29th March 2024
Share

    TUMAKURU:SHAKTHIPEETA FOUNDATION

ಬಿದರೆಹಳ್ಳ ಅಮೃತ್ ಮಹಲ್ ಕಾವಲ್‌ಗೆ ಕೇಂದ್ರ ಸರ್ಕಾರ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸುವ ಘಟಕ ಮಂಜೂರಾದ ಇತಿಹಾಸವನ್ನು ಇಂಚಿಂಚಾಗಿ ದಾಖಲೆ ಮಾಡಲು ಬಯಸಿದ್ದೇನೆ. ಇನ್ನೂ ಹೆಚ್ಚಿನ ಮಾಹಿತಿಯಿದ್ದರೆ ತಿಳಿಸಲು ಮನವಿ ಮಾಡಿದ್ದೇನೆ.

   ರಾಜ್ಯದ ರಾಜಧಾನಿ ಬೆಂಗಳೂರಿನಿಂದ  102 ಕಿ.ಮೀ, ತುಮಕೂರಿನಿಂದ  32  ಕಿ.ಮೀ. ದೂರದಲ್ಲಿ ತುಮಕೂರಿನಿಂದ  ತಿಪಟೂರಿಗೆ  ಹೋಗುವ ರಾಷ್ಟ್ರೀಯ ಹೆದ್ಧಾರಿ-206  ರಲ್ಲಿನ ಸಾಗರನಹಳ್ಳಿ ಗೇಟ್‌ನಿಂದ, ಕುಂದರನಹಳ್ಳಿ, ಸೋಪನಹಳ್ಳಿ, ತಿಮ್ಮಳೀಪಾಳ್ಯ ಮತ್ತು ಯಲ್ಲಾಪುರದ ಗೇಟ್‌ವರೆಗೆ ಸುಮಾರು 2 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 150  ಮೀ ದೂರದಲ್ಲಿರುವ  ವಿಶಾಲವಾದ ಅಮೃತ ಮಹಲ್ ಕಾವಲ್‌ಗೆ  ಜಿಲ್ಲೆಯಲ್ಲಿನ ವಿವಿಧ ಭಾಗಗಳಿಂದ ವಲಸೆ ಬಂದು ಗುಡಿಸಲುಗಳನ್ನು ಹಾಕಿಕೊಂಡು ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿದ್ದ ಪ್ರದೇಶಕ್ಕೆ ಗುಡ್ಲು’ ಎಂದು ಕರೆಯುತ್ತಿದ್ದರು.

  ಭಾರತ ದೇಶದ, ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ನಿಟ್ಟೂರು ಹೋಬಳಿ ಕುಂದರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಿದರೆಹಳ್ಳ ಅಮೃತ್ ಮಹಲ್ ಕಾವಲ್ ಸರ್ವೆ ನಂ 1  ರಲ್ಲಿನ ಜಮೀನಿನ ಮಾಹಿತಿ 

  • ಒಟ್ಟು ವಿಸ್ತೀರ್ಣ 2487 ಎಕರೆ 17 ಗುಂಟೆ.   
  • ಹಿಂದೆ ಧರಖಾಸ್ತು ಮೂಲಕ ಹಂಚಿರುವ (ಕಾರೇಹಳ್ಳಿ- ಅಮ್ಮನಹಳ್ಳಿ ಕಡೆ) ಜಮೀನು 370 ಎಕರೆ 35 ಗುಂಟೆ. 
  • ಅರಣ್ಯ ಇಲಾಖೆಗೆ ವರ್ಗಾವಣೆಯಾದ ಜಮೀನು 1186 ಎಕರೆ   28 ಗುಂಟೆ. 
  • 1956 ರಲ್ಲಿ ಕಂದಾಯ ಇಲಾಖೆಗೆ ವರ್ಗಾವಣೆಯಾಗಿರುವ ಜಮೀನು 929  ಎಕರೆ 34 ಗುಂಟೆ.  

  ನಾನು ಮತ್ತು ನನ್ನ ಸಂಗಡಿಗರು ರಜಾದಿನಗಳಲ್ಲಿ ಸೋಪನಹಳ್ಳಿ ಹಳ್ಳದ ಮೂಲಕ ಎಮ್ಮೆ-ದನ ಮೇಯಿಸಿಕೊಂಡು, ಈ ಜಮೀನಿಗೆ ಹೊಂದಿಕೊಂಡಿರುವ ಸೋಪನಹಳ್ಳಿ ಕೆರೆಯಲ್ಲಿ ನೀರು ಕುಡಿಸಿಕೊಂಡು ಬರುವುದು ವಾಡಿಕೆ.

  ಈ ಜಮೀನಿನನ್ನು ಹಲವಾರು ಜನ ಹುಳುಮೆ ಮಾಡುತ್ತಿದ್ದರು, ಇನ್ನೂ ಬಹಳಷ್ಟು ಜಮೀನನಲ್ಲಿ ಬೇಲಿ ಬೆಳೆದಿತ್ತು. ನನಗೆ ಈ ಸರ್ಕಾರಿ ಜಮೀನಿನಲ್ಲಿ ಯಾವುದಾದರೂ ಒಂದು ಉದ್ದಿಮೆ ಆರಂಭಿಸಿದರೆ ಅನೂಕೂಲವಾಗಲಿದೆ ಎಂಬ ಕನಸು ಸುಮಾರು 1980  ರ ಆಸುಪಾಸಿನಲ್ಲಿ ಅನಿಸಿತ್ತು.

 ಅಂದಿನ ಮಹಾರಾಜರು ಈ ಜಮೀನಿನ ಸುತ್ತಲೂ ಕಾವಲುಗಾರರನ್ನು ನೇಮಕ ಮಾಡಿ, ಅವರ  ಒಂದು ಕುಟುಂಬಕ್ಕೆ 30 ಎಕರೆ ಜಮೀನಿನನ್ನು ಉಳುಮೆ ಮಾಡಿಕೊಂಡು ದನ ಮೇಯಿಸಿಕೊಳ್ಳಲು ನೀಡಿದ್ದರು. ಆದರಲ್ಲಿ ಕುಂದರನಹಳ್ಳಿಯ ನಮ್ಮ ಪೂರ್ವಜರ ಕುಟುಂಬವೂ ಒಂದು. ನಮ್ಮನ್ನು ಇಂದು ಕಾವಲರು’ ಎಂದೇ ಕರೆಯುತ್ತಾರೆ.

  ನಮ್ಮ ತಾತ ಸಿದ್ದಯ್ಯಜ್ಜ ಯಾವಾಗಲೂ ಬಾಣಸಂದ್ರದಲ್ಲಿ ಹುಚ್ಚೆಗೌಡ ಅಂತ ಇದ್ದಾರೆ ಅವರಿಗೆ ಈ ಜಮೀನು ಮಹಾರಾಜ ಕೊಟ್ಟಿದ್ದಾರಂತೆ ಎಂದು ಹೇಳುತ್ತಿದ್ದರೂ. ನಮ್ಮ ಕುಟುಂಬದ ಅಣ್ಣ ತಮ್ಮಂದಿರಲ್ಲಿ ಸದಾ ಜಗಳ ಆಗುತಿತ್ತು. ಅಂದರೆ ಈ ಜಮೀನಿನ ಮಾಹಿತಿ ನನಗೆ ಅರಿವಾಗಲೂ ಇದೂ ಒಂದು ಕಾರಣವಾಯಿತು.

  ಕರ್ನಾಟಕ ಸರ್ಕಾರದ ಮಾಜಿ ಸಚಿವ ದಿವಂಗತ ಸಾಗರನಹಳ್ಳಿ ರೇವಣ್ಣನವರು ತಮ್ಮ ಕುಟುಂಬದ ಮೊಮ್ಮಗ, ಅಂದರೆ ರೇವಣ್ಣನವರ ತಾಯಿ ನಮ್ಮ ಮನೆ ಮಗಳು. ನಮ್ಮ ತಾತ ಯಾವಾಗಲೂ ನಮ್ಮ ರೇವಣ್ಣ ಈ ಜಮೀನು ಕೊಡಿಸ್ತಾರೆ ಎಂದು ಹೇಳುತ್ತಿದ್ದರು

  ನಮ್ಮ ತಾತ ಅಂದರೆ ನಮ್ಮ ತಂದೆಯ ತಂದೆ ಸಿದ್ದಯ್ಯ, ಅಜ್ಜಿ ಗಂಗಮ್ಮ ಬೇರೆ ಮನೆಯಲ್ಲಿದ್ದರು, ನಾವೇ ಬೇರೆ ಮನೆಯಲ್ಲಿದ್ದೆವು. ಆಗಿನ ಅತ್ತೆ-ಸೊಸೆ ಜಗಳದಲ್ಲಿ ಕದ್ದು ಮುಚ್ಚಿ ತಾತನ ಮನೆಗೆ ಹೋಗಬೇಕಿತ್ತು. ನಾನು ತಾತನ ಮನೆಗೆ ಹೊಗುತ್ತಿದ್ದೆ. ನಮ್ಮ ತಾತನಿಗೆ ರೇವಣ್ಣನವರ ಗುಣಗಾನ ಬಿಟ್ಟರೆ ಬೇರೆ ಇರಲಿಲ್ಲ.

   ರೇವಣ್ಣನವರು ನಮ್ಮೂರಿನ ಶ್ರೀ ಮಹಾಲಿಂಗಯ್ಯನವರ ಮನೆಗೆ ಬರುತ್ತಿದ್ದರು, ಅವರ ತಂಗಿಯನ್ನೇ ನಮ್ಮ ಮನೆಗೆ ಕೊಟ್ಟಿದ್ದರು ಅವರ ಮನೆಗೂ ಬರುತ್ತಿರಲಿಲ್ಲ, ನಮ್ಮ ತಾತನ ಮನೆಗೂ ಬರುತ್ತಿರಲಿಲ್ಲ. ನಾನು ಚಿಕ್ಕವನಿದ್ದರೂ  ನಮ್ಮ ತಾತನನ್ನು ಕೇಳಿದೆ ಯಾಕೆ ರೇವಣ್ಣನವರು ನಮ್ಮ ಮನೆಗೆ ಬರಲ್ಲ, ನಮ್ಮ ತಾತ ಹೇಳಿದ ಮಾತು ಅವರು ಸಾವ್‌ಕಾರರು ನಮ್ಮಂತ ಬಡವರ ಮನೆಗೆ ಬರಲ್ಲ, ಅವರು ಬರಬೇಕು ಅಂದರೆ ನೀನೂ ಸಾಹುಕಾರನಾಗಬೇಕು ಎನ್ನುತ್ತಿದ್ದರು.

  ಆಗಿನ್ನು ರೇವಣ್ಣನವರು ಸಚಿವರಾಗಿರಲಿಲ್ಲ, ಆದರೂ ಹೆಗ್ಗಳಿಕೆ, ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ಇಡೀ ನಮ್ಮೂರು ಜನ ಅವರ ಮನೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ನಾನು ಮಾತ್ರ ನಮ್ಮ ತಾತ ಕರೆದರು ಹೋಗುತ್ತಿರಲಿಲ್ಲ. ನಮ್ಮ ತಾತ ಕರೆದಾಗ ನಾವು ಬಡವರು ಅವರ ಮನೆಗೆ ಬರಬಾರದು ಎಂದು ಹೇಳುತ್ತಿದ್ದೆ. ಈ ಸಾವ್‌ಕಾರ್ರು- ಬಡವ’ ಒಂದು ಮಾತು ನನಗೆ ಎಲ್ಲೋ ಕೊರೆಯುತ್ತಿತ್ತು. ಈಗಲೂ ಕೊರೆಯುತ್ತಲೇ ಇದೆ. ಬಹುಷಃ ನಾನೂ ರೀತಿ ಆಗಲೂ ಇದು ಒಂದು ಕಾರಣವಾಯಿತು ಅನ್ನಿಸುತ್ತಿದೆ.

  ರೇವಣ್ಣನವರು ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಸರ್ಕಾರದಲ್ಲಿ ಸಚಿವರಾದರು, ನನಗೆ ಎಸ್.ಐ.ಟಿಯಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸಲು ಕೇಳಲು ಅವರ ಮನೆಗೆ ಹೋದೆ. ನಮ್ಮ ತಂದೆ ನಾನು ಹೋಗಿದ್ದೆವು. ನಾನು ಅವರನ್ನು ನೋಡಿದ್ದೆ, ಆದರೆ ಜೀವಮಾನದಲ್ಲಿ ಮಾತನಾಡುವ ಅವಕಾಶ ನನಗೆ ಸಿಕ್ಕಿರಲಿಲ್ಲ.

  ಸಚಿವರು ಅಂದರೆ ಬಹಳಷ್ಟು ಜನ ಇದ್ದರೂ ನನಗೆ ಅವರ ಪರಿಚಯವಿರಲಿಲ್ಲ, ಆದರೂ ರೇವಣ್ಣನವರು ಅಲ್ಲಿದ್ದ ಜನಕ್ಕೆ ಹೇಳಿದ್ದು ನನಗೆ ಇಂದೂ ಕಿವಿ ಗೊಯ್’ ಅನ್ನುತ್ತಿದೆ. ನೋಡ್ರಿ ಇವನು ನಮ್ಮ ತಾಯಿ ಮನೆ ಹುಡುಗ ಬಹಳ ಚಾಲೂಕು ಇದ್ದಾನೆ, ನಮ್ಮ ಮಹಾಲಿಂಗ, ಚನ್ನಬಸವ ಹೇಳ್ತಾರೆ, ಎಲ್ಲಾ ಹಾಳಾಗಿ ಹೋಗಿ ಬಿಟ್ಟರು, ನನಗೆ ಇವರ ಮನೆಯಿಂದ ಹಾಲು ಕರೆದು ನೊರೆ ಹಿಂಗುವ ಮೊದಲೇ ತಂದು ಕುಡಿಸ್ತಾ’ ಇದ್ದರು. ನನಗೆ ಕಣ್ಣೀರು ಬರುತ್ತದೆ ನನ್ನ ತಂಗಿ ಬೇರೆ ಕೊಟ್ಟಿದ್ದೀವೆ.

  ಆಮೇಲೆ ನನಗೆ ಶುರು ಮಾಡಿದ್ದರು ಇವನು ಎಸ್.ಎಸ್.ಎಲ್.ಸಿ ಓದಿ ಎರಡು ವರ್ಷ ಬಿಟ್ಟು ತೋಟ ಗೇಯ್ದು, ಗುಬ್ಬಿ ಕಾಲೇಜಿಗೆ ಸೇರಿ ಪಸ್ಟ್ ಕ್ಲಾಸ್ ಬಂದವನೇ, ಊರಲ್ಲಿ ಈಗಲೇ ಪುಡಿ ರಾಜಕೀಯ ಮಾಡುತ್ತಾನೆ, ಯಾಕೋ ಆವಾಗ ಬರಲಿಲ್ಲ ಬೋ— ಮಗ, ಒಡೆಯೋದು ಒಂದು ತಪ್ಪಿತು.

 ನನಗೆ ಬಹಳ ಖುಷಿಯಾಯಿತು ಜೊತೆಗೆ ನಮ್ಮ ತಾತ ಸಿದ್ದಯ್ಯಜ್ಜನ ಮೇಲೆ ಕೋಪನೂ ಬಂತು, ಆದರೂ ನಾನು ಸುಮ್ಮನೆ ಇದ್ದರೂ ಆಗಿತ್ತು ಬಿದರೆಹಳ್ಳ ಕಾವಲ್ ಜಮೀನು ಎಂದೆ, ಶುರು ಮಾಡಿದರೂ ಅವನೊಬ್ಬ ಅವನೇ ಗಂಗಸಂದ್ರದ ಬಸವರಾಜ ಇಲ್ಲಿ ಏನೋ ಮಾಡಸ್ತಾನಂತೆ ಸುಭಾಷಿತ ಮೊಳಗಿದವು. ನನಗೆ ಆವಾಗ ಜಮೀನಿನಲ್ಲಿ ಏನಾದರೂ ಮಾಡಲು ಇನ್ನೂ ಒಬ್ಬರು ಅವರೆ ಎನ್ನುವ ವಿಚಾರ ತಿಳಿಯಿತು.

 ಪಾಪ ರೇವಣ್ಣನವರು ಬಹಳ ದಿವಸ ಸಚಿವರಾಗಿ ಉಳಿಯಲಿಲ್ಲ, ಇದ್ದರೆ ಅವರು ಜಮೀನಿನನ್ನು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಸರ್ಕಾರಿ ಜಮೀನಿಗೆ ಮಹೂರ್ತ ಇಡಲು ನನ್ನ ಮನಸ್ಸು ಅಂದಿನಿಂದಲೇ ಶುರು ಮಾಡಿತು.