19th April 2024
Share

TUMAKURU: SHAKTHIPEETA FOUNDATION

ವಿಶ್ವದಲ್ಲಿ ಕೊರೊನಾ ಮಾಹಾಮಾರಿ ರುದ್ರತಾಂಡವ ಮಾಡಿ ಜನರಿಗೆ ಏಕಕಾಲದಲ್ಲಿ ಕೊರೊನಾ ವೈರಾಗ್ಯ, ಸ್ಮಶಾನ ವೈರಾಗ್ಯ ಎರಡನ್ನು ಕೊಟ್ಟು ಆ ಶಕ್ತಿದೇವತೆ ಆಟ ಆಡಿಸುತ್ತಿರುವುದು ನಿಜಕ್ಕೂ ಅದ್ಭುತ. ಶ್ರೀಮಂತ-ಬಡವ ಹೀಗೆ ಎಲ್ಲಾ ವರ್ಗದ ಜನರ ಬೇಡಿಕೆ ಒಂದೇ ದೇವರೇ ಕಾಪಾಡು’.

 ಇಷ್ಟೆ ಜೀವನದ ಗುಟ್ಟು. ಇಷ್ಟಕ್ಕೆ ಎಷ್ಟು ಆಟ ಆಡಿದೆವು, ಅದೆಷ್ಟು ಮನೆಹಾಳು ಮಾಡಿ ಸಂಪಾದಿಸಿದೆವು,  ನಮ್ಮ ಜೊತೆ ಈಗ ಇರುವುದು ಇದೊಂದೇ ಮನೆ, ಮನೇಯೇ  ದೇವಾಲಯ – ಮನೇಯೇ  ಸ್ವರ್ಗ – ಮನೇಯೇ  ಸರ್ವಸ್ವ’ ಎಂದು ಆದಷ್ಟು ಜೀವನದಲ್ಲೇ ನೆಮ್ಮದಿ ಕಂಡುಕೊಳ್ಳಲೂ ಎಲ್ಲರೂ ಶ್ರಮಿಸುತ್ತಿದ್ದಾರೆ. ಏಕೆಂದರೆ ನಾಳೆ ಯಾರು ಬದುಕುತ್ತಾರೆ? ಯಾರು ಸಾಯುತ್ತಾರೆ? ಎಂಬ ಕೊರಗಿನೊಂದಿಗೆ ಕೊರೊನಾ ಪೆಡಂಭೂತ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ.

 ಇಂಥಹ ಸಂದರ್ಭದಲ್ಲೂ ಇನ್ನೂ ಅದೆಷ್ಟೋ ಜನ ನಾವು ಗೃಹ ಬಂಧನದಲ್ಲಿ ಇರಲು ನಮಗೆ ಒಂದು ಸ್ವಂತ ಮನೆ ಇಲ್ಲವಲ್ಲ’ ಎಂದು ಪರಿತಪ್ಪಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರೊಳಗೆ ದೇಶದಲ್ಲಿನ ಎಲ್ಲರಿಗೂ ಸ್ವಂತ ಮನೆ ಆಗಲೇ ಬೇಕು ಎಂದು ಘೋಶಿಸಿದರೂ ಯಾವುದೇ ರಾಜ್ಯ ಸರ್ಕಾರಗಳು ಗುರಿ ತಲುಪಿಲ್ಲ. ‘ನಮ್ಮ ಕರ್ನಾಟಕ ಏಕೆ ಮಾದರಿ ರಾಜ್ಯವಾಗಬಾರದು,. 

 ಕನಿಷ್ಟ ಪಕ್ಷ ವಸತಿ ಇಲ್ಲದವರಿಗೆ ಒಂದು ನಿವೇಶನ ಗುರುತಿಸಿ, ಹಕ್ಕು ಪತ್ರ ನೀಡಲು ಇನ್ನೂ ಸಾಧ್ಯವಾಗಿಲ್ಲ ಎಂದರೆ ಇದಕ್ಕಿಂತ ಧೌರ್ಭಾಗ್ಯ ಇನ್ನೇನಿದೆ. ಕೇಂದ್ರ ಸರ್ಕಾರ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸಿ, ಇವೆಲ್ಲದರ ಮೇಲ್ವಿಚಾರಣೆ ನಡೆಸಿ ಎಂದು ಅಧಿಕಾರ ನೀಡಿದೆ. ಪ್ರತಿಫಲ ಏನು ಎಂಬುದೇ ನಿಗೂಢ ರಹಸ್ಯ?

  ಇದೂವರೆಗೂ ರಾಜ್ಯದ ಪ್ರತಿ ಗ್ರಾಮದಲ್ಲಿ/ ನಗರ ಪ್ರದೇಶಗಳಲ್ಲಿ ಪ್ರತಿ ಬಡಾವಣೆಯಲ್ಲಿ  ‘ಯಾರಿಗೆ ಮನೆಯಿಲ್ಲ – ಯಾರಿಗೆ ನಿವೇಶನವಿಲ್ಲ’ ನಿವೇಶನ ಇಲ್ಲದವರಿಗೆ ನಿವೇಶನ ನೀಡಲು ನಿರ್ಧಿಷ್ಟ ಸರ್ವೇ ನಂಬರಿನಲ್ಲಿರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡಬಹುದಾಗಿದೆ ಅಥವಾ ಸರ್ಕಾರಿ ಜಮೀನು ಇಲ್ಲದೆ ಕಡೆ ನಿರ್ಧಿಷ್ಟ ಸರ್ವೇ ನಂಬರಿನಲ್ಲಿರುವ ಖಾಸಗಿ ಜಮೀನು ಕೊಂಡುಕೊಂಡು ನಿವೇಶನ ನೀಡಬಹುದು ಅಥವಾ ಇಂಥಹ ನಿರ್ಧಿಷ್ಟ ಸರ್ವೇ ನಂಬರಿನಲ್ಲಿರುವ ಖಾಸಗಿ ಜಮೀನು ಭೂ ಸ್ವಾಧೀನ ಪಡಿಸಿಕೊಂಡು ನಿವೇಶನ ನೀಡಲು ಇಷ್ಟು ಹಣ ಬೇಕಾಗುವುದು, ಸರ್ಕಾರ ಈಗ ನಿಗದಿ ಮಾಡಿರುವ ಹಣಕ್ಕೆ ಜಮೀನು ಸಿಗುವುದಿಲ್ಲ, ಎಂದು ಇದೂವರೆಗೂ ಯಾವುದೇ ಸಮಿತಿಯಲ್ಲಿ, ಯಾವುದೇ ಜಿಲ್ಲೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಿರುವ ಉದಾಹರಣೆ ಇದ್ದಲ್ಲಿ ಅಂಥಹ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳಿಗೆ ‘ನಾಗರೀಕ ಸನ್ಮಾನ’ಮಾಡಲೇ ಬೇಕು.

  ಈಗ ಬಹುತೇಕ ಅಧಿಕಾರಿಗಳು ಬಿಡುವಾಗಿದ್ದಾರೆ, ಪ್ರತಿ ಗ್ರಾಮದಲ್ಲಿರುವ, ಪ್ರತಿ ಬಡಾವಾಣೆಯಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಯಾವುದೇ ರಾಜಕೀಯ ಮಾಡುತ್ತಿಲ್ಲ, ಎಲ್ಲರೂ ದಾನಿಗಳಾಗಿದ್ದಾರೆ ತಮ್ಮ ಕೈಲಾದ ಸಹಾಯ ಮಾಡುವ ಮನಸ್ಥಿತಿ ಬಂದಿದೆ.

 ಎಲ್ಲರಿಗೂ ಕೊರೊನಾ ಮಹಾಮಾರಿ ಬಿಡುವು ಕೊಡಿಸಿದ್ದಾಳೆ. ಈಗ ತಮ್ಮ ಗ್ರಾಮದಲ್ಲಿ, ತಮ್ಮ ಬಡಾವಾಣೆಯಲ್ಲಿ ಯಾರಿಗೆ ಮನೆಯಿಲ್ಲಿ, ಯಾರಿಗೆ ನಿವೇಶನವಿಲ್ಲ, ಯಾವ ಜಮೀನಿನನಲ್ಲಿ ಹೇಗೆ ನಿವೇಶನ ನೀಡಬಹುದು ಎಂಬ ನಿರ್ಧಿಷ್ಠ ದಾಖಲೆ ಸಹಿತ ಸಲಹೆ, ಮಾಹಿತಿಯನ್ನು ಸರ್ಕಾರಕ್ಕೆ ಎಲ್ಲರೂ ಒಗ್ಗಟ್ಟಾಗಿ ಸಲ್ಲಿಸುವ ಮೂಲಕ ಬಡವರ ಸೇವೆ- ದೇವರ ಸೇವೆ’ ಎಂದು ಮಾಡಬಹುದಲ್ಲವೇ?

  ಓಟರ್ ಲಿಸ್ಟ್ ಮಾದರಿಯಲ್ಲಿ ತಮ್ಮ ಗ್ರಾಮದಲ್ಲಿ ಅಥವಾ ತಮ್ಮ ಬಡಾವಾಣೆಯಲ್ಲಿ ಇಷ್ಟು ಕುಟುಂಬಗಳು ವಾಸವಿದ್ದಾರೆ. ಅವುಗಳಲ್ಲಿ ಇಷ್ಟು ಕುಟುಂಬಗಳಿಗೆ ನಿವೇಶನವಿಲ್ಲ, ಇಷ್ಟು ಕುಟುಂಬಗಳಿಗೆ ನಿವೇಶನವಿದ್ದರೂ ಮನೆಯಿಲ್ಲ,  ಶೇಕಡವಾರು ಇಷ್ಟು ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂಬ ಕರಾರು ವಕ್ಕಾದ ಫಲಾನುಭವಿಗಳ ಪಟ್ಟಿಯೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾಹಿತಿಯನ್ನು ‘ಫೋಟೊದೊಂದಿಗೆ ಸೋಶಿಯಲ್ ಮೀಡಿಯಾ’ ಮೂಲಕ ಹಂಚಿಕೊಳ್ಳ ಬಹುದಲ್ಲವೇ? 

  ಇನ್ನೂ ಮುಂದೆ ಪ್ರತಿ ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಅಥವಾ ಎಲ್ಲಾ ಹಂತದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶೇಕಡವಾರು ಇಷ್ಟು ಜನರಿಗೆ ಸೌಲಭ್ಯ ಒದಗಿಸಿದ್ದೇವೆ, ಇನ್ನೂ ಬಾಕಿ ಇಷ್ಟು ಜನರಿದ್ದಾರೆ, ಎಂಬ ನಿರ್ಧಿಷ್ಠ ಅಂಕಿ ಅಂಶಗಳೊಂದಿಗೆ, ನಮ್ಮ ಗ್ರಾಮದಲ್ಲಿ ಅಥವಾ ನಮ್ಮ ಬಡಾವಣೆಯಲ್ಲಿ ನಿವೇಶನ, ವಸತಿ ರಹಿತರು ಶೂನ್ಯ, ಶೇ 100 ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂಬು ಗುರಿ ಮುಟ್ಟುವವರೆಗೂ ಏಳಿ, ಎದ್ದೇಳಿ ದಾನಿಗಳೇ?  

ಇದಕ್ಕಿಂತ ದಾನ ಇನ್ಯಾವುದಿದೆ. ಎಷ್ಟೇ ಹಣ ಬೇಕಾದರೂ ಕೊಡಲು ಸಿದ್ಧ ಎಂದು ಮಾನ್ಯ ಪ್ರಧಾನಿಯವರಾದ ಶ್ರೀ  ನರೇಂದ್ರ ಮೋದಿಯವರು ಕರೆ ನೀಡಿದರೆ, ನಮ್ಮ ರಾಜ್ಯದಲ್ಲಿ ಶ್ರೀ ನಳೀನ್ ಕುಮಾರ್ ಕಟೀಲ್, ಶ್ರೀ ಡಿ.ಕೆ.ಶಿವಕುಮಾರ್, ಶ್ರೀ ಕುಮಾರಸ್ವಾಮಿ ಹೀಗೆ ಸರ್ವಪಕ್ಷಗಳ ಅಧ್ಯಕ್ಷರು ನಾಯಕತ್ವ ವಹಿಸಿದಲ್ಲಿ ಗುರಿ ಮುಟ್ಟ ಬಹುದೇ?