29th March 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮುಖ್ಯ ಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿರವರ ಅಧ್ಯಕ್ಷತೆಯಲ್ಲಿ ದಿನಾಂಕ: 01.03.2014 ರಂದು ನಡೆದ ಸಭೆಗೆ ಬಹುತೇಕ ಎಲ್ಲಾ ಇಲಾಖೆಗಳು ಸಹಮತ ವ್ಯಕ್ತಪಡಿಸಲು ದಾಖಲೆ ಸಹಿತ ಸಿದ್ಧವಾಗಿ ಸಭೆಗೆ ಹಾಜರಾಗಿದ್ದರಂತೆ.

  ಸಭೆಗೆ ಮುನ್ನ ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಎಸ್.ಸತ್ಯಮೂರ್ತಿರವರನ್ನು ಒಮ್ಮೆ ಮಾತನಾಡಿಸ ಬೇಕು ಎಂಬ ಮನಸ್ಸು ಬಂತು. ಆದರೇ ನೀವು ಡಿಸಿಯಾಗಿ ಇರುವವರೆಗೂ ನಿಮ್ಮ ಛೇಂಬರ್ ಒಳಗೆ ಕಾಲಿಡುವುದಿಲ್ಲಾ ಎಂದು ಹೇಳಿ ಬಂದಿದ್ದೆ.

 ವಿಕಾಸ ಸೌಧದಲ್ಲಿ ನಡೆಯುವ ಸಭೆಗೆ ಮುಂಚೆ ಮಾತನಾಡಿಸಲು ತೀರ್ಮಾನಿಸಿ ಹೋದೆ. ನಾನು ಹೋಗುವ ವೇಳೆಗೆ ಸಭಾಂಗಣದ ಒಳಗೆ ಕುಳಿತಿದ್ದರು. ನಾನು ಎರಡು ಭಾರಿ ಬಾಗಿಲಿನಿಂದ ಕೈ ಬೀಸಿ ಕರೆದೆ. ಅವರಿಗೂ ಆಶ್ಚರ್ಯ ಆಗಿರಬೇಕು, ಫೋನ್‌ನಲ್ಲಿ  ಮಾತನಾಡುತ್ತಾ ಹೊರಗಡೆ ಬಂದರು, ನಾನು ಕರೆದೆ ಅಂತ ಬಂದರೋ ಅಥವಾ ಫೋನ್‌ನಲ್ಲಿ ಮಾತನಾಡಲೂ ಬಂದರೋ ನನಗೆ ಗೊತ್ತಿಲ್ಲ.

 ತಕ್ಷಣ ಅವರ ಬಳಿಹೋಗಿ ನೋಡಿ ಸಾರ್ ಇವತ್ತು ನೀವು ಡಿಸಿಯಾಗಿದ್ದೀರಿ, ನಾಳೆ ನಾನೂ ಇರಲ್ಲ, ನೀವೂ ಇರಲ್ಲ ಎಲ್ಲಾ ಒಂದು ದಿವಸ ಸಾಯುತ್ತೇವೆ. ತೊಂದರೆ ಕೊಡಬೇಡಿ ಅದರ ಮೇಲೆ ನಿಮ್ಮಿಷ್ಟ ಎಂದು ಹೇಳಿದೆ. ಊ ಆಯಿತು ಎಂದು ಹೇಳಿ ಒಳಗೆ ಹೋದರು.

 ಸಭೆ ಆರಂಭದಲ್ಲಿಯೇ ಕೌಶಿಕ್ ಮುಖರ್ಜಿರವರ ಖಡಕ್ ಮಾತು, ನನಗೆ ರಾಜ್ಯ ಮುಖ್ಯ ಜಿಲ್ಲೆ, ಜಿಲ್ಲೆಗಳ ರಾಜಕೀಯ ನನಗೆ ಬೇಕಾಗಿಲ್ಲ. ಮೂರು ಮಾತಿನಲ್ಲಿ ಸಭೆ ಮುಗಿಯಬೇಕು ಎಂದು ಹೇಳಿದರಂತೆ.

ಮುಖ್ಯ ಕಾರ್ಯದರ್ಶಿ:- ಹೆಚ್.ಎ.ಎಲ್ ನವರಿಗೆ ನಿಮಗೆ ಯಾವ ಜಾಗಬೇಕು.

ಹೆಚ್.ಎ.ಎಲ್ ಪ್ರತಿನಿಧಿ:- ನಮಗೆ ಗುಬ್ಬಿ ಜಾಗ ಓಕೆ ಸಾರ್.

ಮುಖ್ಯ ಕಾರ್ಯದರ್ಶಿ:- ಜಿಲ್ಲಾಧಿಕಾರಿಗಳೇ ಜಮೀನು ನೀಡಬಹುದಾ?

ಜಿಲ್ಲಾಧಿಕಾರಿ:- ಹೌದು ಸಾರ್ ದಾಖಲೆ ರೆಡಿಯಿದೆ.

ಮುಖ್ಯ ಕಾರ್ಯದರ್ಶಿ:- ಜಲಸಂಪನ್ಮೂಲ ಅಧಿಕಾರಿಗಳಿಗೆ ನೀರು ಕೊಡ ಬಹುದಾ?

ಜಲಸಂಪನ್ಮೂಲ ಕಾರ್ಯದರ್ಶಿ:- ಹೇಮಾವತಿ ನೀರು ನೀಡುತ್ತೇವೆ ಸಾರ್.

ಮುಖ್ಯ ಕಾರ್ಯದರ್ಶಿ:- ಇಂಧನ ಇಲಾಖೆ ಅಧಿಕಾರಿಗಳಿಗೆ ವಿದ್ಯುತ್ ನೀಡಬಹುದಾ? ಹೆಚ್.ಟಿ.ಲೈನ್ ಶಿಪ್ಟ್ ಮಾಡಬಹುದಾ?

ಇಂಧನ ಇಲಾಖೆ ಅಧಿಕಾರಿಗಳು:- ಮಾಡ ಬಹುದು ಸಾರ್.

ಮುಖ್ಯ ಕಾರ್ಯದರ್ಶಿ:- ಹೆಚ್.ಎ.ಎಲ್ ನವರಿಗೆ ಬೇರೆ ಏನಾದರೂ ಇದೆಯಾ?

ಹೆಚ್.ಎ.ಎಲ್ ಪ್ರತಿನಿಧಿ:- ಹಿಂದೆ ಎಕರೆಗೆ ಒಂದು ರುಪಾಯಿಗೆ ಜಾಗ ನೀಡಲು ಪತ್ರ ಬರೆಯಲಾಗಿತ್ತು ಸಾರ್.

ಮುಖ್ಯ ಕಾರ್ಯದರ್ಶಿ:- ತಕ್ಷಣ ದೆಹಲಿಯ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ, ಒಂದು ಎಕರೆಗೆ ಹತ್ತು ಸಾವಿರ ರೂ ನೀಡುತ್ತಿರೋ ಅಥವಾ ಒಂದು ಲಕ್ಷ ರೂ ನೀಡುತ್ತಿರೋ ಎಂದು ಕೇಳಿದರಂತೆ. ನಂತರ ಅವರೇ ಒಂದು ಲಕ್ಷ ನೀಡಲು ಒಪ್ಪಿದ್ದಾರೆ ಎಂದರಂತೆ.

ಮುಖ್ಯ ಕಾರ್ಯದರ್ಶಿ:- ಉದ್ಯೋಗ ಮಿತ್ರ ಅಧಿಕಾರಿಗಳಿಗೆ ಮಾತನಾಡಿ ನಾಳೆ ಮೂರನೇ ತಾರೀಖು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ವಿಚಾರ ಮಂಡಿಸಿ, ಎಲ್ಲಾ ಇಲಾಖೆ ಅಧಿಕಾರಿಗಳು ನಿರ್ಧಿಷ್ಟ ದಾಖಲೆ ಸಹಿತ ಬನ್ನಿ ಎಂದು ಹೇಳಿದರಂತೆ.

ಸಭೆಯಲ್ಲಿದ್ದವರು ಹೊರಗಡೆ ಬಂದು ಹೇಳಿದ ರೀತಿ ಇದು. ದೇವಿಯ ಕೃಪೆ ಸಾರ್ ಎಂದು ಅವರ ಕಚೇರಿಯಲ್ಲಿ ಕಾಫಿ ಕುಡಿದು ಹೊರಟೆ. ಡಿಸಿಯವರಿಗೆ ಮೆಸೆಜ್ ಮಾಡಿದೆ, ಅವರು ಓಕೆ ಎಂದು ಕಳುಹಿಸಿದರು ಥ್ಯಾಂಕ್ಸ್ ಹೇಳಿದೆ. ಇದು ಒಂದು ಮೈಲಿಗಲ್ಲಾಯಿತು.