಲುವೆಗೆ ಶರಾವತಿ ನೀರು ಹರಿಸಿ, ಈ ಎಲ್ಲಾ ಸಂಯುಕ್ತ ಯೋಜನೆಯನ್ನು ’ಜಲಜೀವನ್ ಮಿಷನ್ ಗ್ರಿಡ್’ ಯೋಜನೆ ಎಂದು ಘೋಶಿಸಿ ಕೇಂದ್ರ ಸರ್ಕಾರ ಅನುದಾನ ನೀಡುವುದು ಅಗತ್ಯವಾಗಿದೆ.
![](https://epaper.shakthipeeta.in/wp-content/uploads/2020/11/SIDDARAMAIAH.png)
‘ಇಲ್ಲದೆ ಇದ್ದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು ಆಗಾಗ ಹೇಳುವ ಹಾಗೆ ಮೋದಿಯವರು ಯೋಜನೆ ಘೋಶಿಸುತ್ತಾರೆ, ಪಾಪ ಯಡಿಯೂರಪ್ಪ ದುಡ್ಡು ಇಲ್ಲದೆ ಏನು ಮಾಡಕಾಗುತ್ತೇ? ಎಂದು ಅಣಕಿಸುವ ರೀತಿ ಸರಿಯೇನೋ ಎಂಬಂತಾಗುತ್ತದೆ’
’ನಜೀರ್ಸಾಬ್ರವರು ಬೋರ್ವೆಲ್ ಕೊರೆಸುವುದನ್ನು ತೋರಿಸಿದ ನಂತರ ಇಡೀ ಭೂಮಿಯನ್ನು ಜನರು ಬರಡು ಮಾಡಿದ್ದಾರೆ. ಬೋರ್ವೆಲ್ ಬಕಾಸುರರ ಹಾವಳಿಯಿಂದ ಹರಿಯುವ ನೀರನ್ನು ತಡೆಯಿರಿ, ತಡೆದ ನೀರನ್ನು ಹಿಂಗಿಸಿ ಎಂಬ ಘೋಷಣೆಗೆ ಅರ್ಥವೇ ಇಲ್ಲದಂತಾಗಿದೆ. ನಿಂತ ನೀರನ್ನು ಒಂದೆರಡು ದಿವಸದಲ್ಲೇ ಬೋರ್ ವೆಲ್ಗಳು ಜಿಗಣೆಯಂತೆ ಹೀರಿ ಹಾಕುತ್ತಿವೆ’
ನದಿ ನೀರು ತರದೆ ಜಲಜೀವನ್ ಮಿಷನ್ ನಮ್ಮ ರಾಜ್ಯದಲ್ಲಿ ಸಾಧ್ಯವೇ ಇಲ್ಲ ಎಂಬ ಕಟುಸತ್ಯವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲೇ ಬೇಕು. ಆದಷ್ಟು ಅನುದಾನ ನೀಡಿ, ಇನ್ನಷ್ಟು ಬಡ್ಡಿ ರಹಿತ ಸಾಲವನ್ನಾದರೂ ನೀಡಿ ಎಂಬ ಮನವಿ ಮಾಡಲೇ ಬೇಕು.
ಅಧಿಕಾರಿಗಳು ಸರಿಯಾದ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮನೆ-ಮನೆಗೆ ಗಂಗೆ ನೀಡಲು ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ’ರುದ್ರಾವತಾರ’ ತಾಳಲೇ ಬೇಕು ಎಂದು ನನಗನಿಸುತ್ತಿದೆ.
ಮೋದಿಯವರ ಕನಸು ನನಸಾಗ ಬೇಕಾದರೆ, ಬಿಜೆಪಿಯ ಅಗ್ರಗಣ್ಯ ನಾಯಕರಾದ ಶ್ರೀ ಬಿ.ಎಲ್.ಸಂತೋಷರವರು ಈ ವಿಚಾರದಲ್ಲಿ ಒಂದು ಚಮತ್ಕಾರ ಮಾಡುವರೇ ಕಾದು ನೋಡಬೇಕು. ಪಕ್ಷಬೇಧ ಮರೆತು ಎಲ್ಲಾ ಸಂಸದರು ಕೈಜೋಡಿಸಬೇಕು. ಇಲ್ಲದೇ ಇದ್ದಲ್ಲಿ ‘ಜಲಜೀವನ್ ಮಿಷನ್ ಘೋಷಣೆಗೆ ಸೀಮೀತವಾಗಲಿದೆ’
![](https://epaper.shakthipeeta.in/wp-content/uploads/2020/11/BOOK-PAGE-scaled.jpg)